
ಮಂಡ್ಯ (ಆ.14): ನನ್ನನ್ನು ಬೆಂಬಲಿಸಿ ನನ್ನ ಬೆನ್ನ ಹಿಂದೆ ನಿಂತರವನ್ನು ಯಾವತ್ತು ಕೈ ಬಿಡಲ್ಲ ಅವರ ಬೆಂಬಲಕ್ಕೆ ಇದ್ದೆ ಇರುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಶ್ರೀ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವಾರ್ಷಿಕೋತ್ಸವ ಹಾಗೂ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಆಪ್ತ ಇಂಡುವಾಳು ಸಚ್ಚಿದಾನಂದ ಅವರಿಗೆ ಬೆಂಬಲ ಸೂಚಿಸಿದರು.
ಈ ವೇಳೆ ಸಚ್ಚಿದಾನಂದ ಅವರನ್ನು ಹಾಡಿ ಹೊಗಳಿದ ಸುಮಲತಾ, ಲೋಕಸಭಾ ಚುನಾವಣೆ ವೇಳೆ ನನ್ನನ್ನು ಬೆಂಬಲಿಸಿದ ಕಾರಣಕ್ಕೆ ಕಾಂಗ್ರೆಸ್ ಸಚ್ಚಿದಾನಂದರನ್ನು ವಜಾ ಮಾಡಿತ್ತು. ಆದರೂ ಸಚ್ಚಿ ನನ್ನ ಜೊತೆ ನಿಂತು ನನ್ನ ಗೆಲುವಿಗೆ ಶ್ರಮಿಸಿದ್ದನು. ಹಾಗಾಗಿ ನನಗೆ ಬೆಂಬಲ ಕೊಟ್ಟವರನ್ನು ನಾನು ಯಾವತ್ತು ಮರೆಯುವುದಿಲ್ಲ. ಸಚ್ಚಿದಾನಂದ ಬೆಂಬಲಕ್ಕೆ ನಾನಿರುತ್ತೇನೆ. ನಾನು ಕುಟುಂಬ ರಾಜಕಾರಣ ಮಾಡಲ್ಲ. ಸಚ್ಚಿದಾನಂದ ನಮ್ಮ ಮನೆ ಮಗ ಸಚ್ಚಿ ಅಥವಾ ಅಭಿಷೇಕ್ ಇಬ್ಬರಲ್ಲಿ ಬೆಂಬಲ ಯಾರಿಗೆ ಎಂದು ಕೇಳಿದರೆ ನನ್ನ ಬೆಂಬಲ ಸಚ್ಚಿಗೆ ಎಂದರು.
ಸ್ಥಿರ ಸರ್ಕಾರ ಕಾಂಗ್ರೆಸ್ನಿಂದಷ್ಟೇ ಸಾಧ್ಯ: ಚಲುವರಾಯಸ್ವಾಮಿ
ಸುಮಲತಾ ಆಪ್ತ ಸಚ್ಚಿದಾನಂದರನ್ನು ಬಿಜೆಪಿ ಆಹ್ವಾನಿಸಿದ ಸಚಿವ ಅಶೋಕ್: ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವಾರ್ಷಿಕೋತ್ಸವ ಹಾಗೂ ಕೆಂಪೇಗೌಡ ಜಯಂತಿ ನೆಪದಲ್ಲಿ ಇಂಡುವಾಳು ಸಚ್ಚಿದಾನಂದ ಶಕ್ತಿ ಪ್ರದರ್ಶನ ನಡೆಸಿದಂತಿತ್ತು. 7-8 ಸಾವಿರ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಕೆ. ಗೋಪಾಲಯ್ಯ, ಡಾ.ಕೆ.ಸಿ. ನಾರಾಯಣಗೌಡ ಕೂಡ ಇದ್ದರು.
ಒಂದು ವರ್ಷಗಳಲ್ಲಿ ಟ್ರಸ್ಟ್ ಮುಖಾಂತರ ನಡೆದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಂದಾಯ ಆರ್ ಅಶೋಕ್ ಇಂಡುವಾಳು ಸಚ್ಚಿದಾನಂದ ಅವರನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿದರು. ನಾನು ಒಂದು ತಿಂಗಳಿನಿಂದ ಸಚ್ಚಿದಾನಂದ ಹಾಗೂ ಸುಮಲತಾ ಅವರನ್ನು ಕೇಳುತ್ತಿದ್ದೇನೆ. ನಮ್ಮ ಪಾರ್ಟಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಪಾರ್ಟಿ. ಬೇಗ ಪಕ್ಷ ಸೇರುವ ಮೂಲಕ ದಡ ಸೇರಿಕೊ ಎಂದು ಸಚ್ಚಿದಾನಂದಗೆ ಆಹ್ವಾನ ನೀಡಿದರು.
ಕೆಆರ್ಎಸ್ ಅಣೆಕಟ್ಟೆಗೆ ಬಾಗಿನ ಸಲ್ಲಿಕೆ: ಕೆಆರ್ಎಸ್ ಅಣೆಕಟ್ಟೆಗೆ ಸಂಸದೆ ಸುಮಲತಾ ಅಂಬರೀಶ್ ಶನಿವಾರ ಭೇಟಿ ನೀಡಿ ಬಾಗಿನ ಅರ್ಪಿಸಿದರು. ಸಂಪ್ರದಾಯದಂತೆ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಸಲ್ಲಿಸುವ ವೇಳೆ ಸಂಸದೆ ಸುಮಲತಾ ದೆಹಲಿಯಲ್ಲಿ ಸಂಸತ್ ಅಧಿವೇಶನ ಇದ್ದ ಕಾರಣ ಗೈರಾಗಿದ್ದರು. ಶನಿವಾರ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಬಾಗಿನ ಸಮರ್ಪಿಸಿದರು. ನಂತರ ಮಾತನಾಡಿದ ಸಂಸದರು, ನಾನು ಸಂಸದೆಯಾಗಿ ಮೂರು ವರ್ಷವಾಗಿದೆ.
ದೇವರ ದಯೆಯಿಂದ ಮೂರು ವರ್ಷವೂ ಭರ್ತಿಯಾಗಿದೆ. ಅಣೆಕಟ್ಟೆಪ್ರತಿ ಬಾರಿ ಭರ್ತಿಯಾಗಬೇಕು. ಜಿಲ್ಲೆಯ ರೈತರು ಸುಭೀಕ್ಷವಾಗಿರಬೇಕು ಎಂದು ಹಾರೈಸಿದರು. ಜಿಲ್ಲೆಯ ಜನರಿಗೆ ಮಳೆಯಿಂದ ಅನಾಹುತಗಳು ಸಂಬಂಧಿಸಿವೆ. ಇದರ ಮಧ್ಯೆ ಕೆಆರ್ಎಸ್ ತುಂಬಿರುವುದು, ಮೈಷುಗರ್ ಆರಂಭಿಸಿರುವುದು ಖುಷಿ ಕೊಟ್ಟಿದೆ. ನಾನು ರೈತರಿಗೆ ಕೊಟ್ಟಮಾತನ್ನು ಉಳಿಸಿಕೊಂಡಿದ್ದೇನೆ. ಇದು ಈ ವರ್ಷದಲ್ಲಿ ಅತಿ ದೊಡ್ಡ ಸಂತೋಷ ಎಂದರು.
ಯಾರನ್ನೋ ಮೆಚ್ಚಿಸಲು ಎಚ್ಡಿಕೆ ಕಣ್ಣೀರು ಹಾಕೋ ನಾಟಕವಾಡಿಲ್ಲ: ಪುಟ್ಟರಾಜು
ಟಾಸ್ಕ್ ಪೋರ್ಸ್ ರಚಿಸಬೇಕು: ಕೆಆರ್ಎಸ್ ಅಣೆಕಟ್ಟೆಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಸರ್ಕಾರ ಟಾಸ್ಕ್ ಪೋರ್ಸ್ ಸಮಿತಿ ರಚಿಸಬೇಕು. ಇಲ್ಲಿ ಏನೇನೂ ಆಗುತ್ತೆ ಎನ್ನುವ ಮಾಹಿತಿ ತಿಳಿಯಬೇಕು ಎಂದರು. ಇತ್ತೀಚೆಗೆ ಜಲಶಕ್ತಿ ಸಚಿವರು ಹಾಗೂ ಒಂದು ತಂಡ ಇಲ್ಲಿಗೆ ಬಂದು ಪರಿಶೀಲನೆ ಮಾಡಿ ಹೋಗಿದ್ದರು. ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು. ಆದರೆ, ಇಲ್ಲಿ ಅಕ್ರಮವಾಗಿ ನಡೆಯುವ ಗಣಿಗಾರಿಕೆ ನಡೆಯುತ್ತಿರುವ ವಿಚಾರ ರೈತರಿಂದಲೇ ಬರುತ್ತಿದೆ. ಆದ್ದರಿಂದ ಟಾಸ್ಕ್ ಪೋರ್ಸ್ ಸಮಿತಿ ರಚನೆಗೆ ಮುಂದಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.