ಬಾಗಲಕೋಟೆ ಲೋಕಸಭೆ ಚುನಾವಣೆ: ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಕಾಂಗ್ರೆಸ್‌ ಟಿಕೆಟ್ ವಂಚಿತೆ ವೀಣಾ

By Kannadaprabha NewsFirst Published Mar 26, 2024, 9:02 AM IST
Highlights

ಏನೇ ನಡೆದರೂ ನಾನು ಈ ಬಾರಿ ಕಣದಲ್ಲಿರುವುದು ಫಿಕ್ಸ್. ನನ್ನ ಪತಿ ಕಾಂಗ್ರೆಸ್ ಪಕ್ಷದ ಶಾಸಕರು ಇರಬಹುದು, ಅವರನ್ನು(ಶಾಸಕ) ಹೊರಗಿಟ್ಟೂ ಚುನಾವಣೆ ಮಾಡುವ ಶಕ್ತಿ ನನಗಿದೆ. ಅವರನ್ನು ನಾನು ಇದರಲ್ಲಿ ಎಳೆದು ತರಲ್ಲ. ಅವರಿಗೆ ನಾನೆಂದೂ ಅಡ್ಡಿಪಡಿಸಲ್ಲ: ವೀಣಾ ಕಾಶಪ್ಪನವರ 

ಬಾಗಲಕೋಟೆ(ಮಾ.26): ಯಾವುದೇ ಕಾರಣಕ್ಕೂ ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ, ನನ್ನ ಸ್ಫರ್ಧೆ ಖಚಿತ ಎಂದು ಕಾಂಗ್ರೆಸ್‌ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ ಸ್ಪಷ್ಟಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ನಡೆದರೂ ನಾನು ಈ ಬಾರಿ ಕಣದಲ್ಲಿರುವುದು ಫಿಕ್ಸ್. ನನ್ನ ಪತಿ ಕಾಂಗ್ರೆಸ್ ಪಕ್ಷದ ಶಾಸಕರು ಇರಬಹುದು, ಅವರನ್ನು(ಶಾಸಕ) ಹೊರಗಿಟ್ಟೂ ಚುನಾವಣೆ ಮಾಡುವ ಶಕ್ತಿ ನನಗಿದೆ. ಅವರನ್ನು ನಾನು ಇದರಲ್ಲಿ ಎಳೆದು ತರಲ್ಲ. ಅವರಿಗೆ ನಾನೆಂದೂ ಅಡ್ಡಿಪಡಿಸಲ್ಲ. ಮಾ.28ಕ್ಕೆ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದಿದ್ದಾರೆ. ಅಲ್ಲಿ ಟಿಕೆಟ್ ಬದಲಾಯಿಸಿ ನಮಗೆ ಕೊಡಬೇಕು. ಈ ಹಿಂದೆ ಜಿಲ್ಲೆಯಲ್ಲಿ ಟಿಕೆಟ್ ಬದಲಾಯಿಸಿದ ಉದಾಹರಣೆಗಳಿವೆ ಎಂದರು.

ಒಂದೊಮ್ಮೆ ಟಿಕೆಟ್ ನೀಡದೇ ಹೋದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ ಅವರು, ಸೂಕ್ತವಾದ ನ್ಯಾಯ ಸಿಕ್ಕರೆ ಸುಮ್ಮನಿರುತ್ತೇನೆ. ಅನ್ಯಾಯವಾದರೆ ಜಿಲ್ಲೆಯ ಜನರೊಂದಿಗಿದ್ದು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

LOK SABHA ELECTION 2024: ಬಾಗಲಕೋಟೆಯಲ್ಲಿ ವೀಣಾ ಬಿಟ್ಟು ಸಂಯುಕ್ತಾ ಹೆಸರು ಯಾಕೆ?, ಕಾಣದ ಕೈಗಳ ಆಟ ಇದೆಯಾ?

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾನು ಟಿಕೆಟ್ ಕೊಡಿಸಿದೆ. ಅವರಿಗೆ, ಇವರಿಗೆ ಕೊಡಿಸಿದೆ ಅಂತ ಕೆಲವರು ಹೇಳುತ್ತಾರೆ. ಟಿಕೆಟ್‌ ಅನ್ನು ಯಾರಿಗೆ ಯಾರೂ ಕೊಡಿಸೋಕೆ ಆಗಲ್ಲ, ಕಾಶಪ್ಪನವರ ಕುಟುಂಬದ ಕೊಡುಗೆ ಈ ಪಕ್ಷದ ಮೇಲೆ ಇದೆ ಎಂದೇ ಈ ಹಿಂದೆ ಕೂಡ ಟಿಕೆಟ್ ಕೊಟ್ಟಿದ್ದರು. ಅದೇ ಅರ್ಹತೆ ಮೇಲೆ ಈಗಲೂ ಟಿಕೆಟ್ ಕೇಳಿದ್ದೇವೆ ಎಂದರು.

ತಾಕತ್ ಇದ್ದುದ್ದರಿಂದಲೇ ಟಿಕೆಟ್ ಕೇಳಿದ್ದೇನೆ. ಯಾರು ತಾಕತ್ ಬಗ್ಗೆ ಮಾತನಾಡುತ್ತಾರೆ, ಅವರಿಗೆ ಹೇಳುತ್ತೇನೆ. ನನಗೆ ತಾಕತ್ ಇದೆ. ನನ್ನ ಪತ್ನಿ ವಿದ್ಯಾವಂತಳಿದ್ದಾಳೆ. ವಿಷಾಧಕರ ಸಂಗತಿ ಅಂದ್ರೆ ಸ್ಕ್ರೀನಿಂಗ್ ಕಮೀಟಿಗೆ ವೀಣಾ ಹೆಸರು ಕಳಿಸದೇ ಇರೋದು. ಜಿಲ್ಲೆಯ ಶಾಸಕರು ನಮಗೆ ವಿರೋಧ ಮಾಡುತ್ತಾರೆ ಅನ್ನೋ ವದಂತಿ ಇದೆ. ಯಾಕೆ ನಮಗ್ಯಾಕೆ ವಿರೋಧ?, ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಜನ ಪಕ್ಷೇತರರಾಗಿ ನಿಲ್ಲಲು ಕರೆಯುತ್ತಿದ್ದಾರೆ, ಬಹಳ ಜನ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಮಾಡಲಿ ನೋಡೋಣ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.  

click me!