
ಉಡುಪಿ (ಫೆ.01): ಗುಜರಾತಿನಿಂದ ಪಶ್ಚಿಮ ಬಂಗಾಳದವರೆಗೆ ಒಬ್ಬನೇ ಒಬ್ಬ ಮೀನುಗಾರ ಸಮುದಾಯದ ಸಂಸದ ಇಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಹಿಂದುಳಿದ ಮೀನುಗಾರ ವರ್ಗಕ್ಕೆ ನ್ಯಾಯ ಒದಗಿಸಿಕೊಡುತ್ತದೆ ಎಂಬ ವಿಶ್ವಾಸ ಇದೆ. ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನಾನು ಅರ್ಹ ಎಂದು ಭಾವಿಸಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಅಥವಾ ಪಕ್ಷ ಬೇರೆ ಅರ್ಹರಿಗೆ ಟಿಕೆಟ್ ಕೊಟ್ಟರೂ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದರು.
ದೇಶದ ಮೀನುಗಾರರ ಸಮಸ್ಯೆಯ ಬಗ್ಗೆ ಸಂಸತ್ ನಲ್ಲಿ ಮಾತನಾಡಲು ಯೋಗ್ಯ ವ್ಯಕ್ತಿ ಬೇಕು ಎಂಬುದು ಮೀನುಗಾರರಿಗೆ ಮನವರಿಕೆ ಆಗಿದೆ. ಮೀನುಗಾರರ ಸಮಸ್ಯೆಯನ್ನು ಸರ್ಕಾರಗಳ ಮುಂದೆ ಸಮರ್ಥವಾಗಿ ಮಂಡಿಸುವ ಅನುಭವ ಜನಪ್ರತಿನಿಧಿಗೆ ಬೇಕಾಗುತ್ತದೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ನನ್ನ ಕಡೆಗೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ನಾನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿ ಎಂದು ಪಕ್ಷದ ಹಿರಿಯ ನಾಯಕರ ಬಳಿ ಹೇಳಿದ್ದೇನೆ ಎಂದರು. ಕಳೆದ ಆರು ತಿಂಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ 24 ಜಿಲ್ಲೆಯಲ್ಲಿ ಮೀನುಗಾರ ಮುಖಂಡರ ಸಭೆ ಮಾಡಿದ್ದೇನೆ. ವಿಶೇಷವಾಗಿ ಉಡುಪಿ - ಚಿಕ್ಕಮಗಳೂರಿನಲ್ಲಿ 6,000 ಬಿಜೆಪಿಯ ಕಾರ್ಯಕರ್ತರು ಹಾಗು ಮುಖಂಡರನ್ನು ಭೇಟಿ ಮಾಡಿದ್ದೇನೆ. ಇಡೀ ರಾಜ್ಯದ ಮೀನುಗಾರರು ನಾನು ಅಭ್ಯರ್ಥಿಯಾಗಬೇಕೆಂದು ಬಯಸಿದ್ದಾರೆ ಎಂದರು.
ಸಂಸದ ಡಿಕೆಸು ಸೋಲಿಸುವರೆಗೂ ಬಾಲಕೃಷ್ಣ ವಿರಮಿಸಲ್ಲ: ಮಾಜಿ ಶಾಸಕ ಮಂಜುನಾಥ್
ಟಿಕೆಟ್ ನೀಡಿ: ರಾಜ್ಯದ 8 ಲೋಕಸಭಾ ಕ್ಷೇತ್ರದಲ್ಲಿ ಮೀನುಗಾರ ಸಮಾಜಕ್ಕೆ ಸೇರಿದ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಇದುವರೆಗೂ ಯಾವ ಕ್ಷೇತ್ರದಲ್ಲೂ ಈ ಸಮಾಜದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಈ ಸಮಾಜಕ್ಕೆ ಸೇರಿದ ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಶಿರಸಿ ತಾಲೂಕು ಗಂಗಮತಸ್ಥರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದಿನೇಶಕುಮಾರ್ ಮಶಾಲ್ಡಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರ ಸಮಾಜದಲ್ಲಿ ಗಂಗಾಮತ, ಬೆಸ್ತ, ಮೊಗವೀರ, ಕೋಲಿ, ಕಬ್ಬಲಿಗ, ಅಂಬಿಗ ಮುಂತಾದ 39 ಪರ್ಯಾಯ ಪದಗಳಿಂದ ರಾಜ್ಯದಲ್ಲಿ ನಮ್ಮ ಜನಾಂಗವನ್ನು ಗುರುತಿಸುತ್ತಾರೆ.
ದತ್ತಪೀಠವು ನೂರಕ್ಕೆ ನೂರು ಹಿಂದು ದೇವಾಲಯವೇ: ಸಿ.ಟಿ.ರವಿ
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅತಿಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಾಗಿರುವ ನಮ್ಮದು ರಾಜ್ಯದಲ್ಲಿ ಒಟ್ಟು 6೦ ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯಿದೆ. ಈ ಸಮುದಾಯದಲ್ಲಿ ಗುರುತಿಸಿಕೊಂಡು ಮೀನುಗಾರರ ಹಾಗೂ ಹಿಂದುಳಿದ ವರ್ಗದ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಮತ್ತು ವಿಕಾಸಕ್ಕಾಗಿ ಪ್ರಮೋದ ಮಧ್ವರಾಜ ಶ್ರಮಿಸಿದ್ದಾರೆ. ರಾಷ್ಟ್ರದ ದಾರ್ಶನಿಕ ರಾಜಕಾರಣಿ, ಸಂತಸದೃಶ ಜನನಾಯಕ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಚಿಂತನೆ ರಾಜಕೀಯ ನಿಲುವು ಮತ್ತು ಘನ ನಾಯಕತ್ವಕ್ಕೆ ನಿಷ್ಠರಾಗಿರುವ ಪ್ರಮೋದ್ ಮಧ್ವರಾಜ್, ನಮ್ಮ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡುವ ಭರವಸೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅರವಿಂದ ತೇಲಗುಂದ ಕೋರ್ಲಕಟ್ಟಾ, ಪುರುಷೋತ್ತಮ ಕಲ್ಮನಿ, ಬಸವಂತ್ ಮಸಾಲದೇ, ಮಲ್ಲಿಕಾರ್ಜುನ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.