
ಮಂಡ್ಯ (ಜ.01): ಉತ್ತರ ಪ್ರದೇಶ, ಗುಜರಾತ್ ಮಾದರಿಯ ರಾಜಕಾರಣ ಮಂಡ್ಯದಲ್ಲಿ ನಡೆಯುವುದಿಲ್ಲ. ಇಲ್ಲಿನ ಜನರ ನಾಡಿ ಮಿಡಿತವೇ ಬೇರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಹೇಳಿದರು. ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹಳೇ ಮೈಸೂರು ಭಾಗದ ಜನರು ಶ್ರಮ ಜೀವಿಗಳು. ಅವರು ಬಿಜೆಪಿಯವರ ಕುತಂತ್ರದ ಮಾತುಗಳಿಗೆ ಮಣಿಯುವವರಲ್ಲ. ಬಿಜೆಪಿಯವರು ಮಂಡ್ಯದಲ್ಲಿ ಒಂದು ಸ್ಥಾನಗಳಲ್ಲೂ ಗೆಲ್ಲಲಾರರು ಎಂದು ಭವಿಷ್ಯ ನುಡಿದರು.
ಬಿಜೆಪಿಯವರು ಕುಟುಂಬ ರಾಜಕಾರಣವೊಂದನ್ನೇ ಗುರಿಯಾಗಿಸಿಕೊಂಡು ಜೆಡಿಎಸ್ನ್ನು ಟೀಕಿಸುತ್ತಿದ್ದಾರೆ. ಆದರೆ, ಯಡಿಯೂರಪ್ಪನವರು ಮಾಡುತ್ತಿರುವ ರಾಜಕಾರಣ ಯಾವುದು ಎನ್ನುವ ಪ್ರಶ್ನೆಗೆ ಉತ್ತರಿಸುವುದಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಟುಂಬದ ಎಟಿಎಂ ಆಗಲಿದೆ ಎನ್ನುವುದು ಶುದ್ಧ ಸುಳ್ಳು. ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬಂದರೆ ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗಲಿದೆ. ಜೆಡಿಎಸ್ ಬಗ್ಗೆ ಟೀಕಿಸುವ ಅಮಿತ್ ಶಾ ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಬಗ್ಗೆ ಏಕೆ ಜನರ ಬಳಿ ಮಾತನಾಡುತ್ತಿಲ್ಲ. ಈ ಹಣದಲ್ಲಿ ಎಷ್ಟುಪರ್ಸೆಂಟ್ ಕೇಂದ್ರದ ಪಾಲಿದೆ ಎಂದು ನೇರವಾಗಿ ಪ್ರಶ್ನಿಸಿದರು.
ಪೊಲೀಸ್ ದಳಗಳ ನಡುವೆ ಸಮನ್ವಯ ಇರಲಿ: ಅಮಿತ್ ಶಾ
ಪಂಚರತ್ನ ರಥಯಾತ್ರೆ ಯಶಸ್ಸು ಬಿಜೆಪಿಯವರಲ್ಲಿ ಹತಾಶೆಯನ್ನು ಮೂಡಿಸಿದೆ. ಅದಕ್ಕಾಗಿಯೇ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ಕೊಟ್ಟ9 ಸಾವಿರ ಕೋಟಿ ರು. ಹಣವನ್ನು ವರ್ಗಾವಣೆ ಮಾಡಿಕೊಂಡರು. ಮೈಷುಗರ್ ಕಾರ್ಖಾನೆಗೆ ಮೀಸಲಿರಿಸಿದ 400 ಕೋಟಿ ರು. ಹಣದಲ್ಲಿ ಒಂದು ರು. ಹಣ ಕೊಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಮಾಡಲು ಬಿಡದೆ ಸರ್ಕಾರವನ್ನು ಬೀಳಿಸಿ ಪ್ರಗತಿಗೆ ಮಾರಕವಾದವರಿಗೆ ಈ ನೆಲದ ಮತದಾರರ ಬಳಿ ಓಟು ಕೇಳುವ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು.
ಡಬಲ್ ಎಂಜಿನ್ ಸರ್ಕಾರ ಎನ್ನುವವರು ಬೆಳಗಾವಿ ಗಡಿ ವಿಷಯದಲ್ಲಿ ಮಹಾರಾಷ್ಟ್ರದವರ ಬಾಯಿ ಕಟ್ಟಿಹಾಕುತ್ತಿಲ್ಲವೇಕೆ. ಗಡಿ ವಿವಾದಕ್ಕೆ ಪರಿಹಾರ ಸೂಚಿಸುವ ಪ್ರಯತ್ನ ನಡೆಸುತ್ತಿಲ್ಲವೇಕೆ. ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ. ಅಮಿತ್ ಶಾ, ಮೋದಿ ಇವರಾರಯರೂ ರಾಜ್ಯದ ಅಭಿವೃದ್ಧಿಗಾಗಿ ಜಿಲ್ಲೆಗೆ ಬರುವುದಿಲ್ಲ. ಕೇವಲ ಜನರ ಓಟಿಗಾಗಿ ಮಾತ್ರ ಇಲ್ಲಿಗೆ ಬರುತ್ತಾರೆ. ಇವರಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ನುಡಿದರು.
ಜೆಡಿಎಸ್ ಸ್ಪಷ್ಟಬಹುಮತ ಬರುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದು, ಜನರಿಗೆ ನೀಡಿರುವ ಭರವಸೆಯಂತೆ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಿ ಕರ್ನಾಟಕವನ್ನು ರಾಮರಾಜ್ಯ ಮಾಡುವ ಗುರಿ ಹೊಂದಿದ್ದೇವೆ ಎಂದರು. ಪಂಚರತ್ನ ರಥಯಾತ್ರೆಯನ್ನು ವಂಚನೆಯ ಯಾತ್ರೆ ಎಂದು ಟೀಕಿಸಿರುವ ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದ ಮಹಾಲಿಂಗೇಗೌಡ, ಪಂಚವಾರ್ಷಿಕ ಯೋಜನೆಗಳ ಮಾದರಿಯಲ್ಲಿ ಪಂಚರತ್ನ ಯೋಜನೆಗಳನ್ನು ಕುಮಾರಸ್ವಾಮಿ ಅವರು ರೂಪಿಸಿದ್ದಾರೆ. ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಿರುವ ವಚನವನ್ನು ಜಾರಿಗೊಳಿಸುವುದಾಗಿ ವಚನಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಚಲನ ತಂದ ಸೋಮಣ್ಣ; ದೂರವಾಗುತ್ತಿರುವ ಧ್ರುವನಾರಾಯಣ!
ನಾರಾಯಣ ಗೌಡ ಚಿತ್ತ ಕಾಂಗ್ರೆಸ್ನತ್ತ!: ಜೆಡಿಎಸ್ ಭದ್ರಕೋಟೆಯನ್ನು ಒಡೆದಾಗಿದೆ. ಚೂರು ಚೂರು ಮಾಡುವುದಷ್ಟೇ ಬಾಕಿ ಎಂದಿರುವ ನಾರಾಯಣಗೌಡರು ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯಲ್ಲಿರುವ ಗ್ಯಾರಂಟಿಯೇ ಇಲ್ಲ. ಅವರು ಈಗಾಗಲೇ ಕಾಂಗ್ರೆಸ್ ಕಡೆ ಮುಖ ಮಾಡಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅವರನ್ನು ಜೆಡಿಎಸ್ಗಂತೂ ಸೇರಿಸುವುದಿಲ್ಲ ಎಂದು ಮುದ್ದನಘಟ್ಟಮಹಾಲಿಂಗೇಗೌಡ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.