
ಗದಗ(ಜ.29): ಬಡಜನರ ಬದುಕಿನಲ್ಲಿ ಬದಲಾವಣೆ ತರುವುದು ಪಂಚ ಗ್ಯಾರಂಟಿ ಯೋಜನೆಗಳಾಗಿವೆ. ಗ್ಯಾರಂಟಿ ಸಮಿತಿ ಸದಸ್ಯರು, ಅಧಿಕಾರಿಗಳು ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಬಂಗಾರವಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕೋರ್ಟ್ ಹಾಲ್ನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ 1 ಕೋಟಿ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಬಡತನ ರೇಖೆಗಿಂತ ಮೇಲೆತ್ತಲಾಗಿದೆ. ಇದೊಂದು ಬಡವರ ಬದುಕಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ತಿಗಣೆಯಂತೆ ಜನರ ರಕ್ತ ಹೀರುತ್ತಿದೆ: ರಾಜೀವ ವಾಗ್ದಾಳಿ
ಪ್ರತಿ ಕುಟುಂಬಕ್ಕೆ ಪಂಚ ಗ್ಯಾರಂಟಿಗಳಿಂದಾಗಿ ವಾರ್ಷಿಕ ₹60,000 ದೊರೆಯುತ್ತದೆ. ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನಕ್ಕೆ ₹58 ಸಾವಿರ ಕೋಟಿ ಮೀಸಲಿಡುವ ಮೂಲಕ ಬಡವರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ ಎಂದರು.
ಸರ್ಕಾರ ಹಣ ನೇರವಾಗಿ ಫಲಾನುಭವಿಗಳಿಗೆ ಸೋರಿಕೆ ಆಗದಂತೆ ತಲುಪಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿದೆ. ನೇರ ನಗದು ವರ್ಗಾವಣೆಯು ಮೂಲಕ ಪಾರದರ್ಶಕ ಆಡಳಿತ ಒದಗಿಸಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ನಡೆಯುತ್ತವೆ. ಯಾವುದೂ ನಿಲ್ಲುವುದಿಲ್ಲ. ರಾಜಕೀಯ ಅಪಪ್ರಚಾರ ಕೆಲವರು ನಡೆಸಿದ್ದು ಇದಕ್ಕೆ ಯಾರೊಬ್ಬರೂ ಕಿವಿಗೊಡಬೇಡಿ ಎಂದು ಹೇಳಿದರು.
ಜಿಪಂ ಸಿಇಒ ಭರತ ಎಸ್. ಮಾತನಾಡಿ, ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಾಗ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು ಎಂದರು.
ಗ್ಯಾರಂಟಿ ಯೋಜನೆ ಮಾಹಿತಿ:
ಗೃಹಲಕ್ಷ್ಮೀ ಯೋಜನೆಯಡಿ ಅ. 2024ರ ವರೆಗೆ ಜಿಲ್ಲೆಯಲ್ಲಿ 2,48,525 ನೋಂದಣಿಯಾದ ಅರ್ಜಿಗಳ ಪೈಕಿ 2,44,398 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ ವಾಕರಸಾ ಸಂಸ್ಥೆಯಿಂದ ಶಕ್ತಿ ಯೋಜನೆಯಡಿ 2023 ಜೂ. 11ರಿಂದ 2025 ಜ. 20ರ ವರೆಗೆ 8,30,51,736 ಫಲಾನುಭವಿಗಳು ಯೋಜನೆಯ ಅನುಕೂಲ ಪಡೆದಿದ್ದು, ಸಂಸ್ಥೆಗೆ ₹259.25 ಕೋಟಿ ಆದಾಯವಾಗಿದೆ.
ಗೃಹಜ್ಯೋತಿ ಯೋಜನೆಗೆ ಗದಗ ಜಿಲ್ಲೆಯಲ್ಲಿ ಆ. 2023ರಿಂದ ಡಿ. 2024ರ ವರೆಗೆ ₹13,843.37 ಲಕ್ಷ ಬಿಡುಗಡೆಯಾಗಿದ್ದು, 75,335 ಸ್ಥಾವರಗಳು ಅರ್ಹವಿದ್ದು, ಡಿ. 2024ರ ವರೆಗೆ 2,72,590 ಸ್ಥಾವರಗಳ ನೋಂದಣಿಯಾಗಿದೆ.
ಯುವನಿಧಿ ಯೋಜನೆಯಿಂದ 2024 ಡಿ. 31ರ ವರೆಗೆ ಒಟ್ಟು ಸ್ವೀಕೃತಗೊಂಡ 3811 ಅರ್ಜಿಗಳ ಪೈಕಿ ಡಿಸೆಂಬರ್ 2024ರ ವರೆಗೆ 2472 ಅರ್ಜಿಗಳಿಗೆ ಅನುದಾನ ಮಂಜೂರಾಗಿದ್ದು, ಬಾಕಿ 1339 ಅರ್ಜಿಗಳ ಮಂಜೂರಾತಿ ಹಂತ ಹಂತವಾಗಿ ಆಗುತ್ತವೆ. ಯುವನಿಧಿ ಫಲಾನುಭವಿಗಳಿಗೆ ಡಿಸೆಂಬರ್ 2024ರಲ್ಲಿ ₹73,47,000 ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ 2024ರ ಮಾಹೆಯಲ್ಲಿ ಜಿಲ್ಲೆಯಲ್ಲಿ 2,26,152 ಪಡಿತರ ಕಾರ್ಡುದಾರರಿಗೆ ಡಿಬಿಟಿ ಮೂಲಕ ₹12,35,80,820 ಹಣ ಸಂದಾಯಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಪ್ರಿಯಾಂಕಾ ಗಾಂಧಿ ಕಿತ್ತೂರು ಚೆನ್ನಮ್ಮಳ ಕಾಲಿನ ಧೂಳಿಗೂ ಸಮಾ ಅಲ್ಲ, ಖರ್ಗೆ ವಿರುದ್ಧ
ನಗರಸಭೆ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಹೇಮಂತಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಪಿ.ಬಿ. ಅಗಳವಾಡಿ, ದೀಪಕ ಲಮಾಣಿ, ಸದಸ್ಯರಾದ ಅಶೋಕ ಮಂದಾಲಿ, ರೂಪಾ ಅಂಗಡಿ, ಶಿವನಗೌಡ ಪಾಟೀಲ, ಶರೀಫ ಬಿಳೆಯಲಿ, ಬಸವರಾಜ ಬೆಳಧಡಿ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ವಿರೂಪಾಕ್ಷ ಯಾರಸಿ, ಈಶಣ್ಣ ಹುಣಸೀಕಟ್ಟಿ, ರಾಜೀವ ಕುಂಬಿ, ಗೀತಾ ಬೀರಣ್ಣವರ, ವೀರಯ್ಯ ಮಠಪತಿ, ಫಕ್ರುಸಾಬ ಚಿಕ್ಕಮಣ್ಣೂರ, ಆರ್.ಆರ್. ಗಡ್ಡದ್ದೇವರಮಠ ಪಾಲ್ಗೊಂಡಿದ್ದರು.
ಕಡ್ಡಾಯವಾಗಿ ಹಾಜರಾಗಿ:
ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿತರಣೆಗೆ ಸಮಸ್ಯೆಗಳೇನಾದರೂ ಇದ್ದಲ್ಲಿ ತಾಲೂಕು ಅಧ್ಯಕ್ಷರ ಗಮನಕ್ಕೆ ತರಬೇಕು. ಅನುಷ್ಠಾನ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ತಾಲೂಕು ಮಟ್ಟದಲ್ಲಿಯೂ ಸಭೆ ನಿಯಮಿತವಾಗಿ ನಡೆಸಬೇಕು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿಯೂ ಕಡ್ಡಾಯವಾಗಿ ಹಾಜರಾಗಬೇಕು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.