
ಔರಾದ್(ಸೆ.10): ಯಾವುದು ನಶಿಸುವದಿಲ್ಲವೋ ಅದೇ ಸನಾತನ. ಹೀಗಾಗಿ ಯಾರಿಂದಲೂ ಇದನ್ನು ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ. ಆದರೆ ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡುವವರಿಗೆ, ನಿಂದಿಸುವವರ ವಿನಾಶವಾಗಲಿದೆ. ಇದಕ್ಕೆ ಇತಿಹಾಸವೇ ಸಾಕ್ಷಿ ಎಂದು ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸನಾತನ ನಿರ್ಮೂಲನೆ ಕುರಿತು ತಮಿಳುನಾಡಿನಲ್ಲಿ ಸಮಾವೇಶ ಮಾಡಿರುವುದು ಹಾಗೂ ಅಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಅವರು ಈ ಕುರಿತು ಅಸಂಬದ್ಧ ಹೇಳಿಕೆ ನೀಡಿರುವುದು ಖಂಡನೀಯ. ಸನಾತನ ಧರ್ಮದ ಸತ್ಯ, ವಾಸ್ತವ ಅರಿಯದೆ ತಲೆ ಕೆಟ್ಟವರಂತೆ ನೀಡಿದ ಹೇಳಿಕೆ ಇದಾಗಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ಕೆಲವರು ಇದಕ್ಕೆ ಸಮರ್ಥನೆ ಮಾಡುತ್ತಿದ್ದಾರೆ. ''''ವಿನಾಶಕಾಲೆ ವಿಪರೀತ ಬುದ್ಧಿ'''' ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಸ್ಟಾಲಿನ್ ಮೆಚ್ಚಿಸಲು ಕಾಂಗ್ರೆಸ್ನಿಂದ ರಾಜ್ಯದ ರೈತರ ಹಿತ ಬಲಿ: ಶ್ರೀರಾಮುಲು
ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳ ನಾಯಕರು 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಸನಾತನ ಧರ್ಮ ಕುರಿತು ಅವಹೇಳನದ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಪರಮೇಶ್ವರ, ಡಾ.ಮಹದೇವಪ್ಪ ಇತರರು ಸಮರ್ಥನೆ ಮಾಡಿ ತಮ್ಮ ಧರ್ಮ ವಿರೋಧಿ ಕರಾಳ ಮುಖ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಹೇಳಿಕೆ ನೀಡಿ ಉತ್ತಮ ಸಮಾಜದಲ್ಲಿ ಹುಳಿ ಹಿಂಡುವ, ಧರ್ಮಗಳ ನಡುವೆ ದ್ವೇಷ, ಸಂಘರ್ಷ ನಿರ್ಮಿಸುವಂತಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷದ ನಾಯಕರು ಶ್ರೀರಾಮನ , ರಾಮಸೇತುವಿನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದ್ದರು, ಈಗ ಅಂಥವರು ತಮ್ಮ ಅಸ್ತಿತ್ವವೇ ಕಳೆದುಕೊಂಡು ಮೂಲೆಗುಂಪಾಗಿದ್ದಾರೆ. ಅದೇ ಮನಸ್ಥಿತಿಯ ಕೆಲವು ನಾಯಕರು ಈಗ ಸನಾತನ ಧರ್ಮ ನಿರ್ಮೂಲನೆ ಬಗ್ಗೆ ಹೇಳುತ್ತಿದ್ದಾರೆ. ಇದು ಅಸಾಧ್ಯದ ಮಾತು, ಸನಾತನ ಧರ್ಮದ ನಾಶ ಶತ ಶತಮಾನಗಳಿಂದ ಯಾರಿಂದಲೂ ಸಾಧ್ಯವಾಗಿಲ್ಲ. ಸನಾತನ ವಿರೋಧಿಗಳು ಹೇಳಹೆಸರಿಲ್ಲದಂತೆ ನಾಶವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ
ಸನಾತನ ಧರ್ಮ ಮಾತ್ರ ಮತ್ತೆಮತ್ತೆ ಪುಟಿದೆದ್ದಿದೆ. ಸನಾತನ ಧರ್ಮದ ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಇಂದು ಭಾರತ ಮತ್ತೆ ವಿಶ್ವ ಗುರುವಾಗುವ ಸ್ಥಾನದಲ್ಲಿ ನಿಂತಿದೆ. ಹೀಗಾಗಿ ಸ್ವಾರ್ಥ ಸಾಧನೆ, ಮತಕ್ಕಾಗಿ ಕೆಲವರ ತುಷ್ಟಿಕರಣಕ್ಕಾಗಿ ಏನೇನೋ ಹೇಳಿಕೆ ಕೊಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಆಟ ಈಗ ನಡೆಯದು ಎಂದು ಹೇಳಿದ್ದಾರೆ.ಸ್ಟಾಲಿನ್, ಪ್ರಿಯಾಂಕ್ ಖರ್ಗೆ, ಡಾ. ಪರಮೇಶ್ವರ ಇತರರು ತಮ್ಮ ರಾಜಕೀಯ
ಸ್ವಾರ್ಥಕ್ಕಾಗಿ ಮನಬಂದಂತೆ ಹೇಳಿಕೆ ನೀಡುತ್ತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮಾಜದಲ್ಲಿ ದ್ವೇಷ ಬಿತ್ತುತ್ತಿರುವ ಇಂಥವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇವರ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಚವ್ಹಾಣ್ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.