ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಲು ಏರ್‌ಪೋರ್ಟ್‌ವರೆಗೆ ಬಂದಿದ್ದರು: ಕೆ.ಎಸ್‌.ಈಶ್ವರಪ್ಪ

By Govindaraj SFirst Published Oct 18, 2022, 1:30 AM IST
Highlights

ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾದ 17 ಮಂದಿ ಜೊತೆಗೆ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ ಕೂಡ ಇದ್ದರು. ಬಿಜೆಪಿ ಸೇರಲು ಅವರು ಏರ್‌ಪೋರ್ಟ್‌ವರೆಗೆ ಬಂದಿದ್ದರು. ಆಗ ಅವರಿಗೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಹಿನ್ನೆಲೆ ಗೊತ್ತಿರಲಿಲ್ಲವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. 

ಹಾಸನ (ಅ.18): ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾದ 17 ಮಂದಿ ಜೊತೆಗೆ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ ಕೂಡ ಇದ್ದರು. ಬಿಜೆಪಿ ಸೇರಲು ಅವರು ಏರ್‌ಪೋರ್ಟ್‌ವರೆಗೆ ಬಂದಿದ್ದರು. ಆಗ ಅವರಿಗೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಹಿನ್ನೆಲೆ ಗೊತ್ತಿರಲಿಲ್ಲವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌, ಬ್ರಿಟೀಷರ ಜೊತೆ ಶಾಮಿಲಾಗಿತ್ತು ಎಂಬ ರಾಮಲಿಂಗಾ ರೆಡ್ಡಿ ಆರೋಪಕ್ಕೆ ಈ ಹೀತಿ ಪ್ರತಿಕ್ರಿಯಿಸಿದರು. ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ‘ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.

ಇದೇ ವೇಳೆ, ಸಿದ್ದು ಹಾಗೂ ಡಿಕೆಶಿ ವಿರುದ್ಧ ಕಿಡಿ ಕಾರಿದ ಅವರು, ಸಿದ್ದರಾಮಯ್ಯ ಬಹಳ ದೊಡ್ಡ ಮನುಷ್ಯ ಅಂದುಕೊಂಡಿದ್ದಾನೆ. ಅಷ್ಟುಒಳ್ಳೆಯ ಕೆಲಸ ಮಾಡಿದ್ದರೆ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು ಎಂದು ಪ್ರಶ್ನಿಸಿದರು. ಇನ್ನು, ಡಿಕೆಶಿ, ತಿಹಾರ್‌ ಜೈಲು ಗಿರಾಕಿ. ಅಕ್ರಮ ಹಣ ಸಂಪಾದನೆ ಮಾಡಿದ್ದರಿಂದ ಜೈಲಿಗೆ ಹೋದರು. ನಲಪಾಡ್‌, ಕುಡಿದು ಬಾರ್‌ನಲ್ಲಿ ಗಲಾಟೆ ಮಾಡಿದ ಕಾರಣ ಜೈಲಿಗೆ ಹೋದ. ಇಂತವರನ್ನು ನಂಬಿ ರಾಜ್ಯದ ಜನ ಮತ ಕೊಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಿಸಿ, ಮತ್ತೆ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್‌

ದಿನಕ್ಕೊಂದು ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ: ಜನರ ವಿಶ್ವಾಸದೊಂದಿಗೆ ಗೆಲ್ಲುತ್ತೇನೆ ಎನ್ನುವ ಧೈರ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಆದ್ದರಿಂದಲೇ ದಿನಕ್ಕೊಂದು ಕ್ಷೇತ್ರಗಳನ್ನು ಹುಡುಕುತ್ತಾ ಹೊರಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದ್ದಾರೆ ಎಂದು ಹುಡುಕುತ್ತಾ ಹೊರಟಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು ಎಂದು ಮೂದಲಿಸಿದರು. 

ಚಾಮುಂಡಿ ಕ್ಷೇತ್ರದಲ್ಲಿ ಸೋಲಿನ ನಂತರವೂ ಪಾಠ ಕಲಿಯದ ಸಿದ್ದರಾಮಯ್ಯ, ಕ್ಷೇತ್ರ ಬದಲಾಯಿಸುವುದರಿಂದ ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಶಾಸಕರಾದವರಿಗೆ ಜನರ ಮನಸನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಹೀಗೆ ಕ್ಷೇತ್ರ ಬದಲಿಸುವ ಅನಿವಾರ್ಯತೆ ಬರಲಿದೆ. ಅದು ಈಗ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಕ್ಕೆ ಅಯೋಗ್ಯವಾದ ವ್ಯಕ್ತಿ. ಸಿದ್ದರಾಮಯ್ಯ ಹಗುರವಾಗಿ ಬಾಯಿ ಬಿಡುವಂತಹ ವ್ಯಕ್ತಿ. ಅಂತಹ ವ್ಯಕ್ತಿ ಹೇಗೆ ಮುಖ್ಯಮಂತ್ರಿಯಾಗಲು ಸಾಧ್ಯ? ನಾನು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ, ನನ್ನ ಬಿಟ್ಟರೆ ಮತ್ಯಾವ ರಾಜಕಾರಣಿಗಳೇ ಇಲ್ಲ ಅನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿಗೆ ಟಾರ್ಗೆಟ್‌ ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್‌ ಪಕ್ಷವೂ ಅಲ್ಲ ಎಂದ ಈಶ್ವರಪ್ಪ, ಕಾಂಗ್ರೆಸ್‌ನಲ್ಲಿ ಯಾರೂ ಪ್ರತಿಸ್ಪರ್ಧಿ ಅಲ್ಲ. ಈಗಾಗಲೇ ಡಿಕೆಶಿಯಂತವರು ಜೈಲು ಸೇರಿ ಬಂದಾಗಿದೆ. ಸಿದ್ದರಾಮಯ್ಯನಂತವರು ಎಚ್‌.ವೈ.ಮೇಟಿ, ಚಿಮ್ಮನಕಟ್ಟಿ, ರೇವಣ್ಣ, ವಿಶ್ವನಾಥ ಅಂತವರಿಗೆ ಮೋಸ ಮಾಡಿದ್ದಾರೆ.  ಮೋದಿಯಂತವರನ್ನು ಟೀಕಿಸುವ ಸಿದ್ದರಾಮಯ್ಯನವರ ವರ್ತನೆ ನಿಜಕ್ಕೂ ನಾಚಿಕೆ ತರುವಂತಹದ್ದು. ನಮಗೂ ಮಾತನಾಡಲು ಬರುತ್ತದೆ. ಆದರೆ, ನಮ್ಮ ಪಕ್ಷ ಅಂತಹ ಸಂಸ್ಕಾರ ನೀಡಿಲ್ಲ ಎಂದರು.

ಕಾಂಗ್ರೆಸ್‌ ಜೋಡೋ ಯಾತ್ರೆ ಅಂದಿದ್ದರೆ ಒಪ್ಪುತ್ತಿತ್ತು: ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬೇಕಾದರೆ ಭಾರತ ಜೋಡೋ ಯಾತ್ರೆಗೆ 5 ಸಾವಿರ ಜನರನ್ನು ಕರೆತರಬೇಕು ಎಂದು ಡಿಕೆಶಿ ಅವರು ಹೇಳುತ್ತಿದ್ದಾರೆ. ಆರ್‌.ವಿ.ದೇಶಪಾಂಡೆ ನನ್ನ ಕೈಯಲ್ಲಿ ಅಷ್ಟುಜನರನ್ನು ತರಲು ಆಗಲ್ಲ ಎಂದು ಹೇಳಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಕಾಂಗ್ರೆಸ್‌ ಇದೆ ಅಂತ ತೋರಿಸೋಕೆ ಭಾರತ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಆದರೆ, ಈಗಾಗಲೇ ಕಾಂಗ್ರೆಸ್‌ ನಾಶವಾಗಿದೆ. ಕಾಂಗ್ರೆಸ್‌ ಪಕ್ಷವನ್ನು ಭೂತಗನ್ನಡಿ ಹಿಡಿದು ಹಾಕಿ ಹುಡುಕಬೇಕಾಗಿದೆ ಎಂದರು.

ಮೋದಿ ಯಾವ ಗುರು ಎಂದು ಪಾಕಿಸ್ತಾನಕ್ಕೆ ಕೇಳಿ: ಈಶ್ವರಪ್ಪ

ಭಾರತ ಜೋಡೋ ಎನ್ನುವ ಬದಲು ಕಾಂಗ್ರೆಸ್‌ ಜೋಡೋ ಅಥವಾ ಕಾಂಗ್ರೆಸ್‌ ಹೊಂದಾಣಿಕೆ ಜೋಡೋ ಅಂದಿದ್ದರೆ ಈ ಯಾತ್ರೆಗೆ ಒಪ್ಪುತ್ತಿತ್ತು. ಭಾರತ ಜೋಡೋ ಮೂಲಕ ಮತ್ತೊಮ್ಮೆ ದೇಶದ ಜನರನ್ನ ಮೂರ್ಖರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ದೇಶದ ಜನ ಅಷ್ಟುಮೂರ್ಖರಲ್ಲ. ಜನ ಕಾಂಗ್ರೆಸ್‌ನವರನ್ನೇ ಮೂರ್ಖರನ್ನಾಗಿ ಮಾಡಿ ಮೂಲೆಗೆ ತಳ್ಳಿದ್ದಾರೆ ಎಂದು ಹೇಳಿದರು.

click me!