ಬಿಜೆಪಿ ಸೋಲಿಸಿ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ: ಸಿದ್ದರಾಮಯ್ಯ

By Govindaraj SFirst Published Nov 7, 2022, 2:30 AM IST
Highlights

‘ಕೆಪಿಸಿಸಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಪರವಾಗಿ ಭರವಸೆ ನೀಡುತ್ತಿದ್ದೇನೆ. ಬಿಜೆಪಿಯ ಭ್ರಷ್ಟಹಾಗೂ ನಿಷ್ಕ್ರಿಯ ಸರ್ಕಾರವನ್ನು ಕಿತ್ತೊಗೆದು ಆ ಮೂಲಕ ನೀವು ಎಐಸಿಸಿ ಅಧ್ಯಕ್ಷರಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಇದರಲ್ಲಿ ಯಾವ ಸಂಶಯವೂ ಬೇಡ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭರವಸೆ ನೀಡಿದ್ದಾರೆ.

ಬೆಂಗಳೂರು (ನ.07): ‘ಕೆಪಿಸಿಸಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಪರವಾಗಿ ಭರವಸೆ ನೀಡುತ್ತಿದ್ದೇನೆ. ಬಿಜೆಪಿಯ ಭ್ರಷ್ಟಹಾಗೂ ನಿಷ್ಕ್ರಿಯ ಸರ್ಕಾರವನ್ನು ಕಿತ್ತೊಗೆದು ಆ ಮೂಲಕ ನೀವು ಎಐಸಿಸಿ ಅಧ್ಯಕ್ಷರಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಇದರಲ್ಲಿ ಯಾವ ಸಂಶಯವೂ ಬೇಡ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭರವಸೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಭಾನುವಾರ ಹಮ್ಮಿಕೊಂಡಿದ್ದ ‘ಸರ್ವೋದಯ ಸಮಾವೇಶದಲ್ಲಿ’ ಮಾತನಾಡಿದರು.

‘ಎಐಸಿಸಿ ಅಧ್ಯಕ್ಷರಾಗಿ ಅಭಿನಂದನೆ ಸ್ವೀಕರಿಸುತ್ತಿರುವುದಕ್ಕೆ ಸಂತೋಷವಿಲ್ಲ, ವಿಧಾನಸಭೆ ಚುನಾವಣೆ ಗೆದ್ದರಷ್ಟೇ ಸಂತೋಷ ಎಂದು ಖರ್ಗೆ ಹೇಳಿದ್ದಾರೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಭ್ರಷ್ಟಬಿಜೆಪಿಯನ್ನು ಕಿತ್ತೊಗೆದು ತನ್ಮೂಲಕ ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಹೇಳಿದರು. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಆದರೆ ನಮಗೆ ಇರುವ ಸವಾಲು ಕರ್ನಾಟಕದಲ್ಲಿ ಕೋಮುವಾದಿ, ಬಡವರ ವಿರೋಧಿ, ರೈತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಸರ್ಕಾರವನ್ನು ಕಿತ್ತು ಹಾಕುವುದು. ದ್ವೇಷ ರಾಜಕಾರಣ, ನಿರುದ್ಯೋಗ, ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ಶೇ.40 ರಷ್ಟುಕಮಿಷನ್‌ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಹೀಗಾಗಿ ನನ್ನ ಪ್ರಕಾರ ರಾಜ್ಯದ ಜನತೆ ಈಗಾಗಲೇ ಈ ಬಗ್ಗೆ ಸಂಕಲ್ಪ ಮಾಡಿದ್ದಾರೆ ಎಂದರು.

ಸಿಎಂ ಆಗುವ ಸಿದ್ದರಾಮಯ್ಯ ಕನಸು ಭಗ್ನ ಆಗುತ್ತೆ: ಸಚಿವೆ ಶೋಭಾ ಕರಂದ್ಲಾಜೆ

ಖರ್ಗೆ ಸಮಚಿತ್ತದ ರಾಜಕಾರಣಿ: ಖರ್ಗೆ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ, ಅವರು ಆಡಳಿತ ನಡೆಸಿರುವ ಎಲ್ಲಾ ಇಲಾಖೆಗಳಲ್ಲೂ ತಮ್ಮೆ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಬಡವರ ಪರವಾದ, ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ನಾನು ಕಂಡಂತೆ ಕರ್ನಾಟಕದಲ್ಲಿ ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿಯಿದ್ದರೆ ಅದು ಮಲ್ಲಿಕಾರ್ಜುನ ಖರ್ಗೆ ಮಾತ್ರ. ಅವರು ಅಧ್ಯಕ್ಷ ಗಾದಿ ಹಿಡಿದಿರುವುದು 7 ಕೋಟಿ ಕನ್ನಡಿಗರಿಗೆ ಹೆಮ್ಮೆ ಜತೆಗೆ, ಕಾಂಗ್ರೆಸ್‌ ದೊಡ್ಡ ಶಕ್ತಿ ತಂದುಕೊಟ್ಟಿದೆ ಎಂದರು.

ಖರ್ಗೆಗೆ ಬೆಂಗಳೂರಲ್ಲಿ ಅದ್ಧೂರಿ ಸ್ವಾಗತ: ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಅರಮನೆ ಮೈದಾನದವರೆಗೂ ದಾರಿಯುದ್ದಕ್ಕೂ ಪ್ರಮುಖ ವೃತ್ತಗಳಲ್ಲಿ ಖರ್ಗೆಯವರಿಗೆ ಬೃಹದಾಕಾರದ ಹೂವು, ಸೇಬಿನ ಹಾರಗಳನ್ನು ಹಾಕಿ ಶುಭಕೋರಲಾಯಿತು. ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ರಾರ‍ಯಲಿ ನಡೆಸಿ ಭರ್ಜರಿಯಾಗಿ ರಾಜ್ಯಕ್ಕೆ ಬರಮಾಡಿಕೊಂಡರು.

ಭಾನುವಾರ ಬೆಳಗ್ಗೆ 11 ಗಂಟೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಖರ್ಗೆ ಬಂದಿಳಿದರು. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಮಾಜಿ ಸಚಿವರಾದ ಆರ್‌.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್‌, ಡಾ.ಜಿ.ಪರಮೇಶ್ವರ್‌ ಸೇರಿದಂತೆ ಪ್ರಮುಖ ನಾಯಕರು ವಿಮಾನ ನಿಲ್ದಾಣದಲ್ಲಿಯೇ ಸ್ವಾಗತ ಕೋರಿದರು. ಖರ್ಗೆ ಅವರ ಆಗಮನ ಹಿನ್ನೆಲೆ ರಾಜ್ಯದ ಎಲ್ಲ ಕಾಂಗ್ರೆಸ್‌ ನಾಯಕರುಗಳ ಫ್ಲೆಕ್ಸ್‌, ಬ್ಯಾನರ್‌, ಬಾವುಟ, ಕಟೌಟ್‌ಗಳು ವಿಮಾನ ನಿಲ್ದಾಣದ ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳು ಭಾಗಿಯಾಗಿ ಕಣ್ಮನ ಸೆಳೆದವು.

ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಪರದೇಶಿ ಗಿರಾಕಿ: ಸಚಿವ ಶ್ರೀರಾಮುಲು

ಜೆಸಿಬಿಯಲ್ಲಿ ಸೇಬಿನ ಹಾರ: ನಗರದ ಸಾದೇನಹಳ್ಳಿ ಗೇಟ್‌ ಬಳಿ ಖರ್ಗೆ ಅವರಿಗೆ ಎರಡು ಜೆಸಿಬಿಗಳಲ್ಲಿ ಬೃಹತ್‌ ಸೇಬಿನ ಹಾರ ಹಾಕಿ ಅಭಿನಂದಿಸಲಾಯಿತು. ಅಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ಜೈಕಾರ ಕೂಗಿದರು. ಜೆಸಿಬಿಯಲ್ಲಿ ನಿಂತಿದ್ದ ಹಲವು ಕಾರ್ಯಕರ್ತರು ಹೂವಿನ ಸುರಿಮಳೆಗರೆದರು. ಅಲ್ಲಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರೊಂದಿಗೆ ಖರ್ಗೆಯವರ ಮೆರವಣಿಗೆ ಸಾಗಿತು.

ಖರ್ಗೆ ಮನೆ ಬಳಿ ಸಂಭ್ರಮಾಚರಣೆ: ಭಾನುವಾರ ಬೆಳಗ್ಗೆಯಿಂದಲೇ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆ ಸಾವಿರಾರು ಜನ ಜಮಾವಣೆಗೊಂಡು ಸಂಭ್ರಮಾಚರಣೆ ಮಾಡಿದರು. ಸಿಹಿ ಹಂಚಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಲಾಯಿತು.

click me!