ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ

By Govindaraj SFirst Published Jan 14, 2023, 3:40 AM IST
Highlights

ನನ್ನ 44 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅರಕಲಗೂಡು (ಜ.14): ನನ್ನ 44 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ರಾಮನಾಥಪುರ ಹೋಬಳಿಯ ಬಿಳಗೂಲಿ ಗ್ರಾಮದಲ್ಲಿ ಸ್ಥಾಪಿಸಿರುವ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶುಕ್ರವಾರ ಉದ್ಘಾಟಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಬಿಜೆಪಿಯಂತಹ ಭ್ರಷ್ಟಾಚಾರಿಗಳು, ವಚನ ಭ್ರಷ್ಟರು ರಾಜ್ಯದ ಇತಿಹಾಸದಲ್ಲಿ ಯಾರೂ ಇಲ್ಲ. ಬಿಜೆಪಿ ಬರೀ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಇತಿಹಾಸದಲ್ಲಿ ಯಾರಾದರೂ ಒಂದು ಸರ್ಕಾರವನ್ನು 40 ಪರ್ಸೆಂಟ್‌ ಕಮಿಷನ್‌ ಸರ್ಕಾರವೆಂದು ಹೇಳಿದ್ದಾರಾ? ಈ ಕುರಿತು ಕಂಟ್ರಾಕ್ಟರ್‌ ಅಸೋಸಿಯೇಷನ್‌ ಅವರು 40 ಪರ್ಸೆಂಟ್‌ನಿಂದ ತಮ್ಮನ್ನು ಉಳಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಮೋದಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಕಿಡಿಕಾರಿದರು.

ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ ಬಿಜೆಪಿ: ಸಿದ್ದರಾಮಯ್ಯ

ಗೆದ್ದೆತ್ತಿನ ಬಾಲ ಹಿಡಿಯೋ ಜೆಡಿಎಸ್‌: ಜೆಡಿಎಸ್‌ ಬಗ್ಗೆ ನಾನು ಮಾತನಾಡಲ್ಲ. ಕಾರಣ, ಅವರೇನು ಅ​ಧಿಕಾರಕ್ಕೆ ಬರುವವರಲ್ಲ. ಅವರು ಗೆದ್ದೆತ್ತಿನ ಬಾಲ ಹಿಡಿಯುವವರು. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದರು.

ಧಮ್‌ ಇದ್ರೆ ಚರ್ಚೆಗೆ ಬರಲಿ: ನಾವು 2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 159 ಭರವಸೆಗಳನ್ನು ನನ್ನ ಸರ್ಕಾರಾವಧಿಯಲ್ಲಿ ಈಡೇರಿಸಿದ್ದೇವೆ. ಆದರೆ, 2018ರಲ್ಲಿ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. ಈ ಕುರಿತು ಚರ್ಚಿಸಲು ವೇದಿಕೆಗೆ ಬನ್ನಿ ಎಂದು ಕರೆದರೂ ಬರಲು ಬಿಜೆಪಿಗೆ ದಮ್‌ ಇಲ್ಲ, ತಾಕತ್‌ ಇಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತೆತ್ತಿದರೆ ದಮ್‌ ಇದ್ರೆ, ತಾಕತ್‌ ಇದ್ರೆ ಎನ್ನುತ್ತಾರೆ. ಬನ್ನಿ ತೋರಿಸಿ ದಮ್‌, ತಾಕತ್ತು ಎಂದು ಸವಾಲೆಸೆದರು.

ಎಲ್ಲಾ ಕ್ಷೇತ್ರದ ಅಭಿವೃದ್ಧಿಯಿಂದ ಸಮಾನತೆ: ಪ್ರತಿಯೊಬ್ಬರು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದರ ಮುಖಾಂತರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನುಡಿದರು. ತಾಲೂಕಿನ ತಿಂಥಿಣಿ ಸೇತುವೆ ಸಮೀಪದಲ್ಲಿರುವ ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಲ್ಲಿ ಗುರುವಾರ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವದ ಮೊದಲ ದಿನ ನಡೆದ ಹಾಲುಮತ ಕಲಾ ಪ್ರಕಾರಗಳು ಮತ್ತು ಕಲಾವಿದರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಮೂಲತಃ ಕುರಿಕಾಯುವವರು. ಈ ಸಮಾಜದಲ್ಲಿ ಸಹ ಅನೇಕ ಒಳಪಂಗಡಗಳಿವೆ. ಎಲ್ಲ ಜಾತಿಗಳು ಅವರವರ ವೃತ್ತಿಯಿಂದ ಆಗಿವೆ. ಸಮಾಜದಲ್ಲಿ ನಾಲ್ಕು ವರ್ಣಗಳಲ್ಲಿ ಜನತೆಯನ್ನು ಶ್ರೇಣಿಕೃತ ಮಾಡಲಾಗಿದೆ. ಇದನ್ನು ತೊಡೆದು ಹಾಕಲು ಹಿಂದಿನಿಂದ ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ. ಜಗಜ್ಯೋತಿ ಬಸವಣ್ಣನವರ ಕಾಲದಲ್ಲಿ ಶ್ರೇಣಿ ಕೃತ ಸಮಾಜ ನಾಶಮಾಡಲು, ಅನುಭವ ಮಂಟಪ ಮಾಡಿ ಎಲ್ಲ ಜಾತಿಯ ಶರಣರನ್ನು ಒಂದುಗೂಡಿಸಿ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಗಾಗಿ ಪ್ರಯತ್ನಿಸಿದರು. 

ಸಿದ್ದರಾಮಯ್ಯ ಲೀಡರ್‌ ಆಗುವ ಭ್ರಮೆ ಬಿಡಲಿ: ಕೆ.ಎಸ್‌.ಈಶ್ವರಪ್ಪ ಲೇವಡಿ

ಅದರ ಭಾಗವಾಗಿಯೇ ಲೋಕಸಭೆ, ವಿಧಾನ ಸಭೆಗಳು ರೂಪಗೊಂಡಿವೆ. ಶಿಕ್ಷಣ, ಸಂಘಟನೆ, ಹೋರಾಟ ಮಾಡಿದಾಗ ನ್ಯಾಯಯುತ ಹಕ್ಕು ಸಿಗುತ್ತವೆ ಎಂದು ಹೇಳಿದರು. ಕುರುಬ ಜನಾಂಗದ ಕಲಾವೈಭವ ಬೇರೆ ಜನಾಂಗದಲ್ಲಿ ಇರುವುದು ಕಷ್ಟ. ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಿಂದ ಕಳೆದ 16 ವರ್ಷಗಳಿಂದ ನಿರಂತರವಾಗಿ ಹಾಲುಮತ ಸಂಸ್ಕೃತ ವೈಭವವನ್ನು ಆಯೋಜಿಸುತ್ತಾ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

click me!