ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ

Published : Dec 09, 2025, 07:19 AM IST
Excise Fund

ಸಾರಾಂಶ

ರಾಜ್ಯದಲ್ಲಿ ಮದ್ಯಪಾನ ಮಾಡುವವರಲ್ಲಿ ಉಂಟಾಗುವ ಲಿವರ್‌ ಸಮಸ್ಯೆಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಅನುದಾನ ನೀಡಬೇಕೆಂದು ಪಕ್ಷಾತೀತವಾಗಿ ಸದಸ್ಯರು ಆಗ್ರಹಿಸಿದ ಸ್ವಾರಸ್ಯಕರ ಘಟನೆ ನಡೆಯಿತು.

ಸುವರ್ಣ ವಿಧಾನಪರಿಷತ್‌ (ಡಿ.09): ರಾಜ್ಯದಲ್ಲಿ ಮದ್ಯಪಾನ ಮಾಡುವವರಲ್ಲಿ ಉಂಟಾಗುವ ಲಿವರ್‌ ಸಮಸ್ಯೆಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಅನುದಾನ ನೀಡಬೇಕೆಂದು ಪಕ್ಷಾತೀತವಾಗಿ ಸದಸ್ಯರು ಆಗ್ರಹಿಸಿದ ಸ್ವಾರಸ್ಯಕರ ಘಟನೆ ನಡೆಯಿತು. ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಮತ್ತು ಬಿಜೆಪಿಯ ಕೆ.ಎಸ್‌. ನವೀನ್‌ ಅವರು, ನಿಯಮ 330ರ ಅಡಿಯಲ್ಲಿ ರಾಜ್ಯದಲ್ಲಿ ಮದ್ಯಪಾನಿಗಳ ಪೈಕಿ ಲಿವರ್‌ ಸಿರೋಸಿಸ್‌/ಜಾಂಡೀಸ್‌ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಸಂಬಂಧ ಅಬಕಾರಿ ಆದಾಯದ ಶೇ.20ರಷ್ಟು ಮೊತ್ತ ಮೀಸಲಿಡುವಂತೆ ಕೋರಿದರು.

ಅದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ, ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 195.27 ಲಕ್ಷ ಪೆಟ್ಟಿಗೆ ಬಿಯರ್‌ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 47.46 ಲಕ್ಷ ಪೆಟ್ಟಿಗೆಗಳು ಕಡಿಮೆ ಮಾರಾಟವಾಗಿದೆ. ಶೀತ ವಾತಾವರಣ, ಚಳಿ ಹೆಚ್ಚಿರುವ ಕಾರಣ ಬಿಯರ್‌ ಮಾರಾಟ ಕುಸಿತ ಕಂಡಿದೆ ಎಂದರು.

ವೆಚ್ಚ ಭರಿಸಲಾಗದು

ಇನ್ನು, ಅಬಕಾರಿ ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಲಾಗುತ್ತಿದೆ. ಈ ಆದಾಯವನ್ನು ಬಜೆಟ್‌ನಲ್ಲಿ ಅನುಮೋದಿಸಿದ ಕಾರ್ಯಕ್ರಮಗಳಿಗೆ ವ್ಯಯಿಸಲಾಗುತ್ತಿದೆ. ಸಂಚಿತ ನಿಧಿಗೆ ಜಮೆಯಾಗಿರುವ ಅನುದಾನವನ್ನು ಬೇರೆ ಉದ್ದೇಶಕ್ಕೆ ವೆಚ್ಚ ಮಾಡಲಾಗದು. ಆದ್ದರಿಂದ ಮದ್ಯಪಾನಿಗಳಲ್ಲಿ ಲಿವರ್‌ ಸಿರೋಸಿಸ್‌/ಜಾಂಡೀಸ್‌ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಅಬಕಾರಿ ಆದಾಯದಿಂದ ವೆಚ್ಚ ಭರಿಸಲಾಗದು ಎಂದು ಸ್ಪಷ್ಟಪಡಿಸಿದರು.

ಈ ಉತ್ತರದಿಂದ ಸಂತುಷ್ಟಗೊಳ್ಳದ ವಿಪಕ್ಷ ಸದಸ್ಯರು, ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಅದರ ನಡುವೆ ರಾಜ್ಯ ಸರ್ಕಾರ 46 ಸಾವಿರ ಕೋಟಿ ರು. ಅಬಕಾರಿ ಆದಾಯ ಸಂಗ್ರಹದ ಗುರಿ ನೀಡಿದೆ. ಹೀಗೆ ಹೆಚ್ಚಿನ ಪ್ರಮಾಣದ ಗುರಿ ನೀಡುವ ಮೂಲಕ ಮದ್ಯಪಾನಿಗಳ ಸಂಖ್ಯೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.

ಅದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಶಿವಕುಮಾರ್‌, ಕಳಪೆ ಮದ್ಯ ಮಾರಾಟದಿಂದಾಗಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಜತೆಗೆ ಹೊಸದಾಗಿ 1,500 ಮದ್ಯದಂಗಡಿ ತೆರೆಯಲು ಸರ್ಕಾರ ಯೋಜಿಸಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಅಂತಿಮವಾಗಿ ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರು, ರಾಜ್ಯದ ಜನರ ಆರೋಗ್ಯ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರ್ಕಾರದಿಂದ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗಾಗಿ ಅಬಕಾರಿ ಆದಾಯದಲ್ಲಿ ಲಿವರ್‌ ಸಿರೋಸಿಸ್‌/ಜಾಂಡೀಸ್‌ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ಅನುದಾನ ನೀಡಲಾಗದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಪುರುಷರಿಗಿಲ್ಲದ ಕಟ್ಟುಪಾಡು ನಮಗೇಕೆ? - ಮಲೈಕಾ