Ramanagara: ಬಿಜೆಪಿ ಸೇರಲು ಮುಂದಾ​ಗಿ​ದ್ದ ಶಾಸಕ ಮಂಜು​ನಾಥ್‌: ಬಾಲಕೃಷ್ಣ ಆರೋಪ

By Govindaraj SFirst Published Jan 9, 2023, 8:25 PM IST
Highlights

ಶಾಸಕ ಎ.ಮಂಜುನಾಥ್‌ ಬಿಜೆಪಿ ಸೇರಲು ಕೆಲವು ವರ್ಷಗಳ ಹಿಂದೆಯೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವ​ರೊಂದಿಗೆ ಸಂಪರ್ಕ ಸಾಧಿಸಿ ಪ್ರಯತ್ನ ನಡೆ​ಸಿ​ದ್ದರು ಎಂದು ಮಾಜಿ ಶಾಸಕ ಬಾಲಕೃಷ್ಣ ಗಂಭೀರ ಆರೋಪ ಮಾಡಿದರು. 

ಮಾಗಡಿ (ಜ.09): ಶಾಸಕ ಎ.ಮಂಜುನಾಥ್‌ ಬಿಜೆಪಿ ಸೇರಲು ಕೆಲವು ವರ್ಷಗಳ ಹಿಂದೆಯೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವ​ರೊಂದಿಗೆ ಸಂಪರ್ಕ ಸಾಧಿಸಿ ಪ್ರಯತ್ನ ನಡೆ​ಸಿ​ದ್ದರು ಎಂದು ಮಾಜಿ ಶಾಸಕ ಬಾಲಕೃಷ್ಣ ಗಂಭೀರ ಆರೋಪ ಮಾಡಿದರು. ಪಟ್ಟಣದ ಶ್ರೀ ಅಣ್ಣಮ್ಮದೇವಿಯ ಆರಾಧನಾ ಮಹೋತ್ಸವದ ಕೊನೆಯ ದಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಚುನಾ​ವ​ಣೆ​ಯಲ್ಲಿ ಗೆದ್ದು ಶಾಸ​ಕ​ರಾದ ಮೇಲೆ ಮಂಜು​ನಾಥ್‌ ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತೀರ್ಮಾ​ನಿ​ಸಿ​ದ್ದರು. 

ಸಿ.ಪಿ.ಯೋಗೇಶ್ವರ್‌ ಜೊತೆ ಒಂದು ದಿನ ಕಾರಿನಲ್ಲಿ ಮಂಜು​ನಾಥ್‌ ಸುತ್ತಾಡಿದ್ದರು. ಬಾಲ​ಕೃ​ಷ್ಣ​ರ​ವರು ಬಿಜೆಪಿಗೆ ಬರಲಿ ಅವ​ರನ್ನೂ ಕರೆಸುವಂತೆ ಹೇಳಿ ನನ್ನನ್ನು ಯೋಗೀಶ್ವರ್‌ ಬಳಿ ಕರೆಸಿದ್ದರು. ಆಗ ಲೋ​ಕ​ಸಭಾ ಚುನಾವಣೆಯಲ್ಲಿ ಬಾಲ​ಕೃಷ್ಣ ಸ್ಪರ್ಧೆ ಮಾಡಿ​ದರೆ, ನಾನು ಜೆಡಿ​ಎಸ್‌ ಶಾಸಕ ಸ್ಥಾನಕ್ಕೆ ರಾಜೀ​ನಾಮೆ ನೀಡಿ ಬಿಜೆ​ಪಿ​ಯಿಂದ ಸ್ಪರ್ಧೆ ಮಾಡುತ್ತೇ​ನೆಂದು ಹೇಳಿಕೆ ಕೊಟ್ಟಿದ್ದರು. ಆಗ ನಾನು ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದೆ. ಆಗ ಎ.ಮಂಜುನಾಥ್‌ ಅವರು ನನ್ನ ಧರ್ಮಪತ್ನಿಯನ್ನು ಕೇಳಿ ಬರುತ್ತೇನೆಂದು ಹೇಳಿ ಹೋದರು. 

Ramanagara: ಜ.11ರಿಂದ ಐದು ದಿನಗಳ ಕಾಲ ಅದ್ಧೂರಿ ಕನ​ಕೋ​ತ್ಸವ: ಸಂಸದ ಸು​ರೇಶ್‌

ಇದು ಸುಳ್ಳೊ ನಿಜವೊ ಎಂಬುದನ್ನು ಶಾಸಕರನ್ನು ಕೇಳಬ​ಹುದು. ಅವರು ಇಲ್ಲ ಎಂದರೆ ಯೋಗೇಶ್ವರ ಅವರನ್ನು ಕೇಳಿ ತಿಳಿ​ದು​ಕೊಳ್ಳಿ ಎಂದು ಹೇಳಿ​ದರು. ಶಾಸಕ ಎ.ಮಂಜುನಾಥ್‌ ಜೆಡಿಎಸ್‌ ಪಕ್ಷದಲ್ಲಿ ಅನಿವಾರ್ಯವಾಗಿದ್ದಾರೆಯೇ ಹೊರತು ಎಚ್‌.ಡಿ. ಕುಮಾರಸ್ವಾಮಿಯಾಗಲಿ ಅಥವಾ ಎಚ್‌.ಡಿ.ದೇವೇಗೌಡರ ಮೇಲಿನ ಪ್ರೀತಿಗಾಗಲಿ ಪಕ್ಷದಲ್ಲಿ ಇಲ್ಲ. ಅವ​ರಿಗೆ ಪಕ್ಷ ಬಿಟ್ಟರೆ ಉಳಿಗಾಲ ಇಲ್ಲ ಎಂಬ ಭಯದಿಂದ ಜೆಡಿಎಸ್‌ ಪಕ್ಷದಲ್ಲಿದ್ದಾರೆಯೇ ಹೊರತು ಪ್ರೀತಿ ಅಭಿಮಾನದಿಂದ ಅಲ್ಲ. ಬಿಜೆಪಿ ಪಕ್ಷ ಸೇರಲು ಮುಂದಾ​ಗಿದ್ದು ಸೊಳ್ಳೊ ನಿಜವೊ ಶಾಸಕರನ್ನೇ ಕೇಳಿ ಎಂದು ಬಾಲಕೃಷ್ಣ ತಿಳಿಸಿದರು.

ಶಾಸ​ಕರು ಭ್ರಷ್ಟಾ​ಚಾ​ರ​ವನ್ನು ಮೊದಲು ಗುಡಿ​ಸಲಿ: ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಶಾಸಕ ಎ.ಮಂಜುನಾಥ್‌ ಮೊದಲು ಗುಡಿಸಲಿ. ಆನಂತರ ಕಾಂಗ್ರೆಸ್‌ ಕಾರ್ಯಕರ್ತರನ್ನು ಗುಡಿಸುವ ಕೆಲಸ ಮಾಡಲಿ ಎಂದು ಮಾಜಿ ಶಾಸಕ ಬಾಲಕೃಷ್ಣ ವ್ಯಂಗ್ಯ​ವಾ​ಡಿ​ದರು. ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಾಶೀರ್ವಾದ ಮನೆ ಮನೆಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಕಚೇರಿ ಮತ್ತು ಪುರಸಭೆ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡು​ತ್ತಿದೆ. ಶಾಸಕರು ಅದನ್ನು ಗುಡಿಸಲಿ. ನಂತರ ನಮ್ಮ ಪಕ್ಷದ ಕಾರ್ಯಕರ್ತರನ್ನು ಅವರ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಲಿ. ಜನರು ಯಾರನ್ನು ಗುಡಿಸಬೇಕು ಎಂಬುದನ್ನು ತೀರ್ಮಾನ ಮಾಡಿದ್ದಾರೆ. ಕಸ ಗುಡಿಸುವುದಾದರೆ ಎಲ್ಲಾ ಗ್ರಾಮಗಳಲ್ಲೂ ಕಸ ಗುಡಿಸಲಿ. ನನ್ನದೇನು ಅಭ್ಯಂತರವಿಲ್ಲ ಎಂದು ಶಾಸಕರ ವಿರುದ್ಧ ಕಿಡಿ​ಕಾ​ರಿ​ದರು.

ಉತ್ತರ ಕುಮಾರನ ಪೌರುಷ: 20 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಶಾಸಕ ಎ.ಮಂಜುನಾಥ್‌ ಉತ್ತರ ಕುಮಾ​ರನ ರೀತಿ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಾರೆ. ಆದರೆ, ನಮ್ಮ ಮುಂದೆ ಬಂದು ಬಹಿರಂಗ ಚರ್ಚೆಗೆ ಬರುವುದೇ ಇಲ್ಲ. ಮಾಧ್ಯಮದ ಮುಂದೆ ಅಲ್ಲ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲಿ, ನಾವು ಆಗ ಶಾಸಕರನ್ನು ಒಪ್ಪುತ್ತೇವೆ. ಅವರ ಅವಧಿಯಲ್ಲಿ ಏನಾಗಿದೆ ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ ಎಂದರು.

Chamarajanagar: ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಪುಟ್ಟಸ್ವಾಮಿ!

ಜಮೀನು ನೀಡಬೇಡಿ: ಬೆಂಗಳೂರಿಗೆ ಸಮೀಪವಿರುವ ಮಾಗಡಿ ತಾಲೂಕಿನಲ್ಲಿ ಜನಗಳು ಜಮೀನನ್ನು ಮಾರಾಟ ಮಾಡಿದರೆ ಬೆಂಗಳೂರಿನಲ್ಲಿ ಸ್ಲಂನಲ್ಲಿ ವಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದರು. ಈ ಬಗ್ಗೆ ಸರ್ಕಾರಕ್ಕೂ ಬೆಂಗಳೂರು ಸಮೀಪದಲ್ಲಿರುವ ಜಮೀನುಗಳನ್ನು ಕಾರ್ಖಾನೆಗಾಗಿ ವಶಪಡಿಸಿಕೊಳ್ಳುವುದು ಬೇಡ ಬೆಂಗಳೂರಿನಿಂದ ದೂರದ ಪ್ರದೇಶದಲ್ಲಿ ಜಮೀನು ಕೊಂಡುಕೊಳ್ಳಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾರ್ಖಾನೆಯಾದರೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗುವುದಿಲ್ಲ. ಟೊಯೋಟಾದಲ್ಲಿ ನೂರು ಜನ ಐಟಿಐ ನಿರುದ್ಯೋಗಿಗಳಿಗೆ ಕಾಯಂ ಉದ್ಯೋಗ ಕೊಡಿಸಿದರೆ ಮಾಗಡಿಯಲ್ಲಿ ಕೈಗಾರಿಕೆ ಮಾಡಿಸಲು ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಶಾಸಕರಿಗೆ ಸವಾಲು ಹಾಕಿದರು.

click me!