
ಮಾಗಡಿ (ಜ.09): ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಕೆಲವು ವರ್ಷಗಳ ಹಿಂದೆಯೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಸಂಪರ್ಕ ಸಾಧಿಸಿ ಪ್ರಯತ್ನ ನಡೆಸಿದ್ದರು ಎಂದು ಮಾಜಿ ಶಾಸಕ ಬಾಲಕೃಷ್ಣ ಗಂಭೀರ ಆರೋಪ ಮಾಡಿದರು. ಪಟ್ಟಣದ ಶ್ರೀ ಅಣ್ಣಮ್ಮದೇವಿಯ ಆರಾಧನಾ ಮಹೋತ್ಸವದ ಕೊನೆಯ ದಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಮೇಲೆ ಮಂಜುನಾಥ್ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತೀರ್ಮಾನಿಸಿದ್ದರು.
ಸಿ.ಪಿ.ಯೋಗೇಶ್ವರ್ ಜೊತೆ ಒಂದು ದಿನ ಕಾರಿನಲ್ಲಿ ಮಂಜುನಾಥ್ ಸುತ್ತಾಡಿದ್ದರು. ಬಾಲಕೃಷ್ಣರವರು ಬಿಜೆಪಿಗೆ ಬರಲಿ ಅವರನ್ನೂ ಕರೆಸುವಂತೆ ಹೇಳಿ ನನ್ನನ್ನು ಯೋಗೀಶ್ವರ್ ಬಳಿ ಕರೆಸಿದ್ದರು. ಆಗ ಲೋಕಸಭಾ ಚುನಾವಣೆಯಲ್ಲಿ ಬಾಲಕೃಷ್ಣ ಸ್ಪರ್ಧೆ ಮಾಡಿದರೆ, ನಾನು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳಿಕೆ ಕೊಟ್ಟಿದ್ದರು. ಆಗ ನಾನು ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದೆ. ಆಗ ಎ.ಮಂಜುನಾಥ್ ಅವರು ನನ್ನ ಧರ್ಮಪತ್ನಿಯನ್ನು ಕೇಳಿ ಬರುತ್ತೇನೆಂದು ಹೇಳಿ ಹೋದರು.
Ramanagara: ಜ.11ರಿಂದ ಐದು ದಿನಗಳ ಕಾಲ ಅದ್ಧೂರಿ ಕನಕೋತ್ಸವ: ಸಂಸದ ಸುರೇಶ್
ಇದು ಸುಳ್ಳೊ ನಿಜವೊ ಎಂಬುದನ್ನು ಶಾಸಕರನ್ನು ಕೇಳಬಹುದು. ಅವರು ಇಲ್ಲ ಎಂದರೆ ಯೋಗೇಶ್ವರ ಅವರನ್ನು ಕೇಳಿ ತಿಳಿದುಕೊಳ್ಳಿ ಎಂದು ಹೇಳಿದರು. ಶಾಸಕ ಎ.ಮಂಜುನಾಥ್ ಜೆಡಿಎಸ್ ಪಕ್ಷದಲ್ಲಿ ಅನಿವಾರ್ಯವಾಗಿದ್ದಾರೆಯೇ ಹೊರತು ಎಚ್.ಡಿ. ಕುಮಾರಸ್ವಾಮಿಯಾಗಲಿ ಅಥವಾ ಎಚ್.ಡಿ.ದೇವೇಗೌಡರ ಮೇಲಿನ ಪ್ರೀತಿಗಾಗಲಿ ಪಕ್ಷದಲ್ಲಿ ಇಲ್ಲ. ಅವರಿಗೆ ಪಕ್ಷ ಬಿಟ್ಟರೆ ಉಳಿಗಾಲ ಇಲ್ಲ ಎಂಬ ಭಯದಿಂದ ಜೆಡಿಎಸ್ ಪಕ್ಷದಲ್ಲಿದ್ದಾರೆಯೇ ಹೊರತು ಪ್ರೀತಿ ಅಭಿಮಾನದಿಂದ ಅಲ್ಲ. ಬಿಜೆಪಿ ಪಕ್ಷ ಸೇರಲು ಮುಂದಾಗಿದ್ದು ಸೊಳ್ಳೊ ನಿಜವೊ ಶಾಸಕರನ್ನೇ ಕೇಳಿ ಎಂದು ಬಾಲಕೃಷ್ಣ ತಿಳಿಸಿದರು.
ಶಾಸಕರು ಭ್ರಷ್ಟಾಚಾರವನ್ನು ಮೊದಲು ಗುಡಿಸಲಿ: ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಶಾಸಕ ಎ.ಮಂಜುನಾಥ್ ಮೊದಲು ಗುಡಿಸಲಿ. ಆನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ಗುಡಿಸುವ ಕೆಲಸ ಮಾಡಲಿ ಎಂದು ಮಾಜಿ ಶಾಸಕ ಬಾಲಕೃಷ್ಣ ವ್ಯಂಗ್ಯವಾಡಿದರು. ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಾಶೀರ್ವಾದ ಮನೆ ಮನೆಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಕಚೇರಿ ಮತ್ತು ಪುರಸಭೆ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಸಕರು ಅದನ್ನು ಗುಡಿಸಲಿ. ನಂತರ ನಮ್ಮ ಪಕ್ಷದ ಕಾರ್ಯಕರ್ತರನ್ನು ಅವರ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಲಿ. ಜನರು ಯಾರನ್ನು ಗುಡಿಸಬೇಕು ಎಂಬುದನ್ನು ತೀರ್ಮಾನ ಮಾಡಿದ್ದಾರೆ. ಕಸ ಗುಡಿಸುವುದಾದರೆ ಎಲ್ಲಾ ಗ್ರಾಮಗಳಲ್ಲೂ ಕಸ ಗುಡಿಸಲಿ. ನನ್ನದೇನು ಅಭ್ಯಂತರವಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
ಉತ್ತರ ಕುಮಾರನ ಪೌರುಷ: 20 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಶಾಸಕ ಎ.ಮಂಜುನಾಥ್ ಉತ್ತರ ಕುಮಾರನ ರೀತಿ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಾರೆ. ಆದರೆ, ನಮ್ಮ ಮುಂದೆ ಬಂದು ಬಹಿರಂಗ ಚರ್ಚೆಗೆ ಬರುವುದೇ ಇಲ್ಲ. ಮಾಧ್ಯಮದ ಮುಂದೆ ಅಲ್ಲ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲಿ, ನಾವು ಆಗ ಶಾಸಕರನ್ನು ಒಪ್ಪುತ್ತೇವೆ. ಅವರ ಅವಧಿಯಲ್ಲಿ ಏನಾಗಿದೆ ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ ಎಂದರು.
Chamarajanagar: ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಪುಟ್ಟಸ್ವಾಮಿ!
ಜಮೀನು ನೀಡಬೇಡಿ: ಬೆಂಗಳೂರಿಗೆ ಸಮೀಪವಿರುವ ಮಾಗಡಿ ತಾಲೂಕಿನಲ್ಲಿ ಜನಗಳು ಜಮೀನನ್ನು ಮಾರಾಟ ಮಾಡಿದರೆ ಬೆಂಗಳೂರಿನಲ್ಲಿ ಸ್ಲಂನಲ್ಲಿ ವಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದರು. ಈ ಬಗ್ಗೆ ಸರ್ಕಾರಕ್ಕೂ ಬೆಂಗಳೂರು ಸಮೀಪದಲ್ಲಿರುವ ಜಮೀನುಗಳನ್ನು ಕಾರ್ಖಾನೆಗಾಗಿ ವಶಪಡಿಸಿಕೊಳ್ಳುವುದು ಬೇಡ ಬೆಂಗಳೂರಿನಿಂದ ದೂರದ ಪ್ರದೇಶದಲ್ಲಿ ಜಮೀನು ಕೊಂಡುಕೊಳ್ಳಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾರ್ಖಾನೆಯಾದರೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗುವುದಿಲ್ಲ. ಟೊಯೋಟಾದಲ್ಲಿ ನೂರು ಜನ ಐಟಿಐ ನಿರುದ್ಯೋಗಿಗಳಿಗೆ ಕಾಯಂ ಉದ್ಯೋಗ ಕೊಡಿಸಿದರೆ ಮಾಗಡಿಯಲ್ಲಿ ಕೈಗಾರಿಕೆ ಮಾಡಿಸಲು ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಶಾಸಕರಿಗೆ ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.