
ಹೊನ್ನಾಳಿ (ಮಾ.12) : ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಭಾಗವಹಿಸಬೇಕಾಗಿದ್ದ ಪ್ರಜಾಧ್ವನಿ ಹೊನ್ನಾಳಿ ಸಮಾವೇಶ ದಿಢೀರ್ ರದ್ದಾಯಿತು.
ಬೆಳಗ್ಗೆಯಿಂದ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮ ನಡೆಯುವ ಪಟ್ಟಣಶೆಟ್ಟಿಲೇ ಔಟ್ ಮೈದಾನದಲ್ಲಿ ಸೇರಿದ್ದರು. ಸಾವಿರಾರು ಯುವಕರು ಬೈಕ್ ರಾರಯಲಿಗೆ ಸಿದ್ಧರಾಗಿದ್ದರು. ಇಡೀ ಪಟ್ಟಣದಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಪೆಂಡಾಲ್ ಹಾಗೂ ವೇದಿಕೆ ಕೂಡ ಸಿದ್ಧಗೊಂಡಿದ್ದವು. ಜೊತೆಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ದಾವಣಗೆರೆಯಲ್ಲಿದ್ದ ಸಿದ್ದರಾಮಯ್ಯ ಅವರು ಕಾರ್ಯಕ್ರಮ ರದ್ದುಪಡಿಸಿ ಮೈಸೂರಿಗೆ ಪ್ರಯಾಣ ಬೆಳಸಿದರು.
ಮುಖಂಡರಿಂದ ಶ್ರದ್ಧಾಂಜಲಿ:
ಕಾರ್ಯಕ್ರಮ ವೇದಿಕೆಯಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಧ್ರುವನಾರಾಯಣ(Dhruvanarayan) ಅವರ ಬೃಹತ್ ಭಾವಚಿತ್ರ ಇರಿಸಿ ಮೌನಾಚಾರಣೆ ನಡೆಸಿ ಪುಪ್ರ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು. ಮಾಜಿ ಶಾಸಕ ಶಾಂತನಗೌಡ ಮಾತನಾಡಿ, ಧ್ರುವನಾರಾಯಣ ಸರಳ ಸಜ್ಜನಿಕೆ ರಾಜಕಾರಣಿ ನಿಧನದಿಂದ ಪಕ್ಷಕ್ಕೆ ನಷ್ಟವಾಗಿದ್ದು ಅವರ ಕುಟುಂಬಕ್ಕೆ ಅಗಲಿಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದರು.
ಮಂಡ್ಯದಲ್ಲಿ ನಾಳೆ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು: ಮೋದಿ ಕಾರ್ಯಕ್ರಮಕ್ಕೆ ಟಾಂಗ್ ಕೊಡುವ ಯತ್ನ ವಿಫಲ
ಹೊನ್ನಾಳಿ, ನ್ಯಾಮತಿ ಹಾಗೂ ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದರ್ಶನ್ ಬಳ್ಳೇಶ್ವರ, ಜಿ.ಪಂ.ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ತಾಲೂಕು ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು. ಸೇರಿದ್ದ ಜನರು ಊಟ ಮಾಡಿ ತಮ್ಮ ಊರುಗಳಿಗೆ ತೆರಳಿದರು.
ಪಾದರಸದಂತೆ ಕೆಲಸ ಮಾಡುತ್ತಿದ್ದ ಧ್ರುವನಾರಾಯಣ
ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ್ ನಿಧನ ನನಗಷ್ಟೇ ಅಲ್ಲ, ನಮ್ಮ ಪಕ್ಷ, ನಾಯಕರು, ಕಾರ್ಯಕರ್ತರಿಗೆ ತುಂಬಲಾರದ ನಷ್ಟಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧ್ರುವನಾರಾಯಣಗೆ ಇನ್ನೂ 61 ವರ್ಷವಷ್ಟೇ, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಪಾದರಸದಂತೆ ಕೆಲಸ ಮಾಡುತ್ತಿದ್ದ, ಆರೋಗ್ಯವಂತ ವ್ಯಕ್ತಿ ಅಗಲಿದ್ದಾರೆಂದರೆ ವಿಧಿಯ ಆಟದ ಮುಂದೆ ನಾವ್ಯಾರೂ ಆಡೋಕೆ ಆಗೊಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಎನ್ಎಸ್ಯುಐನಿಂದ ಹಂತ ಹಂತವಾಗಿ ಬೆಳೆದು ಬಂದವರು ಧ್ರುವನಾರಾಯಣ. 2 ಬಾರಿ ಶಾಸಕ, 2 ಸಲ ಸಂಸದನಾಗಿ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಧ್ರುವನಾರಾಯಣಗೆ ನಂಬರ್ ಒನ್ ಲೋಕಸಭಾ ಸದಸ್ಯ ಅಂತಲೇ ಮೆಚ್ಚುಗೆಯಿಂದ ಕರೆಯುತ್ತಿದ್ದೆವು ಎಂದು ಸ್ಮರಿಸಿದರು.
ಧಣಿವರಿಯದಂತೆ ಪಕ್ಷಕ್ಕಾಗಿ ಕೆಲಸ ಮಾಡಿದವರು, ರಾಜ್ಯಾದ್ಯಂತ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಭ್ಯರ್ಥಿಗಳ ಆಯ್ಕೆಯಲ್ಲೂ ಧ್ರುವನಾರಾಯಣ ಸಕ್ರಿಯರಾಗಿದ್ದರು. ಮೈಸೂರು ಭಾಗದಿಂದ ಬಂದ ಪ್ರಬಲ ದಲಿತ ನಾಯಕ. ಭಾರವಾದ ಮನಸ್ಸಿನಿಂದ ಧ್ರುವನಾರಾಯಣ ಅಗಲಿಕೆಗೆ ಸಂತಾಪ ಸೂಚಿಸುತ್ತೇವೆ ಎಂದು ತಿಳಿಸಿದರು.
ಮೃತರ ಪತ್ನಿ, ಮಕ್ಕಳು, ಕುಟುಂಬ ವರ್ಗ, ಬಂಧು-ಬಳಗ, ಬೆಂಬಲಿಗರು, ಹಿತೈಷಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಧೃವನಾರಾಯಣ ಅಗಲಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಒಂದು ಕ್ಷಣ ಧೃವನಾರಾಯಣರನ್ನು ನೆನೆಯುತ್ತಾ ಭಾವುಕರಾದರು.
ಇಂದು ಬಸವಾಪಟ್ಟಣಕ್ಕೆ ಪ್ರಜಾಧ್ವನಿ ಯಾತ್ರೆ: ನಾಳೆ ಹೊನ್ನಾಳಿಗೆ ಸಿದ್ದರಾಮಯ್ಯ
ಹೆಲಿಕಾಪ್ಟರ್ನಲ್ಲಿ ಪ್ರಯಾಣ
ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ನಗರದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶ ಮೊಟಕುಗೊಳಿಸಿದ ಸಿದ್ದರಾಮಯ್ಯ, ಸಲೀಂ ಅಹಮ್ಮದ್ ಇತರರು ಹೆಲಿಕಾಪ್ಟರ್ನಲ್ಲಿ ಧ್ರುವನಾರಾಯಣರ ಅಂತಿಮ ದರ್ಶನಕ್ಕೆ ಪ್ರಯಾಣ ಬೆಳೆಸಿದರು.
ಧ್ರುವನಾರಾಯಣ ಜೊತೆಗಿನ ದಶಕಗಳ ತಮ್ಮ ಒಡನಾಟ, ಹಂತ ಹಂತವಾಗಿ ಪಕ್ಷದಲ್ಲಿ ಬೆಳೆದು ಬಂದಿದ್ದನ್ನು ಮೆಲುಕು ಹಾಕಿದರು. ಧ್ರುವನಾರಾಯಣರ ಅಗಲಿಕೆ ಪಕ್ಷಕ್ಕಷ್ಟೇ ಅಲ್ಲ, ರಾಜ್ಯಕ್ಕೆ ತುಂಬಲಾರದ ನಷ್ಟ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸುತ್ತೇವೆ
ಸಲೀಂ ಅಹಮ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.