
ಬೆಂಗಳೂರು (ಆ.24): ಧರ್ಮಸ್ಥಳದ ವಿಷಯದಲ್ಲಿ ಬಿಜೆಪಿಯವರು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಯಾವ ದೇವರನ್ನೂ ಅವರು ಬಿಟ್ಟಿಲ್ಲ, ಎಲ್ಲಿ ಲಾಭ ಆಗುತ್ತದೋ ಅಲ್ಲಿಗೆ ಹೊರಡುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಧರ್ಮಸ್ಥಳ ವಿಷಯ ಮುಂದಿಟ್ಟುಕೊಂಡು ಬಿಜೆಪಿ ಧರ್ಮ ಸಂರಕ್ಷಣಾ ಯಾತ್ರೆ ನಡೆಸಲು ಮುಂದಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರಿಗೆ ದೇಶದ ಐಕ್ಯತೆ, ಒಗ್ಗಟ್ಟು ಬೇಕಿಲ್ಲ, ಭಾತೃತ್ವ ಉಳಿಸಿಕೊಳ್ಳುವುದೂ ಬೇಕಿಲ್ಲ.
ಕೊನೆಗೂ ಕ್ಷೇತ್ರ ಪವಿತ್ರ ಎಂದು ಗೊತ್ತಾಗಿದೆ. ತನಿಖೆ ಒಂದು ರೀತಿಯಲ್ಲಿ ಕಳಂಕದಿಂದ ಹೊರ ಬರಲು ಕಾರಣವಾಗಿದೆ. ಇದು ಬಿಜೆಪಿಗರ ಹೊಟ್ಟೆ ಉರಿಗೆ ಕಾರಣವಾಗಿದೆ ಎಂದರು. ಬಿಜೆಪಿ ನಾಯಕರಲ್ಲೇ ಸಾಕಷ್ಟು ಗೊಂದಲಗಳಿವೆ. ಇಡೀ ಗೊಂದಲ ಸೃಷ್ಟಿಯಾಗಿದ್ದೇ ಕಡಲ ತೀರದ ರಾಜಕಾರಣದಿಂದ. ಬಿಜೆಪಿಯವರಿಗೆ ಇದು ಕೊನೆಗಾಲ ಎಂದ ಅವರು, ಬಂಧಿತ ಮಾಸ್ಕ್ ಮ್ಯಾನ್ ಯಾರು ಎಂಬುದು ಗೊತ್ತಿಲ್ಲ. ನಮಗೆ ಕ್ಷೇತ್ರ ಹಾಗೂ ಶ್ರೀ ಮಂಜುನಾಥ ಮುಖ್ಯ ಅಷ್ಟೇ ಎಂದು ಹೇಳಿದರು.
ಬಿಜೆಪಿವರನ್ನೇ ಹಿಡಿಯಲು ಆಗುತ್ತಾ?: ಶಾಸಕ ವೀರೇಂದ್ರ ಪಪ್ಪಿ, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಮನೆ ಮೇಲೆ ಇ.ಡಿ. ರೇಡ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ನಡುವೆ ಸ್ನೇಹ ಇರಬಹುದು, ವ್ಯಾವಹಾರಿಕವಾಗಿ ಏನೂ ಇಲ್ಲ, ಅಷ್ಟಕ್ಕೂ ಇ.ಡಿ. ಕಾಂಗ್ರೆಸ್ನವರನ್ನೇ ಹಿಡಿಯಬೇಕು. ಬಿಜೆಪಿಯವರನ್ನು ಹಿಡಿಯಲು ಆಗುತ್ತಾ ಎಂದು ವ್ಯಂಗ್ಯವಾಡಿದರು.
ಸರ್ವ ಸಿದ್ಧಾಂತ ತಿಳಿದಿರುವ ಡಿಕೆಶಿ: ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್ಎಸ್ಎಸ್ ಗೀತೆ ಹೇಳಿದ್ದಾರೆ. ಅವರು ಆರ್ಎಸ್ಎಸ್, ಕಮ್ಯುನಸ್ಟ್ ಸೇರಿ ಎಲ್ಲ ಸಿದ್ಧಾಂತಗಳನ್ನೂ ತಿಳಿದುಕೊಂಡಿದ್ದಾರೆ. ಕೆಲವರು ಭಯಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಮಾಧ್ಯಮದವರು ಆರ್ಎಸ್ಎಸ್ನಲ್ಲಿ ರಿಯಾಲಿಟಿ ಚೆಕ್ ಮಾಡಿದರೆ ಯಾರು ನಕಲಿ ಸಿದ್ಧಾಂತಿಗಳು ಎಂದು ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರಿಗೆ ಅನುಕೂಲ ಕಲ್ಪಿಸುವುದೇ ಗುರಿ: ಹಾಲು ಉತ್ಪಾದಕ, ಗ್ರಾಹಕ ಹಾಗೂ ಹಾಲು ಒಕ್ಕೂಟದ ಸಿಬ್ಬಂದಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದೇ ನನ್ನ ಗುರಿ ಎಂದು ತಿಳಿಸಿದರು. ಒಕ್ಕೂಟದ ನಷ್ಟ ಸರಿದೂಗಿಸುವುದು ನನ್ನ ಮೊದಲ ಆದ್ಯತೆ. ಕಾಲ್ ಸೆಂಟರ್ ಮೂಲಕ ರೈತರ, ಗ್ರಾಹಕರ ದಿನನಿತ್ಯದ ಸಮಸ್ಯೆಗಳನ್ನು 24 ಗಂಟೆಯೊಳಗೆ ಬಗೆಹರಿಸಲು ಪ್ರಯತ್ನ, ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸುವ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಹೀಗೆ ಹಲವಾರು ಸುಧಾರಣೆಗಳನ್ನು ಮುಂದಿಟ್ಟುಕೊಂಡು ಒಕ್ಕೂಟವನ್ನು ಲಾಭದಾಯಕವಾಗಿ ಬೆಳೆಸುವ ಚಿಂತನೆ ನಡೆಸಿರುವುದಾಗಿ ಹೇಳಿದರು.
ತಾಲೂಕು ಹಾಲು ಉತ್ಪಾದಿಸುವ ರೈತರು ಗುಣಮಟ್ಟದಿಂದ ಕೂಡಿದ 4 ಲಕ್ಷ ಲೀಟರ್ ಉತ್ಪಾದನೆ ಮಾಡಿದಲ್ಲಿ, ರೈತರಿಗೆ ಹೆಚ್ಚಿನ ದರ ನೀಡಲು ಅನುಕೂಲವಾಗುವುದಾಗಿ ತಿಳಿಸಿದರು. ಬೆಂಗಳೂರು ಹಾಲು ಒಕ್ಕೂಟ ಲಾಭ ಗಳಿಸಬೇಕಾದರೆ ರೈತರ, ಗ್ರಾಹಕರ ಸಹಕಾರ ಅಗತ್ಯ, ನಂದಿನಿ ಉತ್ಪನ್ನಗಳನ್ನೇ ಜನ ಕೊಂಡುಕೊಳ್ಳುವ ರೀತಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಇದಕ್ಕೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕರಿಸಿದಾಗ ಒಕ್ಕೂಟ ಲಾಭ ಗಳಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.