
ಬೆಂಗಳೂರು: ದಶಕಗಳ ಕಾಲ ಕರ್ನಾಟಕ ರಾಜಕಾರಣದ ಅಜಾತಶತ್ರುವಾಗಿ ಮೆರೆದಿದ್ದ ದಿವಂಗತ ಎನ್.ಧರ್ಮಸಿಂಗ್ ಅವರ ನಿವಾಸದಲ್ಲಿ ಇಂದು ಸಂಭ್ರಮದ ಜೊತೆಗೆ ಭಾವನಾತ್ಮಕ ವಾತಾವರಣ ಮನೆಮಾಡಿದೆ. ಅವರ ಪುತ್ರ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಕೊನೆಗೂ ಸಚಿವ ಸ್ಥಾನ ಒಲಿದು ಬಂದಿದ್ದು, ಈ ಸುದ್ದಿ ಕೇಳುತ್ತಿದ್ದಂತೆಯೇ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಅಜಯ್ ಸಿಂಗ್ಗೆ ಸ್ಥಾನ ಸಿಕ್ಕಿರುವ ಅಧಿಕೃತ ಮಾಹಿತಿ ಹೊರಬೀಳುತ್ತಿದ್ದಂತೆಯೇ ಬೆಂಗಳೂರಿನ ಅಜಯ್ ಸಿಂಗ್ ನಿವಾಸದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಮಗ ಮಂತ್ರಿಯಾಗುತ್ತಿರುವುದನ್ನು ಕೇಳಿ ಸಂತಸಗೊಂಡ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಆನಂದಬಾಷ್ಪ ಸುರಿಸಿದರು. ಮಗನನ್ನು ಪ್ರೀತಿಯಿಂದ ತಬ್ಬಿಕೊಂಡು ಹರಸಿದರು. ಅಜಯ್ ಸಿಂಗ್ ಅವರು ಕೂಡ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಸಚಿವ ಸ್ಥಾನ ಘೋಷಣೆಯಾದ ಬೆನ್ನಲ್ಲೇ ಅಜಯ್ ಸಿಂಗ್ ಅವರು ತಮ್ಮ ತಂದೆ, ಮಾಜಿ ಸಿಎಂ ದಿವಂಗತ ಎನ್. ಧರ್ಮಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಮಗನಿಗೆ ಮಂತ್ರಿ ಸ್ಥಾನ ಸಿಗಬೇಕೆಂಬುದು ಇಡೀ ಕುಟುಂಬದ ದೀರ್ಘಕಾಲದ ಕನಸಾಗಿತ್ತು. ಪ್ರತಿ ಬಾರಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ವೇಳೆ ಅಜಯ್ ಸಿಂಗ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪುತ್ತಿತ್ತು.
ಅಜಯ್ ಸಿಂಗ್ ಅವರು ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ನಿಷ್ಠಾವಂತ ಮತ್ತು ಯುವ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಇವರು ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಪ್ರಭಾವ ಹೊಂದಿದ್ದಾರೆ. ತಮ್ಮ ತಂದೆಯ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಜಯ್ ಸಿಂಗ್, ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.
2004 ರಿಂದ 2006 ರವರೆಗೆ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಧರ್ಮಸಿಂಗ್ ಅವರು 2017ರಲ್ಲಿ ನಿಧನರಾದರು. ಅವರ ನಿಧನದ ನಂತರ ಕುಟುಂಬಕ್ಕೆ ಸಿಗುತ್ತಿರುವ ಅತಿದೊಡ್ಡ ರಾಜಕೀಯ ಮನ್ನಣೆ ಇದಾಗಿದೆ. ಅಜಯ್ ಸಿಂಗ್ ಸಚಿವರಾಗುತ್ತಿರುವುದು ಅವರ ಕ್ಷೇತ್ರವಾದ ಜೇವರ್ಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.