ಬಿಎಸ್ವೈ ಸರ್ವಾನುಮತದ ಆಯ್ಕೆ, ಬದಲಾವಣೆ ಪ್ರಶ್ನೆಯೇ ಇಲ್ಲ: ರವಿ| ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ ಎಳೆದ ಸಚಿವ
ರಾಮನಗರ[ಅ.09]: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ದೇಶದ ಇತಿಹಾಸದಲ್ಲಿ 75 ವರ್ಷ ವಯಸ್ಸು ದಾಟಿರುವವರಿಗೆ ಅಧಿಕಾರ ಕೊಟ್ಟಿರುವುದು ಯಡಿಯೂರಪ್ಪ ಅವರಿಗೆ ಮಾತ್ರ. ಚುನಾವಣೆ ಪೂರ್ವದಲ್ಲೇ ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದೆವು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರೇ ಅವಧಿ ಪೂರ್ಣಗೊಳಿಸಬೇಕೆಂಬ ಅಪೇಕ್ಷೆ ಇದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆಯ ಗೊಂದಲಗಳಿಗೆ ತೆರೆ ಎಳೆದರು.
‘ಕೈ’ ಒಡೆದ ಮನೆ: ಕಾಂಗ್ರೆಸ್ನಲ್ಲಿ ಸರ್ವಾನುಮತವಿಲ್ಲ. ಪ್ರತಿಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ಸಿಗರದು ಹೊಡೆದ ಮನಸ್ಸುಗಳಾಗಿವೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಅವರೇ ವಿಪಕ್ಷ$ನಾಯಕರಾದರೆ, ಒಂದು ಗುಂಪಿನ ನಾಯಕರಾಗುತ್ತಾರೆ ಎಂದರು.