
ವಿಜಯಪುರ (ಫೆ.26): ಗುಂಟಾ ಪ್ಲಾಟ್ ಪಡೆದವರು ಬಡವರು, ಅವರಿಗೆ ತೊಂದರೆ ನೀಡುವುದಿಲ್ಲ, ಆದರೆ ಗುಂಟಾ ಪ್ಲಾಟ್ ಹಾಕಿ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ 2024-25ನೇ 2ನೇ ಹಾಗೂ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈಗ ಒಂದೇ ಬಾರಿ( ಒನ್ ಟೈಂ) ಎಂದು ಸರ್ಕಾರ ಗುಂಟಾ ಪ್ಲಾಟ್ ಸಕ್ರಮಗೊಳಿಸಲು ಮುಂದಾಗಿದೆ. ಆದರೆ ಇದು ಕೊನೆಯಾಗಬೇಕು. ಎಲ್ಲ ರೀತಿ ಸೌಕರ್ಯ ಕಲ್ಪಿಸುವ ಲೇಔಟ್ ನಿರ್ಮಾಣದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾವೇಕೆ ಎಲ್ಲ ಪ್ರಕ್ರಿಯೆ ಪೂರೈಸಬೇಕು. ಗುಂಟಾ ಪ್ಲಾಟ್ ಪಡೆದುಕೊಂಡವರು ಬಡವರು, ಹೀಗಾಗಿ ಅವರಿಗೆ ತೊಂದರೆ ನೀಡುವುದು ನಮ್ಮ ಉದ್ದೇಶವಿಲ್ಲ ಎಂದರು.
ಭೂ ಪರಿವರ್ತನೆ ಶುಲ್ಕ ಕಟ್ಟದೇ ನಿಯಮಾವಳಿ ಮೀರಿ ಗುಂಟಾ ಪ್ಲಾಟ್ ಮಾಡಿ ಮಾರಾಟ ಮಾಡುವ ಮಾಫಿಯಾದವರ ಮೇಲೆ ನಮಗೆ ಆಕ್ಷೇಪವಿದೆ. ಹೀಗಾಗಿ ಈ ರೀತಿ ಗುಂಟಾ ಲೇಔಟ್ ನಿಲ್ಲಬೇಕು, ಈ ರೀತಿಯಾಗಿ ಲೇಔಟ್ ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ, ಸರ್ಕಾರಕ್ಕೂ ಸಹ ಪ್ರಸ್ತಾವನೆ ಸಲ್ಲಿಸಿ. ಬಡವರಿಗೆ ಅನುಕೂಲವಾಗಲಿ ಎಂದು ಬಿ-ಖಾತಾ ನೋಂದಣಿ ಆರಂಭಿಸಿದೆ. ಬಹುಮುಖ್ಯವಾಗಿ ರಾಜಕಾಲುವೆ, ಐತಿಹಾಸಿಕ ಸ್ಮಾರಕ ಒತ್ತುವರಿ ಮಾಡಿಕೊಂಡವನ್ನು ಬಿ-ಖಾತಾ ನೀಡುವ ಕೆಲಸ ಮಾಡಬೇಡಿ, ಈ ಬಗ್ಗೆ ಒಂದು ಸೂಕ್ತವಾದ ಚೆಕ್ ಲಿಸ್ಟ್ ಮಾಡಿ ಎಂದು ನಿರ್ದೇಶನ ನೀಡಿದರು. ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಗುಂಟಾ ಪ್ಲಾಟ್ ನೋಂದಣಿಗೆ ಸಂಬಂಧಿಸಿದಂತೆ ಬಿ-ಖಾತಾ ನೀಡುವ ಪ್ರಕ್ರಿಯೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಿರಾಣಿ ಅಂಗಡಿಗಳಲ್ಲಿ ಮದ್ಯ: ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟದ ಬಗ್ಗೆ ಗಮನ ಹರಿಸಲು ಸೂಚಿಸಿದ್ದೆ, ಅಂಕಿ ಅಂಶ ಹೇಳಬೇಡಿ ವಾಸ್ತವಿಕ ನೆಲೆಗಟ್ಟಿನಲ್ಲಿ ಹೇಳಿ ಎಂದು ಸಚಿವ ಪಾಟೀಲ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು. ನಿಮಗೆ ಎಲ್ಲ ಗೊತ್ತಿದೆ, ಕೆಲವು ಅಬಕಾರಿ ಇಲಾಖೆ ಅಧಿಕಾರಿಗಳೇ ಅಕ್ರಮ ಮದ್ಯ ಮಾರಾಟಗಾರರಿಗೆ ಮಾಹಿತಿ ನೀಡಿ ನಾವು ರೇಡ್ ಮಾಡುತ್ತಿದ್ದೇವೆ, ಖಾಲಿ ಮಾಡಿ ಎಂದು ಹೇಳುತ್ತಾರೆ. ರೇಡ್ ಮಾಡಿದ್ರು ಸಿಕ್ಕಿಲ್ಲ ಸರ್ ಎಂದು ಹೇಳುತ್ತಾರೆ. ಇದರ ಹಿಂದೆ ಯಾರಿದ್ದಾರೆ ನನಗೆ ಗೊತ್ತಿದೆ, ಅಬಕಾರಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು. ನಕಲಿ ಸ್ಪೀರಿಟ್ ಮಾರಾಟ ಜಿಲ್ಲೆಯಲ್ಲಿ ಆತಂಕದ ಸಂಗತಿ, ಇದನ್ನು ಸಂಪೂರ್ಣವಾಗಿ ಮಟ್ಟ ಹಾಕಿ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆಗ ಸ್ಪಷ್ಟನೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಅಕ್ರಮ ಮದ್ಯ ಮಾರಾಟ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಸಂತೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು, ಅದನ್ನು ದಾಳಿ ನಡೆಸಿ ತಡೆಗಟ್ಟಲಾಗಿದೆ ಎಂದು ತಿಳಿಸಿದರು.
ಮರಾಠಿ ಪುಂಡರ ವಿರುದ್ಧ ಕನ್ನಡಿಗರ ಆಕ್ರೋಶ: ಗಡೀಪಾರಿಗೆ ಸರ್ಕಾರಕ್ಕೆ ಕರವೇ ಒತ್ತಾಯ
ಚೈನ್ನೈ ಮಾದರಿಯಲ್ಲಿ ಮೊಸಳೆ ಪಾರ್ಕ್: ಚೆನ್ನೈನ ಮೊಸಳೆ ಪಾರ್ಕ್ ಮಾದರಿಯಲ್ಲಿ ಇಲ್ಲಿಯೂ ಮೊಸಳೆ ಪಾರ್ಕ್ ನಿರ್ಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು. ಈ ಬಗ್ಗೆ ವಿವರಣೆ ನೀಡಿದ ಅರಣ್ಯಾಧಿಕಾರಿಗಳು, ಮೊಸಳೆ ಪಾರ್ಕ್ ನಿರ್ಮಾಣದಿಂದ ಮೊಸಳೆ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ, ಈ ಹಿಂದೆ ತಜ್ಞರ ಜೊತೆ ಸಮಾಲೋಚಿಸಿ ಮೊಸಳೆ ಪಾರ್ಕ್ ನಿರ್ಮಾಣಕ್ಕೆ ನಾಟ್ ಫಾಸಿಬಲ್ ಎಂದು ವರದಿ ನೀಡಿದ್ದಾರೆ. ಚೆನ್ನೈನಲ್ಲಿ ಈ ರೀತಿ ಉದ್ಯಾನವನ ಇದೆ ಎಂದಾಗ ಆ ಉದ್ಯಾನನವನ್ನು ವೀಕ್ಷಣೆ ಮಾಡಬೇಕು ಎಂದರು. ಶಾಸಕರಾದ ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ಕೇಶವ ಪ್ರಸಾದ್, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಎಸ್.ಪಿ. ಲಕ್ಷ್ಮಣ ನಿಂಬರಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ ಮುಂತಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.