ಸಚಿವ ಸೋಮಶೇಖರ್‌ ಬಿಜೆಪಿ ಚೇಲಾ: ಎಂ.ಲಕ್ಷ್ಮಣ್‌

By Kannadaprabha NewsFirst Published Jul 12, 2022, 10:36 AM IST
Highlights

*  ಕಾಂಗ್ರೆಸ್‌ಗೆ ಬಯ್ಯುವ ನೈತಿಕತೆ ಎಸ್‌ಟಿಎಸ್‌ಗೆ ಇಲ್ಲ
*  ರಾಜಕೀಯ ಬದುಕು ನೀಡಿದ್ದೇ ಕಾಂಗ್ರೆಸ್‌
*  ನಿಮ್ಮಿಂದ ಬಿಜೆಪಿ ಮುಳುಗುತ್ತಿದೆ 

ಬೆಂಗಳೂರು(ಜು.12):  ‘ರಾಜಕೀಯವಾಗಿ ನಿಮಗೆ ಎಲ್ಲಾ ಅವಕಾಶ ಹಾಗೂ ಅಧಿಕಾರ ನೀಡಿದ ಕಾಂಗ್ರೆಸ್ಸನ್ನು ಬಿಟ್ಟು ಬಿಜೆಪಿ ಚೇಲಾ ಆಗಿ ಹೋದ ನಿಮಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನೀವು ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಗೆಲುವು ಸಾಧಿಸುತ್ತಿದೆ. ಹೀಗಾಗಿ ನಿಮ್ಮಿಂದ ಬಿಜೆಪಿ ಮುಳುಗುತ್ತಿದೆಯೇ ಹೊರತು ಕಾಂಗ್ರೆಸ್‌ ಅಲ್ಲ’. ಇದು ‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಠೇವಣಿ ಸಿಗುವುದಿಲ್ಲ’ ಎಂದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ತಿರುಗೇಟು ನೀಡಿದ ಪರಿ.

ಕಾಂಗ್ರೆಸ್‌ನಿಂದ ಬೆಳೆದು ಆಪರೇಷನ್‌ ಕಮಲದಿಂದ ಬಿಜೆಪಿಗೆ ಚೇಲಾ ಆಗಿ ಸಚಿವರೂ ಆಗಿದ್ದೀರಿ. ಆದರೆ, ನೀವು ಬಿಜೆಪಿಗೆ ಹೋದ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಲ್ಲಿ ಪಕ್ಷವನ್ನೇ ಇಬ್ಬಾಗ ಮಾಡಿದ್ದೀರಿ. ಅಲ್ಲಿನ ಪ್ರಭಾವಿ ನಾಯಕ ರಾಮ್‌ ದಾಸ್‌ ಅವರನ್ನು ಮೂಲೆಗುಂಪು ಮಾಡಿದ್ದೀರಿ. ಹೀಗಾಗಿ ಮೈಸೂರಿನಲ್ಲಿ ಬಿಜೆಪಿ ಮುಳುಗಿದ್ದು, ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸೋತಿದ್ದೀರಿ. ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಸೇರಿ ಎಲ್ಲಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಿದ್ದೀರಿ. ಇನ್ನು ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ಸನ್ನು ಮುಳುಗುವ ಪಕ್ಷ ಎನ್ನುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯಸಭಾ ಚುನಾವಣೆ: 'ಕುಮಾರಸ್ವಾಮಿ ಕುಟುಂಬಕ್ಕೆ ಕುಪೇಂದ್ರ ರೆಡ್ಡಿ ಏಕೆ ಸಾಲ ಕೊಟ್ಟಿದ್ದಾರೆ?'

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ನಿಮಗೆ ಎಲ್ಲಾ ಅವಕಾಶಗಳನ್ನೂ ನೀಡಿದೆ. ಮೊದಲಿಗೆ ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಿಸಿ ಕಾಂಗ್ರೆಸ್‌ ನಿಮಗೆ ಟಿಕೆಟ್‌ ನೀಡಿದೆ. ಆದರೆ ಅಲ್ಲಿ ಸೋತಿದ್ದಿರಿ. ಉತ್ತರಹಳ್ಳಿ, ಯಶವಂತಪುರದಲ್ಲಿ ಟಿಕೆಟ್‌ ನೀಡಿದರೂ ಗೆಲ್ಲಲಿಲ್ಲ. 2013ರಲ್ಲಿ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಸ್ಥಾನವನ್ನೂ ನೀಡಿ, ಶಾಸಕರನ್ನಾಗಿ ಮಾಡಿ ಬಿಡಿಎ ಅಧ್ಯಕ್ಷ ಸ್ಥಾನವನ್ನೂ ನೀಡಲಾಯಿತು. ಸಿದ್ದರಾಮಯ್ಯ ಸರ್ಕಾರದಿಂದ ಸಾವಿರಾರು ಕೋಟಿ ರುಪಾಯಿ ಅನುದಾನ ನೀಡಲಾಯಿತು. ಇಷ್ಟುನೀಡಿದ ಪಕ್ಷಕ್ಕೆ ದ್ರೋಹ ಬಗೆದು ಆಪರೇಷನ್‌ ಕಮಲಕ್ಕೆ ತುತ್ತಾಗಿ ಬಿಜೆಪಿ ಚೇಲಾ ಆಗಿಬಿಟ್ಟಿರಿ. ನಿಮಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
 

click me!