
ಬೆಂಗಳೂರು (ಮಾ.06): ಕರ್ನಾಟಕ ಸರ್ಕಾರ ಹಾಗೂ ತೈವಾನ್ ಮೂಲದ ಫಾಕ್ಸ್ಕಾನ್ ಕಂಪನಿಯ ನಡುವೆ ರಾಜ್ಯದಲ್ಲಿ ಹೂಡಿಕೆ ಕುರಿತು ಒಪ್ಪಂದ ಆಗಿದೆ ಎಂಬುದನ್ನು ಫಾಕ್ಸ್ಕಾನ್ ಕಂಪನಿ ತಳ್ಳಿ ಹಾಕಿರುವ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಫಾಕ್ಸ್ಕಾನ್ ಜತೆ ಒಪ್ಪಂದಕ್ಕೆ ಸಹಿ ಮಾಡಲಾಯಿತು ಎಂದಿರುವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಕಂಪನಿ ನಿರಾಕರಿಸಿದೆ. ಹೀಗಿರುವಾಗ ರಾಜ್ಯಕ್ಕೆ ಸುಳ್ಳು ಹೇಳಿದ್ದೇಕೆ? ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ಮರೆತು ‘ಫೇಕ್ನ್ಯೂಸ್’ ಹರಿಬಿಟ್ಟಿದ್ದೇಕೆ? ಉದ್ಯೋಗ ಬಯಸುತ್ತಿರುವ ಯುವಕರಿಗೆ ಕಿವಿ ಮೇಲೆ ಹೂವು ಇಟ್ಟಿದ್ದೇಕೆ’ ಎಂದು ಪ್ರಶ್ನಿಸಿದೆ. ಒಪ್ಪಂದವೇ ಆಗದೆ ಐಫೋನ್ ತಯಾರಿಕಾ ಘಟಕ ಸ್ಥಾಪನೆ ಆಗಿಯೇ ಬಿಡುತ್ತದೆ ಎಂದು ಕಿವಿ ಮೇಲೆ ಹೂವು ಇಡುವ ಮೂಲಕ ಸುಳ್ಳೇ ಬಿಜೆಪಿಯ ಮನೆದೇವರು ಎಂಬುದಕ್ಕೆ ಬೊಮ್ಮಾಯಿ ಮತ್ತೊಮ್ಮೆ ಪುರಾವೆ ಒದಗಿಸಿದ್ದಾರೆ.
ಧರ್ಮದ ಹೆಸರಲ್ಲಿ ಹಿಂಸೆ, ಭಯೋತ್ಪಾದನೆ: ಸಿಎಂ ಬೊಮ್ಮಾಯಿ ಆತಂಕ
ಸುಳ್ಳು ಹೇಳುವ ಮೂಲಕ ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು, ಕರ್ನಾಟಕದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದ್ದಾರೆ ಎಂದು ಹೇಳಿದೆ. ಅಂತಿಮ ಒಪ್ಪಂದವಾಗದೆ ಐಫೋನ್ ಘಟಕ ಸ್ಥಾಪನೆ ಆಗಿಯೇಬಿಟ್ಟಿತು ಎಂದು ಆತುರದಲ್ಲಿ ಘೋಷಿಸಿದ್ದೇಕೆ? ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂಜರಿಯುತ್ತಿರುವುದೇಕೆ? ರಾಜ್ಯದ ಜನರ ಕಿವಿ ಮೇಲೆ ಹೂವು ಇಟ್ಟಿದ್ದೇಕೆ? ಫಾಕ್ಸ್ಕಾನ್ ಸಂಸ್ಥೆ ನಿರಾಕರಿಸಿದ್ದೇಕೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ದೇಶಕ್ಕೆ ಅಡಿಪಾಯ ಹಾಕಿದ್ದು ಕಾಂಗ್ರೆಸ್: ದೇಶಕ್ಕೆ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಅನ್ನೋದನ್ನು ಯಾರೂ ಮರೆಯಲಾಗದು ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್ ತಿಳಿಸಿದರು. ಪ್ರಧಾನಿ ಮೋದಿಯವರು ನಾನು ಹಂಗೆ ಮಾಡಿದ್ದೇನೆ, ಹಿಂಗೆ ಮಾಡಿದ್ದೇನೆ ಅಂತಾ ಕೊಚ್ಚಿಕೊಳ್ತಾರೆ. ಆದರೆ ಅದಕ್ಕೆ ಅಡಿಪಾಯ ಹಾಕಿದವರು ಯಾರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಭಾರತ ದೇಶದ ಎಲ್ಲದಕ್ಕೂ ಭದ್ರ ಬುನಾದಿ, ಅಡಿಪಾಯ ಹಾಕಿದ್ದು ಕಾಂಗ್ರೆಸ್ ಪಕ್ಷ. ಇದನ್ನು ಬಿಜೆಪಿ ಪಕ್ಷ ಅರಿಯಬೇಕಿದೆ. ಎಲ್ಲಿ ನೋಡಿದ್ರು ಲಂಚ, ಭ್ರಷ್ಟಾಚಾರ.
ಎಲ್ಲೂ ಕೂಡ ಅಭಿವೃದ್ಧಿ ಆಗ್ತಿಲ್ಲಾ. ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಜಾಸ್ತಿ ಆಯ್ತು. ಇದನ್ನು ನಿಲ್ಲಿಸೋದಕ್ಕೆ ನಿಮ್ಮ ಕೈಯಲ್ಲಿ ಆಗಲ್ಲ. ಶಾಸಕರನ್ನು ಕರೆದೊಯ್ದು ವಾಮಮಾರ್ಗದಲ್ಲಿ ಸರ್ಕಾರ ರಚಿಸಿ, ಭ್ರಷ್ಟಆಡಳಿತವನ್ನು ಕೊಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂರಿಂದ ಹಿಡಿದು ಎಲ್ಲಾ ಸಚಿವರು, ಶಾಸಕರು ಕೂಡ ಭ್ರಷ್ಟರು. ಏನೇ ಹೇಳಿದರೂ ಸಾಕ್ಷಿ ಕೊಡಬೇಕು ಅಂತೀರಾ. ಮೊನ್ನೆ ಬಿಜೆಪಿ ಶಾಸಕರ ಮಗ ಕಂತೆ-ಕಂತೆ ಹಣದೊಂದಿಗೆ ಸಿಕ್ಕಿಬಿದ್ದಿದ್ದಕ್ಕಿಂತ ಸಾಕ್ಷಿ ಬೇಕಾ ನಿಮಗೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ಬೊಮ್ಮಾಯಿಯವರು, ತಕ್ಷಣ ರಾಜೀನಾಮೆ ಕೊಡಬೇಕು. ನಡೀರಿ ಚುನಾವಣೆಗೆ ಹೋಗೋಣ. ಬಿಜೆಪಿಯ ಭ್ರಷ್ಟಸರ್ಕಾರವನ್ನು ಕಿತ್ತೊಗೆಯಬೇಕು.
ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಜಾರಿಗೊಳಿಸಲು ಸಿಎಂ ಬೊಮ್ಮಾಯಿಗೆ ತಾಕತ್ತಿಲ್ಲ: ಮಧು ಬಂಗಾರಪ್ಪ
ರಾಜೀವ್ಗಾಂಧಿಯವರ ಹೆಸರಿನಲ್ಲಿ ಇಂದು ಸಂಕಲ್ಪ ಮಾಡಿ ಹೋಗಬೇಕು. ಐದು ವರ್ಷದಿಂದ ಪ್ರಾಮಾಣಿಕವಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಬೇಕು. ರಾಜಕಾರಣದಲ್ಲಿ ಖರ್ಗೆ ಅಂತವರು ಸಿಗೋದು ಬಹಳ ಅಪರೂಪ. ಸಾಮಾನ್ಯ ಕಾರ್ಯಕರ್ತನಾಗಿದ್ದ ಅವರು, ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಎಲ್ಲಾ ಅಧಿಕಾರದಲ್ಲೂ ಪ್ರಾಮಾಣಿಕ ದಕ್ಷ ಆಡಳಿತ ನಡೆಸಿದ್ದಾರೆ. ಇಲ್ಲೊಂದು ಕಾಂಗ್ರೆಸ್ ಭವನ ಕಟ್ಟುತ್ತೇವೆ. ಅದನ್ನು ಉದ್ಘಾಟಿಸಲು ಎಐಸಿಸಿ ಅಧ್ಯಕ್ಷರು ಬರುತ್ತಾರೆ ಎಂದು ನಾವ್ಯಾರೂ ಊಹೆ ಮಾಡಿರಲಿಲ್ಲಾ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಕಾಂಗ್ರೆಸ್ ಭವನ ಕಟ್ಟಿಸಬೇಕು ಅಂತಾ ಸೋನಿಯಾಗಾಂಧಿಯವರು ಆದೇಶಿಸಿದ್ದರು. ಪ್ರತಿಯೊಬ್ಬ ಕಾರ್ಯಕರ್ತ ಈ ಕಟ್ಟಡಕ್ಕೆ ದೇಣಿಗೆ ನೀಡಿದ್ದಾನೆ. ಇದು ಕೆಪಿಸಿಸಿಯ ಸ್ವತ್ತು. ಭಾರತ ಇಂದು ಬಹಳ ದೊಡ್ಡದಾಗಿ ಬಲಿಷ್ಟವಾಗಿ ಬೆಳೆದಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.