
ಬೆಂಗಳೂರು (ಜು.29): ‘ಬಿಜೆಪಿ ನಾಯಕರು, ಶಾಸಕರು ಭಾರತದಲ್ಲಿನ ತಾಲಿಬಾನಿಗಳು. ಭಯೋತ್ಪಾದಕರಿಂದ ಕಾಂಗ್ರೆಸ್ನ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈವರೆಗೆ ಬಿಜೆಪಿಯ ಯಾರೊಬ್ಬರೂ ಸಾವನ್ನಪ್ಪದಿರುವುದು ಭಯೋತ್ಪಾದಕರ ಜತೆ ಅವರು ಶಾಮೀಲಾಗಿರುವುದನ್ನು ತೋರಿಸುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಪುತ್ರನ ಬಗ್ಗೆ ಬಿಜೆಪಿ ಶಾಸಕರೊಬ್ಬರು ಹೀನ ಹೇಳಿಕೆ ನೀಡಿದ್ದಾರೆ. ಇವೆಲ್ಲಾ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರೇರಿತ ಭಾಷಣಗಳು.
ಹೀಗಾಗಿ ಮೋದಿ ಅವರು ದಲಿತ ಸಚಿವರಾದ ಪರಮೇಶ್ವರ್ ಅವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಜನಪರ ವಿಚಾರಗಳು ಗೊತ್ತಿಲ್ಲ. ಈಗಾಗಲೇ ಜನರು ಬುದ್ಧಿ ಕಲಿಸಿದ್ದರೂ ಎಚ್ಚೆತ್ತುಕೊಳ್ಳದೆ ಕೇವಲ ಹೆಣ್ಣು ಮಕ್ಕಳ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಮಣಿಪುರದಲ್ಲಿ ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ಮಾಡಿದರೂ ಈವರೆಗೆ ಈ ಬಗ್ಗೆ ಪ್ರಧಾನಮಂತ್ರಿಗಳು ತುಟಿ ಬಿಚ್ಚಿಲ್ಲ’ ಎಂದು ಕಿಡಿ ಕಾರಿದರು.
ಸಿಎಂ ಎಲ್ಲರನ್ನೂ ಸಮಾಧಾನ ಮಾಡಲು ಆಗಲ್ಲ: ಸಚಿವ ಪ್ರಿಯಾಂಕ್ ಖರ್ಗೆ
‘ಬಿಜೆಪಿಯವರು ತಾಲಿಬಾನಿಗಳು. ಭಯೋತ್ಪಾದಕರನ್ನು ಕಂದಹಾರ್ವರೆಗೆ ಹೋಗಿ ಬಿಟ್ಟು ಬಂದವರು ಬಿಜೆಪಿಯವರು. ಶ್ರೀನಗರದಲ್ಲಿ ದೇವಿಂದರ್ ಸಿಂಗ್ ಎಂಬಾತ ಭಯೋತ್ಪಾದಕರನ್ನು ಗಡಿಯಲ್ಲಿ ನುಸುಳಲು ಅನುಕೂಲ ಮಾಡಿಕೊಟ್ಟಿದ್ದ. ಭಯೋತ್ಪಾದನೆಯಲ್ಲಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್ನವರು. ಬಿಜೆಪಿಯವರು ಯಾರೊಬ್ಬರೂ ಸಾವನ್ನಪ್ಪದಿರುವುದು ಭಯೋತ್ಪಾದಕರ ಜತೆ ಶಾಮೀಲಾಗಿರುವುದನ್ನು ತೋರುತ್ತದೆ’ ಎಂದರು. ಗೃಹ ಸಚಿವರ ಪುತ್ರನ ಬಗೆಗಿನ ಟೀಕೆಗೆ ಬಿಜೆಪಿ ಶಾಸಕರು ಕ್ಷಮೆ ಯಾಚಿಸಬೇಕೆ ಎಂಬ ಪ್ರಶ್ನೆಗೆ, ‘ಅವನು ಯಾವ ಶಾಸಕ? ಆಟಕ್ಕಿಲ್ಲದ ಶಾಸಕ. ಇಂತಹ ಗಿಮಿಕ್ಗಳಿಂದ ಪ್ರಚಾರಕ್ಕೆ ಬರಲು ಹೀನ ಹೇಳಿಕೆ ನೀಡಿದ್ದಾರೆ. ಮೊದಲು ಮೋದಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಶಾಸಕರು, ಸಚಿವರ ಮಧ್ಯೆ ಸಮನ್ವಯತೆಯೇ ಇಲ್ಲ: ಬೊಮ್ಮಾಯಿ
ನನ್ನ ಧ್ವನಿ ಅಡಗಿಸಲು ಅಸಾಧ್ಯ: ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ‘ಮುಖ್ಯಮಂತ್ರಿ ಮಾಡುವುದೂ ಗೊತ್ತು, ಇಳಿಸುವುದೂ ಗೊತ್ತು’ ಎಂಬ ಕುತೂಹಲಕಾರಿ ಹೇಳಿಕೆ ನೀಡಿದ್ದ ತಾವು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದೀರಾ ಎಂಬ ಡಿಜಿಟಲ್ ಮಾಧ್ಯಮದ ಸಂದರ್ಶನವೊಂದರ ಪ್ರಶ್ನೆಗೆ ಹರಿಪ್ರಸಾದ್ ಈ ರೀತಿ ಉತ್ತರ ನೀಡಿದ್ದಾರೆ. ‘ನಾನು ವೈಯಕ್ತಿಕ ಹಿತಾಸಕ್ತಿಗೆ ಎಂದೂ ರಾಜಕೀಯ ಮಾಡಿದವನಲ್ಲ. ಸಾಮಾಜಿಕ ಬದಲಾವಣೆಗಾಗಿ ರಾಜಕೀಯಕ್ಕೆ ಬಂದವನು. ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಯಾವ ಅಧಿಕಾರದ ಮೇಲೂ ಲಾಬಿ ನಡೆಸಿದ ಇತಿಹಾಸವಿಲ್ಲ. ಅದರ ಮೇಲೆ ಆಸೆಯೂ ಇಲ್ಲ. ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋವನ್ನು ಸ್ವತಃ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.