
ಧಾರವಾಡ (ಅ.14): ರಾಜ್ಯ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿಯೇ ರೈತರ ಆತ್ಮಹತ್ಯೆ ಎನ್ನುವಂತಾಗಿದ್ದು, ಈ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳ ಗುರಿ ತಲುಪುವುದಕ್ಕಾಗಿ ರಾಜ್ಯದ ಆರೂವರೆ ಕೋಟಿ ಜನರ ಕ್ಷೇಮಾಭಿವೃದ್ಧಿ ಮರೆತು ದುರಾಡಳಿತ ನಡೆಸುತ್ತಿದೆ ಎಂದು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಕಿಡಿಕಾರಿದರು. ರಾಜ್ಯದಲ್ಲಿ ರೈತರ ಪರಿಸ್ಥಿತಿ ಗಂಭೀರವಾಗಿದೆ.
ರಾಜ್ಯದ 195 ತಾಲೂಕುಗಳಲ್ಲಿ ಬರ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಜಿಲ್ಲಾ ಉಸ್ತುವಾರಿಗಳು ಯಾರೊಬ್ಬರೂ ಹೊಲಗಳಿಗೆ ಹೋಗಿ ನೈಜ ಸ್ಥಿತಿ ಅರಿಯುವ ಪ್ರಯತ್ನ ಮಾಡಿಲ್ಲ. 135 ಜನ ಕಾಂಗ್ರೆಸ್ ಶಾಸಕರು ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು. ಇನ್ನು, ಹಿಂದಿನ ಸರ್ಕಾರಗಳು ರೈತರಿಗೆ ಅನೇಕ ಯೋಜನೆಗಳನ್ನು ನೀಡಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಬಂದ್ ಮಾಡಿದೆ. ರೈತರಿಗೆ ಆತ್ಮಹತ್ಯೆವೊಂದೇ ಮಾರ್ಗ ಎನ್ನು ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಾನೂ ಸಿಎಂ ಸ್ಥಾನದ ಆಕಾಂಕ್ಷಿ: ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್
ಕಾಂಗ್ರೆಸ್ನವರಿಂದಲೇ ಸರ್ಕಾರ ಬೀಳುತ್ತೆ: ಅಭಿವೃದ್ಧಿ ಹಾಗೂ ಇನ್ನಿತರ ವಿಚಾರವಾಗಿ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಅಸಮಾಧಾನವಿದೆ. ಕಾಂಗ್ರೆಸ್ನವರಿಂದ ಆ ಸರ್ಕಾರ ಬೀಳುತ್ತದೆ. ಬರುವ ದಿನಗಳಲ್ಲಿ ಕುಮಾರಸ್ವಾಮಿ ನೂರಕ್ಕೆ ನೂರಷ್ಟು ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿ.ಆರ್.ಪಾಟೀಲ, ರಾಜು ಕಾಗೆ, ಕಂಪ್ಲಿ ಗಣೇಶ ಹಾಗೂ ಬಸವರಾಜ ರಾಯರೆಡ್ಡಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಕಂಪ್ಲಿ ಗಣೇಶ ಪ್ರತಿಯೊಂದು ಕಾಮಗಾರಿಗೂ ಮಂತ್ರಿಗಳ ಕಡೆ ಹಾಗೂ ರಾಯರೆಡ್ಡಿ ಅಂತೂ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಜೆಡಿಎಸ್ ದಕ್ಷಿಣ ಕರ್ನಾಟಕಕ್ಕೆ ಕೇವಲ ಸೀಮಿತವಾಗಿದೆ ಎಂದು ಬಿಂಬಿಸಿದ್ದರು. ಆದರೆ ನಾವು ಕಲ್ಯಾಣ ಹಾಗೂ ಕಿತ್ತೂರ ಕರ್ನಾಟಕ ಭಾಗದಲ್ಲಿ ಬಲಿಷ್ಠವಾಗಿದ್ದೇವೆ. ಈ ಭಾಗದಲ್ಲಿ ಜೆಡಿಎಸ್ ಮತ್ತೆ ಪುನಶ್ಚೇತನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬಿಜೆಪಿಯ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಜೆಡಿಎಸ್ ಕುಮಾರಸ್ವಾಮಿ ಇದ್ದಾಗ ರೈತರ ಪಂಪಸೆಟ್ಗೆ ಏಳು ಗಂಟೆ ನಿರಂತರ ನೀರು ಬಿಡುತ್ತಿದ್ದರು. ಈಗ ರಾಜ್ಯದಲ್ಲಿ ಇಷ್ಟು ಬರಗಾಲ ಆವರಿಸಿದರೂ ಕಾಂಗ್ರೆಸ್ ಸರಿಯಾಗಿ ಮೂರು ಗಂಟೆ ವಿದ್ಯುತ್ ಕೊಡುತ್ತಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಬಿಜೆಪಿ ಕೊಟ್ಟ ಅನುದಾನವೆಷ್ಟು: ಸಚಿವ ರಾಮಲಿಂಗಾರೆಡ್ಡಿ
ಐದು ಗ್ಯಾರಂಟಿ ನೀಡುವಲ್ಲಿ ವಿಫಲವಾಗಿದೆ. ಇವತ್ತಿನ ವರೆಗೂ ಬೆಳೆ ಪರಿಹಾರ ನೀಡಿಲ್ಲ. ರೈತರು ಸತ್ತ ಮೇಲೆ ಅನ್ನಭಾಗ್ಯ ನೀಡುತ್ತೀರಾ? ಅನ್ನ ಭಾಗ್ಯ ಯೋಜನೆ ಕಾಂಗ್ರೆಸ್ ಶೂನ್ಯ ಸಾಧನೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೈತ್ರಿಯಾಗಿದ್ದೇವೆ. ಮೋದಿ ದೇಶವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.