
ನಾಗಮಂಗಲ (ಅ.13): ಕಳೆದ ಐದು ವರ್ಷದಲ್ಲಿ ಅಧಿಕಾರಕ್ಕೆ ಬಂದ ಮೂವರು ಮುಖ್ಯಮಂತ್ರಿಗಳು ಜನರಿಗೋಸ್ಕರ ಏನು ಮಾಡಿದರು. ಜನಪರವಾದ ಒಂದು ಕಾರ್ಯಕ್ರಮವನ್ನೂ ಕೊಡಲಿಲ್ಲ. ಕಾಂಗ್ರೆಸ್ ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಿದೆ. ಒಂದು ಕುಟುಂಬಕ್ಕೆ ಸರ್ಕಾರದಿಂದ ಎಷ್ಟು ಸಿಕ್ತಿದೆ ಲೆಕ್ಕ ಹಾಕಿ. ಮುಂದಿನ ಚುನಾವಣೆಯಲ್ಲಿ ಯಾರನ್ನ ಬೆಂಬಲಿಸಬೇಕು ಎಂಬ ಬಗ್ಗೆ ತೀರ್ಮಾನಿಸಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಬೆಳ್ಳೂರಿನಲ್ಲಿ ಎಂಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗುಂಪುಗಳಿಗೆ ಸಾಲ ವಿತರಿಸಿ ಮಾತನಾಡಿ, ಚಿನ್ನ ಇಟ್ಟು ಸಾಲ ತೆಗೆದುಕೊಳ್ಳಿ ನಮ್ಮ ಸರ್ಕಾರ ಬಂದ ತಕ್ಷಣ ಎಲ್ಲಾ ಸಾಲವನ್ನು ಮನ್ನಾ ಮಾಡುತೇವೆ ಎಂದು ಕಳೆದ 2018 ರ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭರವಸೆ ಕೊಟ್ಟಿದ್ದರು. ಆ ಭರವಸೆ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದರು. ಕಳೆದ 5 ವರ್ಷ ಹಿಂದೆ ಆಡಳಿತಕ್ಕೆಬಂದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಜನರಿಗೆ ಎಲ್ಲ ಬಗೆಯ ಸೌಲಭ್ಯಗಳನ್ನು ಕಲ್ಪಿಸಿ ಪೂರ್ಣ ಪ್ರಮಾಣದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊಡುತ್ತೇವೆಂದು ಹೇಳಿದ್ದರು.
ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ
ಅವರು ಕೊಟ್ಟ ಕೊಡುಗೆಯಾದರೂ ಏನು. ಆದರೆ, ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಿಂದ 5 ವರ್ಷಕ್ಕೆ ಪ್ರತಿ ಕುಟುಂಬಕ್ಕೆ ಎಷ್ಟು ಸಿಗುತ್ತದೆ ಅಂತ ಲೆಕ್ಕ ಮಾಡಿ. ಈ ಯೋಜನೆಗಳಿಂದಾದರೂ ಜನರು ಬದಲಾವಣೆ ಆಗುವರೇ ನೋಡಬೇಕು ಎಂದರು. 2018ರ ಚುನಾವಣೆಯಲ್ಲಿ ಸುರೇಶ್ ಗೌಡನನ್ನು 50 ಸಾವಿರ ಮತಗಳ ಅಂತರದಿಂದ ಕ್ಷೇತ್ರದ ಮತದಾರರು ಗೆಲ್ಲಿಸಿದರು. ಈಗಲೂ ಅದನ್ನೇ ಹೇಳಿಕೊಂಡು ತಿರುಗುತ್ತಿದ್ದಾನೆ. ನಾನು 50 ಸಾವಿರ ಮತಗಳಿಂದ ಗೆದ್ದೀದ್ದೀನಿ, ಚಲುವರಾಯಸ್ವಾಮಿ 4 ಸಾವಿರ ಅಂತರದಲ್ಲಿ ಗೆದ್ದಿದ್ದು, ನಾನೇ ಶಾಸಕ ಎನ್ನುತ್ತಿದ್ದಾನೆ. ನನ್ನನ್ನು ಟೀಕಿಸಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾನೆ. ಜನರು ಅಂದು 50 ಸಾವಿರ ಮತಗಳಿಂದ ಗೆಲ್ಲಿಸದಿದ್ದರೆ ಅವನು ಹೀಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ
ವಿರೋಧ ಪಕ್ಷಗಳು ನಮ್ಮ ಕಾರ್ಯಕ್ರಮಗಳನ್ನು ನಿಲ್ಲಿಸುತ್ತಿವೆ ಎಂದು ಬೊಂಬಡಿ ಬಾರಿಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ. ಬಡ್ಡಿ ರಹಿತ ಸಾಲಕೊಟ್ಟು ಆರ್ಥಿಕವಾಗಿ ರೈತರಿಗೆ ಸಹಾಯ ಮಾಡಲಾಗುತ್ತಿದೆ. ಬಡ್ಡಿ ಇಲ್ಲದೆ ಇರೋ ಸಾಲ, ಮಹಿಳೆಯರಿಗೆ ಉಚಿತ ಪ್ರಯಾಣ, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರು. ಹೀಗೆ ಎಲ್ಲಾ ಅನುಕೂಲಗಳು ಜನರಿಗೆ ಸಿಗುತ್ತಿವೆ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ನಿಮ್ಮ ಗಂಡಂದಿರು ಜೆಡಿಎಸ್ ಎಂದು ಹೇಳಿದರೆ, ನಾನು ಮಾತ್ರ ಚಲುವರಾಯಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಗೆ ಓಟ್ ಹಾಕೋದು ಎಂದು ಹೇಳಿ. ನಿಮ್ಮನ್ನ ನಂಬಿ, ಭರವಸೆ ಇಟ್ಟು ಚುನಾವಣೆಗೆ ನಿಂತುಕೊಂಡೆ. ಅಲ್ಪ ಸ್ವಲ್ಪದರಲ್ಲಿ ಆ ಭರವಸೆ ಉಳಿಸಿದ್ದೀರಾ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.