ರಾಜ್ಯ ಬಿಜೆಪಿ ಸಂಘರ್ಷ ದಿಲ್ಲಿಗೆ: ವಿಜಯೇಂದ್ರ, ಯತ್ನಾಳ್‌ ಜಗಳದ ವಿರುದ್ಧ ಅಮಿತ್‌ ಶಾಗೆ ದೂರು

Published : Dec 01, 2024, 06:47 AM IST
ರಾಜ್ಯ ಬಿಜೆಪಿ ಸಂಘರ್ಷ ದಿಲ್ಲಿಗೆ: ವಿಜಯೇಂದ್ರ, ಯತ್ನಾಳ್‌ ಜಗಳದ ವಿರುದ್ಧ ಅಮಿತ್‌ ಶಾಗೆ ದೂರು

ಸಾರಾಂಶ

ಯತ್ನಾಳ್‌ ಹಾಗೂ ವಿಜಯೇಂದ್ರ ಅವರ ಎರಡೂ ಬಣಗಳ ನಡುವಿನ ಹೇಳಿಕೆ-ಪ್ರತಿಹೇಳಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಬ್ಬರೂ ನಾಯಕರು ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಬೀದಿ ಜಗಳಕ್ಕೆ ನಿಂತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸು ಕುಂದುತ್ತಿದೆ. ಕಾರ್ಯಕರ್ತರಿಗೆ, ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. 

ನವದೆಹಲಿ(ಡಿ.01):  ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಬಣಗಳ ನಡುವಿನ ಬಡಿದಾಟ ತಾರಕಕ್ಕೇರಿರುವ ಬೆನ್ನಹಿಂದೆಯೇ ಈ ಬಣ ಜಗಳದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಸಂಸದರ ತಂಡವೊಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದೆ. ಹೈಕಮಾಂಡ್ ಮಧ್ಯ ಪ್ರವೇಶಿಸಿ, ಈ ಬಣ ಜಗಳ ನಿಲ್ಲಿಸಬೇಕು ಎಂದು ಮನವಿ ಮಾಡಿದೆ. 
ಪ್ರಹ್ಲಾದ್ ಜೋತಿ ನೇತೃತ್ವದಲ್ಲಿ ಈರಣ್ಣ ಕಡಾಡಿ, ಬಿ.ವೈ.ರಾಘವೇಂದ್ರ, ಜಗದೀಶ್ ಶೆಟ್ಟರ್‌ ಸೇರಿ ವಿವಿಧ ಸಂಸದರು ದೆಹಲಿಯಲ್ಲಿ ಶನಿವಾರ ಅಮಿತ್ ಶಾರನ್ನು ಭೇಟಿ ಮಾಡಿದರು. 

ಯತ್ನಾಳ್‌ ಹಾಗೂ ವಿಜಯೇಂದ್ರ ಅವರ ಎರಡೂ ಬಣಗಳ ನಡುವಿನ ಹೇಳಿಕೆ-ಪ್ರತಿಹೇಳಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಬ್ಬರೂ ನಾಯಕರು ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಬೀದಿ ಜಗಳಕ್ಕೆ ನಿಂತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸು ಕುಂದುತ್ತಿದೆ. ಕಾರ್ಯಕರ್ತರಿಗೆ, ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. 

ನನಗೇನು ಅಧ್ಯಕ್ಷನಾಗುವ, ಸಿಎಂ ಆಗುವ ಹುಚ್ಚಿಲ್ಲ: ಯತ್ನಾಳ ಸ್ಪಷ್ಟನೆ

ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಎಂದು ಮನವಿ ಮಾಡಿದರು. ಇನ್ನೇನು ಒಂದೆರಡು ತಿಂಗಳಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಹೀಗಾಗಿ, ಬಣ ಜಗಳ ಇತ್ಯರ್ಥ ಮಾಡುವ ಬಗ್ಗೆ ತಕ್ಷಣ ಗಮನ ಹರಿಸಿ ಎಂದು ನಿಯೋಗ ಕೋರಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಸದರ ಅಹವಾಲು ಆಲಿಸಿದ ಶಾ, ಪಕ್ಷದಲ್ಲಿ ಉಂಟಾಗಿರುವ ಬಣ ಜಗಳಕ್ಕೆ ಕಡಿವಾಣ ಹಾಕುವುದಾಗಿ ಸಂಸದರ ನಿಯೋಗಕ್ಕೆ ಭರವಸೆ ನೀಡಿದರು.

'ಯತ್ನಾಳ್‌ ಉಚ್ಚಾಟನೆ ಬೇಡ, ಮಾತುಕತೆಯ ಮೂಲಕವೇ ಬಗೆಹರಿಸಿ'

ವಿಜಯೇಂದ್ರ ಮತ್ತು ಯತ್ನಾಳ್ ನಡುವೆ ಉಂಟಾಗಿರುವ ಮನಸ್ತಾಪವನ್ನು ಮಾತುಕತೆ ಮೂಲಕವೇ ಬಗೆಹರಿಸ ಬೇಕು. ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ಅವರನ್ನು ಉಚ್ಚಾಟನೆ ಮಾಡುವುದು ಸರಿಯಲ್ಲ. ಬಿಜೆಪಿಯ ಹಿಂದೆ ಬಲವಾಗಿ ನಿಂತಿರುವುದು ಲಿಂಗಾಯತ ಸಮುದಾಯ. ಅದರಲ್ಲೂ ಪ೦ಚಮಸಾಲಿಗಳು ಬಲವಾಗಿ ನಿಂತಿದ್ದಾರೆ. ಹೀಗಾಗಿ ಉಚ್ಚಾಟನಾ ಕ್ರಮ ಮತ್ತೊಂದು ಹಂತಕ್ಕೆ ಹೋಗಬಹುದು. ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆ ಆಗಬಹುದು. ಹೀಗಾಗಿ, ಇಬ್ಬರನ್ನೂ ಒಂದು ವೇದಿಕೆಗೆ ಕರೆತನ್ನಿ, ಅಸಮಾಧಾನಗಳನ್ನು ಪರಿಹರಿಸಿ ಎಂದು ಸಂಸದರು ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.

ನಾನು ಹೋರಿ ಥರ, ಎಲ್ಲಾ ಎದುರಿಸುವೆ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ರಬಕವಿ-ಬನಹಟ್ಟಿ: ರೈತರ, ಮಠ-ಮಾನ್ಯಗಳ ಆಸ್ತಿ ವಕ್ಫ್‌ ಪಾಲಾಗುವುದನ್ನು ತಡೆಯಲು ನಾನು ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟ ಯಾರ ವಿರುದ್ದವೂ ಅಲ್ಲ. ನನ್ನ ವಿರುದ್ಧ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಆದರೆ, ನಾನು ಹೆದರುವುದಿಲ್ಲ. ನಾನು ಹೋರಿ ಇದ್ದಂತೆ. ಏನೇ ಬಂದರೂ ಗೂಳಿಯಂತೆ ಅದನ್ನು ಎದುರಿಸುವೆ. ಅಗತ್ಯ ಬಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್‌ ನಿಂದ ರೈತರಿಗೆ, ಮಠಮಾನ್ಯಗಳಿಗೆ ಅನ್ಯಾಯವಾಗದಂತೆ ಹೋರಾಡಲು ಜನಾಂದೋಲನ ಕೈಗೊಂಡಿದ್ದೇವೆ. ಇದಕ್ಕೆ ಎಲ್ಲ ಮಠಾಧೀಶರು ಸಾಥ್ ನೀಡಿ ಧರ್ಮದ ಉಳಿವಿಗೆ ಮುಂದೆ ಬರಬೇಕು. ನಾನು ನಡೆಸುತ್ತಿರುವ ಹೋರಾಟ ಪಕ್ಷದ ವಿರುದ್ದವಲ್ಲ. ಹೋರಾಟದ ವಿಷಯದಲ್ಲಿ ಬಿಜೆಪಿಯಲ್ಲಿ ಬಣಗಳಿಲ್ಲ. ಕೆಲವರು ಸ್ವಪ್ರತಿಷ್ಠೆಗಾಗಿ ನಮ್ಮ ಹೋರಾಟವನ್ನು ಭಿನ್ನವಾಗಿ ನೋಡುವುದು ತರವಲ್ಲ ಎಂದು ತೀಕ್ಷ್ಯವಾಗಿ ಪ್ರತಿಕ್ರಿಯಿಸಿದರು.  

ಯತ್ನಾಳ್ ವಿರುದ್ಧ ವಿಜಯೇಂದ್ರ ಟೀಂನಿಂದ ದೇಗುಲಯಾತ್ರೆ

ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಬಹುದು. ಆದರೆ, ನನ್ನ ವಿರುದ್ದ ಹೈಕಮಾಂಡ್ ಕ್ರಮ ಜರುಗಿಸದು. ಏಕೆಂದರೆ, ನಾನು ಪ್ರಧಾನಿಯ ಇಚ್ಛೆಯಂತೆ ಕಾರ್ಯ ಮಾಡುತ್ತಿರುವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ ಎಂದರು. 

ಯತ್ನಾಳ್‌ರನ್ನು ಉಚ್ಚಾಟನೆ ಮಾಡಬೇಕು ಎಂಬ ರೇಣುಕಾಚಾರ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಜೊತೆ ನಮ್ಮದೇನು ಕೆಲಸ? ನಮ್ಮ ಹೋರಾಟ ಏನಿದ್ದರೂ ವಕ್ಫ್‌ ಬಗ್ಗೆ ಎಂದರು. 
ಶತ್ರುಗಳ ನಾಶಕ್ಕೆ ಪೂಜೆ ಮಾಡಿದ್ದೇವೆ ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವರು ಕೇರಳಕ್ಕೆ ಹೋಗಿ ಪೂಜೆ ಮಾಡುತ್ತಾರೆ. ನಾವೇನು ಮಾಡಲು ಸಾಧ್ಯ? ನಾವು ಬಸವಣ್ಣನವರ ವಿಚಾರದವರು. ಬಸವಣ್ಣನನ್ನು ನಂಬಿದವರು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ