
ಶ್ರೀರಂಗಪಟ್ಟಣ (ಡಿ.23): ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ಪ್ರಯಾಣ ಕುರಿತು ಬಿಜೆಪಿಯವರು ಅನಾವಶ್ಯಕವಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಮಾನ ಸೌಲಭ್ಯ ಬಳಕೆ ಸಾಮಾನ್ಯ. ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಎಷ್ಟು ಬಾರಿ ಓಡಾಡಿಲ್ಲ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದರೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಬಿಜೆಪಿಯವರಿಗೆ ಯಾವುದೇ ವಿಷಯಗಳು ಸಿಗದಿದ್ದಾಗ ಈ ರೀತಿ ಟೀಕೆ ಮಾಡುತ್ತಾರೆ. ನಮ್ಮ ಮುಖ್ಯಮಂತ್ರಿ ಕಡಿಮೆ ಖರ್ಚಿನಲ್ಲಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಇವರು ಹೇಳಿದರೆ ಜನ ಕೇಳೋದಕ್ಕೆ ತಯಾರಿಲ್ಲ ಎಂದರು. ಮುಖ್ಯಮಂತ್ರಿಗಳು 7 ಸ್ಟಾರ್ ಹೋಟೆಲ್ನಲ್ಲಿ ಮಲಗಿಲ್ಲ. ಕರ್ನಾಟಕ ಭವನದಲ್ಲೆ ಉಳಿದುಕೊಂಡಿದ್ದರು. ಚುನಾವಣೆ ಹತ್ತಿರ ಬಂದಿದೆ ಎಂದು ಬಿಜೆಪಿಯವರು ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ. ಬಿಜೆಪಿಯವರಿಗೆ ರಾಷ್ಟ್ರೀಯ ನಾಯಕರು ಟಾಸ್ಕ್ ಕೊಟ್ಟಿದ್ದಾರೆ ಅವರ ಕಷ್ಟ ಅವರಿಗೆ ಪಾಪ ಎಂದು ಲೇವಡಿ ಮಾಡಿದರು.
ಯಾರಿಗೆ ಯಾರು ಅನಿವಾರ್ಯ ಗೊತ್ತಿಲ್ಲ: ನಾಯಕರಿಂದ ಮೋದಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಜೆಡಿಎಸ್ ಹತ್ತಿರ ಪಾಪ ಮೋದಿ ಹೇಗೆ ನಿಂತಿದ್ದಾರೆ ನೋಡಿ. ಅವರ ಕಷ್ಟ ಅವರಿಗೆ ಬಿಡಿ. ಕುಮಾರಸ್ವಾಮಿ ಅವರು ಬಹಳ ಖುಷಿಯಾಗಿದ್ದಾರೆ ಅದನ್ನ ನಾನು ನೋಡಿದ್ದೇನೆ ಎಂದರು. ಪ್ರಧಾನಿ ಮೋದಿಗೆ ಇವರು ಅನಿವಾರ್ಯನೋ, ಜೆಡಿಎಸ್ನವರಿಗೆ ಮೋದಿ ಅನಿವಾರ್ಯನೋ ಚುನಾವಣಾ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ.
ರೈತರೇ ಬೇಸಿಗೆ ಬೆಳೆ ಬೆಳೆಯಬೇಡಿ: ಸಚಿವ ಚಲುವರಾಯಸ್ವಾಮಿ ಮನವಿ
ಚುನಾವಣೆ ವೇಳೆ ನಾವು ನೂರು ದಾಟುತ್ತೇವೆ ಅಂತ ಹೇಳಿದ್ದೇವು. ಜನರು ನಮ್ಮ ಕೈ ಹಿಡಿದಿದ್ದಾರೆ. ಆದರೆ, 123 ಅಂತ ಕುಮಾರಸ್ವಾಮಿ ಹೇಳಿದ್ದರು, ಏನಾಯ್ತು ಎಂದು ಪ್ರಶ್ನಿಸಿದರು. ಕೇಂದ್ರ ಲೋಕಸಭಾ ಮತ್ತು ರಾಜ್ಯಸಭೆಯ ಸಂಸದರ ಸರಣಿ ಅಮಾನತು ಮಾಡಿರುವುದನ್ನು ನಾವು ಖಂಡಿಸಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಮಾನತು ಮಾಡಿರುವುದು ಸರಿಯಲ್ಲ. ಇದು ಆಗಬಾರದಿತ್ತು, ಮೋದಿ ಅವರು ಈ ವಿಚಾರಕ್ಕೆ ಕೈ ಹಾಕಬಾರದಿತ್ತು. ಆದರು ಅವರ ಉದ್ಘಟತನ ತೋರುತ್ತದೆ. ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.