'ವಿಜಯೇಂದ್ರ ಯಡಿಯೂರಪ್ಪ ಪುತ್ರ ಹೊರತು ಸೂಪರ್‌ ಸಿಎಂ ಅಲ್ಲ'

By Kannadaprabha NewsFirst Published Feb 25, 2020, 8:15 AM IST
Highlights

ವಿಜಯೇಂದ್ರ ಸೂಪರ್‌ ಸಿಎಂ ಅಲ್ಲ| ರಾಜ್ಯಸರ್ಕಾರದ ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ ಇಲ್ಲ| ಬಿಎಸ್‌ವೈ ಒಬ್ಬರೇ ಸಿಎಂ

ಹಾಸನ[ಫೆ.25]: ಮುಖ್ಯಮಂತ್ರಿ ಪುತ್ರ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬುದಾಗಿ ಕೇಳಿ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಅವರು ಸಿಎಂ ಯಡಿಯೂರಪ್ಪ ಅವರ ಪುತ್ರ ಹೊರತು ಸೂಪರ್‌ ಸಿಎಂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯೇಂದ್ರ ಸೂಪರ್‌ ಸಿಎಂ ಎಂಬ ವಿಚಾರಕ್ಕೆ ಸಂಬಂಧಿಸಿ ನಗ​ರ​ದಲ್ಲಿ ಸೋಮ​ವಾರ ಸುದ್ದಿ​ಗಾ​ರ​ರೊಂದಿಗೆ ಪ್ರತಿಕ್ರಿಯಿಸಿದ ಅವರು, ಅವರವರ ಭಾವಕ್ಕೆ, ಅವರವರ ಭಕ್ತಿಗೆ ಆ ತೆರನಾಗಿ ಹೇಳುತ್ತಾರೆ. ಆದರೆ, ಸಂವಿಧಾನದಲ್ಲಿ ಯಾವ ಸೂಪರ್‌ ಸಿಎಂ ಕೂಡ ಇಲ್ಲ. ಯಡಿಯೂರಪ್ಪ ಒಬ್ಬರೇ ಮುಖ್ಯಮಂತ್ರಿ ಇರೋದು. ವಿಜಯೇಂದ್ರ ಯಡಿಯೂರಪ್ಪ ಅವರ ಮಗ ಅಷ್ಟೇ. ಸರ್ಕಾರದ ಯಾವ ವ್ಯವಹಾರಕ್ಕೂ ಆತ ಅಧಿಪತಿಯಾಗಲು ಸಾಧ್ಯವಿಲ್ಲ ಎಂದರು.

ವಿಜಯೇಂದ್ರ ವಿಚಾರದಲ್ಲಿ ಕೆಲವರು ಬಿಜೆಪಿ ವರಿಷ್ಠರಿಗೆ ದೂರು ನೀಡಿದ್ದಾರೆ ಎಂದ ಅವರು, ಬಿಜೆಪಿ ಮುಖಂಡರು ಕುಮಾರಸ್ವಾಮಿಯವರನ್ನು ಭೇಟಿ ಮಾಡುತ್ತಿದ್ದಾರೆ ಎಂಬುದೆಲ್ಲಾ ಆಳುವ ಪಕ್ಷ ಎಂದಾಗ ಸಹಜವಾಗಿ ಇರುತ್ತದೆ. ಆದರೆ ಬಿಜೆಪಿಯಲ್ಲಿ ಯಾರೂ ಹೊರ ಹೋಗುವ ಪರಿಸ್ಥಿತಿ ಇಲ್ಲ ಎಂದರು.

ಒಡಕು ಸಾಧ್ಯವೇ ಇಲ್ಲ:

ಇದೇವೇಳೆ ಶೀಘ್ರದಲ್ಲಿ ಬಿಜೆಪಿಯ 32 ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿಕೆಯನ್ನೂ ಅಲ್ಲಗೆಳೆದ ಅವರು, ಪರ, ವಿರೋಧ ಇದ್ದಾಗ ನಮ್ಮ ಭಾವನೆಗಳನ್ನು ಮುಖ್ಯಮಂತ್ರಿ ಬಳಿ, ಗೃಹ ಸಚಿವರ ಬಳಿ, ಪ್ರಧಾನಮಂತ್ರಿ, ಪಕ್ಷದ ವರಿಷ್ಠರ ಬಳಿ ಹೇಳಿಕೊಳ್ಳುತ್ತೇವೆ. ಅಭಿಪ್ರಾಯ ಬೇರೆ ಬೇರೆ ಇದ್ದಾಗ ಹೇಳಿಕೊಳ್ಳುವುದು ತಪ್ಪಿಲ್ಲ. ಆದರೆ ಅದ್ಯಾವುದು ನಮ್ಮಲ್ಲಿ ಒಡಕನ್ನು ಸೃಷ್ಟಿಮಾಡುವುದಿಲ್ಲ. ಹಾಗೇ ತಿಳಿದುಕೊಂಡಿದ್ದರೇ ಕೇವಲ ಕನಸು ಎಂದು ತಿರುಗೇಟು ನೀಡಿದರು.

click me!