ರಾಜ್ಯದಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಇದೇ ವೇಳೆ ಬಿ ಎಸ್ ವೈ ಸಿಎಂ ಪಟ್ಟದ ಅವಧಿ ಬಗ್ಗೆಯೂ ಕೂಡ ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನಾಡಿದ್ದಾರೆ.
ನವದೆಹಲಿ (ಫೆ.07): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿಯಾಗಿ ಅವರಿಗೆ ಎಲ್ಲ ಅಧಿಕಾರ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಮುಖ್ಯಮಂತ್ರಿ ಅವರಿಗೆ ಎಲ್ಲ ಅಧಿಕಾರ ನೀಡಿದ್ದರಿಂದಲೇ ಮಂತ್ರಿಮಂಡಲ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ರಾಜಕೀಯದಲ್ಲಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ ..
ಇದೇ ವೇಳೆ, ಲಿಂಗಾಯತ ಸಮುದಾಯದಲ್ಲಿ ಹಲವರಿಗೆ ಮೀಸಲಾತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈಗ ಪಂಚಮಸಾಲಿಗರು ಮೀಸಲಾತಿ ಕೇಳಿದ್ದಾರೆ. ಈಗ ಅದರ ಅಧ್ಯಯನಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ಕುರಿತು ಅವಕಾಶಗಳನ್ನು ನೋಡಿ ಪರಿಶೀಲಿಸಲಾಗಿವುದು. ವೈಜ್ಞಾನಿಕವಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಜನಾಂಗದಿಂದಲೂ ಮೀಸಲಾತಿಗೆ ಬೇಡಿಕೆ ಇದೆ. ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಹೊಸ ಸಾಧ್ಯತೆಗಾಗಿ ಕಾನೂನು: ಕೃಷಿ ವಲಯದಲ್ಲಿ ಅನೇಕ ವರ್ಷಗಳಿಂದ ಸುಧಾರಣೆಗಳು ಆಗಿರಲಿಲ್ಲ. ಬೆಳೆಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸತನ ತರಲು ಚಿಂತಿಸಿದೆ. ಆ ನಿಟ್ಟಿನಲ್ಲಿ ಕೃಷಿ ಕಾಯ್ದೆಯಲ್ಲಿ ಹಳೆಯ ಯಾವ ನಿಯಮಾವಳಿಗಳನ್ನೂ ನಿಲ್ಲಿಸಿಲ್ಲ. ಹೊಸ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಕಾನೂನು ರೂಪಿಸಿದೆ ಎಂದರು.