
ವಿಧಾನ ಪರಿಷತ್(ಡಿ.06): ತಾವು ರಾಜಕೀಯದಲ್ಲಿ ಇದ್ದು 49 ವರ್ಷವಾಗಿದೆ, ಎಂದೂ ಕೂಡ ಪ್ರತಿಪಕ್ಷದಿಂದ ನನಗೆ ಯಾವುದೇ ತೊಂದರೆ ಆಗಲಿಲ್ಲ, ಇ.ಡಿ, ಐಟಿ ದಾಳಿ ಆಗಲಿಲ್ಲ, ಆದರೆ ನಮ್ಮವರಿಂದಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ಆಯಿತು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಧನ್ಯವಾದ ಹೇಳಲು ಅವಕಾಶ ಸಿಗದ ಕಾರಣ ಇಂದು ಸಭಾಪತಿಗಳಿಂದ ವಿಶೇಷ ಅನುಮತಿ ಪಡೆದು ಮಾತನಾಡಿದ ಅವರು, ಪ್ರತಿಪಕ್ಷದ ನಾಯಕನಾಗಿದ್ದ ವೇಳೆ ಬಿಜೆಪಿಯ ಸಿದ್ಧಾಂತ, ತತ್ವದ ವಿರುದ್ಧ ಇದ್ದೇನೆ, ಆದರೆ ವ್ಯಕ್ತಿಗತವಾಗಿ ಯಾರ ವಿರುದ್ಧ ಅಲ್ಲ, ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಸದಸ್ಯರು ಸಹ ತಮಗೆ ಸಹಕರಿಸಿದರು. ಹಾಗೇ ನೋಡಿದರೆ ಪ್ರತಿಪಕ್ಷದಿಂದ ನನಗೆ ಯಾವುದೇ ತೊಂದರೆ ಆಗಿಲ್ಲ, ಆದರೆ ನಮ್ಮವರು ಎನಿಸಿಕೊಂಡವರಿಂದಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯಿತು ಎಂದರು.
ನಾನು ಸಿದ್ದರಾಮಯ್ಯರ ವಕ್ತಾರನಲ್ಲ; ಬಿಕೆ ಹರಿಪ್ರಸಾದ ಪರೋಕ್ಷ ಅಸಮಾಧಾನ
ಈ ಮಾತು ಹೇಳುತ್ತಿದ್ದಂತೆ ಜಿಜೆಪಿಯ ಎನ್. ರವಿಕುಮಾರ್ ಅವರು ಕೊನೆಗೂ ಸತ್ಯವನ್ನು ನೀವು ಹೇಳಿದಿರಿ ಎಂದರೆ, ಜೆಡಿಎಸ್ನ ಎಸ್.ಎಲ್. ಭೋಜೆಗೌಡ ಅವರು ಹರಿಪ್ರಸಾದ್ ತಮ್ಮ ಹೃದಯದ ಅಂತರಾಳದ ಮನಸಿನ ನೋವು ಹೇಳಿಕೊಂಡಿದ್ದಾರೆ ಎಂದು ಕಾಲು ಎಳೆದರು.
ಇದಕ್ಕೆ ಕಾಂಗ್ರೆಸ್ನ ಯು.ಬಿ. ವೆಂಕಟೇಶ್ ಮತ್ತಿತರರು ನೀವು (ಬಿಜೆಪಿ ಸದಸ್ಯರು) ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ತಿರುಗೇಟು ನೀಡಿದರೆ ಮತ್ತೊಬ್ಬ ಸದಸ್ಯರು ಯತ್ನಾಳ ಅವರು ಹೊರಗಡೆ ಎಷ್ಟೊಂದು ಮಾತನಾಡುತ್ತಿದ್ದಾರೆ, ಮೊದಲು ಆ ಬಗ್ಗೆ ಹೇಳಿ ಎಂದು ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.