
ಚಾಮರಾಜನಗರ(ಆ.30): ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಕಿರುವುದು ಸರ್ಕಾರದ ಹುನ್ನಾರವಾಗಿದೆ. ಸಿದ್ದರಾಮಯ್ಯ ಕಟಕಟೆಯಲ್ಲಿ ನಿಲ್ಲುವ ಸುದ್ದಿ ಹೆಚ್ಚು ಪ್ರಚಾರ ಆಗಬಾರದು. ದರ್ಶನ್ ಅವರದ್ದೇ ಹೆಚ್ಚು ಸುದ್ದಿ ಆಗುವ ಮೂಲಕ ಸಿದ್ದರಾಮಯ್ಯ ಅವರ ಮೇಲಿನ ಪ್ರಕರಣ ಮರೆಮಾಚುವ ಹುನ್ನಾರವಾಗಿದೆ. ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಆಶ್ವಥ್ ನಾರಾಯಣಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ಆಪರೇಷನ್ ಕಮಲಕ್ಕೆ 100 ಕೋಟಿ ರೂಪಾಯಿ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಶ್ವಥ್ ನಾರಾಯಣಗೌಡ ಅವರು, ಇದೆಲ್ಲಾ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಭ್ರಷ್ಟಾಚಾರವನ್ನು ಮರೆಮಾಚಲು ಮಾಡುತ್ತಿರುವ ಆರೋಪವಾಗಿದೆ. ನೂರು ಕೋಟಿ ಆಫರ್ ಎಂದಾದರೆ ಕಾಂಗ್ರೆಸ್ ಶಾಸಕರು ಬದನೆಕಾಯಿ, ಮೆಣಸಿನಕಾಯಿ ತರ ಮಾರಾಟಕ್ಕಿದ್ದಾರಾ?. ಯಾರು ಯಾರಿಗೆ ಆಫರ್ ಮಾಡಿದರು ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ತಾಕತ್ತಿದ್ದರೆ ಲಕ್ಷಾಂತರ ಶ್ರೀರಾಮ ಸೇವಕರನ್ನು ಬಂಧಿಸಿ: ಅಶ್ವತ್ಥ ನಾರಾಯಣಗೌಡ
ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ರವಿಗಣಿಗ ವಿರುದ್ಧ ಈಗಾಗಲೇ ಮಂಡ್ಯದಲ್ಲಿ ದೂರು ದಾಖಲಿಸಲಾಗಿದೆ. ರವಿಗಣಗ ಅವರನ್ನು ಅನರ್ಹ ಮಾಡಬೇಕೆಂದು ಸ್ಪೀಕರ್ ಗೆ ದೂರು ನೀಡ್ತೇವೆ. ತಾನಾಗಿಯೇ ಬಿದ್ದು ಹೋಗುವ ಸರ್ಕಾರವನ್ನು ನಾವ್ಯಾಕೆ ಬೀಳಿಸಬೇಕು. ಇದೆಲ್ಲ ಸಿದ್ದರಾಮಯ್ಯ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ಹುನ್ನಾರವಾಗಿದೆ ಎಂದು ಅಶ್ವಥ್ ನಾರಾಯಣಗೌಡ ಹೇಳಿದ್ದಾರೆ.
ಖರ್ಗೆ ಕುಟುಂಬದ ಟ್ರಸ್ಟ್ ಗೆ ಭೂಮಿ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅಶ್ವಥ್ ನಾರಾಯಣಗೌಡ, ಇದೆಲ್ಲಾ ಭೂ ಕಬಳಿಕೆಯ ಹುನ್ನಾರವಾಗಿದೆ. ಆ ಸಂಸ್ಥೆಯ ಹಿನ್ನಲೆ ಏನು? ಎಷ್ಟು ಜನರಿಗೆ ತರಬೇತಿ ನೀಡಿದೆ, ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಏನು ಸಂಶೋದನೆ ಮಾಡಿದೆ ಎಂಬ ದಾಖಲೆ ಬೇಕಲ್ಲವೇ. ಯಾವುದೇ ಸಂಸ್ಥೆಗೆ ಭೂಮಿ ನೀಡಲು ನಮ್ಮ ವಿರೋಧ ಇಲ್ಲ. ಆದ್ರೆ ಆ ಸಂಸ್ಥೆ ಚಾಲ್ತಿಯಲ್ಲಿರಬೇಕು. ಕೇವಲ ಒಂದು ಬೋರ್ಡ್ ಹಾಕಿಕೊಂಡು ಯಾವುದೇ ದಾಖಲೆ ಕೊಡದೆ ಭೂಮಿ ಹಂಚಿಕೆ ಮಾಡಿಸಿ ಕೊಳ್ಳೋದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.