ಬಿಜೆಪಿ ಪಾರ್ಟಿಯೇ ಗಿಮಿಕ್ ಪಾರ್ಟಿ, ಅಲ್ಲಿರುವವರೆಲ್ಲರು ಗಿಮಿಕ್ ಲೀಡರ್‌ಗಳು: ಸಚಿವ ರಾಮಲಿಂಗಾರೆಡ್ಡಿ

By Govindaraj SFirst Published Mar 2, 2024, 10:03 PM IST
Highlights

ಆ ಪಾರ್ಟಿಯೇ ಗಿಮಿಕ್ ಪಾರ್ಟಿ. ಅಲ್ಲಿರುವವರೆಲ್ಲರು ಗಿಮಿಕ್ ಲೀಡರ್‌ಗಳು ಎಂದು ಜಾತಿಗಣತಿ ಚುನಾವಣಾ ಗಿಮಿಕ್ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು. 

ರಾಮನಗರ (ಮಾ.02): ಆ ಪಾರ್ಟಿಯೇ ಗಿಮಿಕ್ ಪಾರ್ಟಿ. ಅಲ್ಲಿರುವವರೆಲ್ಲರು ಗಿಮಿಕ್ ಲೀಡರ್‌ಗಳು ಎಂದು ಜಾತಿಗಣತಿ ಚುನಾವಣಾ ಗಿಮಿಕ್ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ಮಾತಿಗೆ ಹೆಚ್ಚು ಮಹತ್ವ ಕೊಡಲ್ಲ. ಜಾತಿ ವರದಿ ಬಹಿರಂಗ ಆದ ಮೇಲೆ ಮಾತ್ರ ಅದರ ಬಗ್ಗೆ ವ್ಯಾಖ್ಯಾನ ಮಾಡಬಹುದು. ಜಾತಿಗಣತಿಯನ್ನು ಇನ್ನೂ ಯಾರೂ ಕೂಡಾ ಓದಿಲ್ಲ. ಅದನ್ನು ಮೊದಲು ಓದಿದ ಬಳಿಕ ತಪ್ಪಿದ್ದರೆ, ಸರಿ ಮಾಡೋಣ ಎಂದರು.

ನಮ್ಮ ಮನೆಗಂತೂ ಬಂದು ಸಮೀಕ್ಷೆ ಮಾಡಿದ್ದಾರೆ. ವರದಿ ಸಿದ್ದಪಡಿಸಿರೋ ಜಯಪ್ರಕಾಶ್ ಹೆಗ್ಡೆ ಯಾವ ಪಾರ್ಟಿ. ಅವರನ್ನು ನೇಮಕ‌ ಮಾಡಿದ್ದೇ ಬಿಜೆಪಿಯವರು. ಪೂರ್ಣ ಮಾಹಿತಿ ತಿಳಿಯದೇ ಸುಮ್ಮನೆ ವಿರೋಧ ಮಾಡಬಾರದು ಎಂದು ಸ್ವಪಕ್ಷೀಯ ಸಚಿವರು ಸೇರಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಈ ಬಗ್ಗೆ ಸರ್ಕಾರ ತನಿಖೆ ಮಾಡುತ್ತಿದೆ. ಯಾರೇ ತಪ್ಪು‌ ಮಾಡಿದ್ದರು ಕ್ರಮ ಆಗಲೇ ಬೇಕು. ಅಲ್ಲಿ ನಾಸೀರ್ ಬೆಂಬಲಿಗರು ಘೋಷಣೆ ಕೂಗಿದ್ದಾರಾ ಅಥವಾ ಹೊರಗಡೆಯಿಂದ ಬಂದು ಘೋಷಣೆ ಕೂಗಿದ್ದಾರಾ ಗೊತ್ತಿಲ್ಲ. ತನಿಖೆ ಬಳಿಕ ಎಲ್ಲವೂ ಬಹಿರಂಗವಾಗಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕುರಿತ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ಪರಮೇಶ್ವರ್‌

ಕುಡಿವ ನೀರು, ಜಾನುವಾರು ಮೇವಿಗೆ ಆದ್ಯತೆ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರ ಪೀಡಿತ ಎಂದು ಘೋಷಿಸಲಾಗಿದ್ದು, ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ಮೇಲೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಡಿವ ನೀರು ಪೂರೈಕೆ ಹಾಗೂ ಮೇವಿನ ವ್ಯವಸ್ಥೆಗಾಗಿ ಪ್ರತಿ ಪಂಚಾಯಿತಿಗೆ 10 ಲಕ್ಷ ರು, ತಾಲೂಕಿಗೆ 1 ಕೋಟಿ ರು.ಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳ ಖಾತೆಗೆ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮಕ್ಕೆ ಕಳೆದ ಸಾಲಿನಲ್ಲಿ 1 ಕೋಟಿ ರು. ಅನುದಾನ ನೀಡಲಾಗಿತ್ತು. ಇದರಲ್ಲಿ 49 ಹೊಸ ಬೋರ್‌ವೆಲ್ ಕೊರೆಸಲಾಗಿದೆ. ಅದೇ ರೀತಿ ಕೊಳವೆಬಾವಿ ದುರಸ್ತಿಗಾಗಿ ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಕುಡಿಯುವ ನೀರು ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್‌ನಲ್ಲಿ ಯಾವುದೇ ಸಂಸ್ಥೆಗಳು ಭಾಗವಹಿಸಿಲ್ಲ. ಆದ್ದರಿಂದ ತಾಪಂವಾರು ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮವಹಿಸಬೇಕು. ಯಾವುದೇ ಲೋಪದೋಷ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಕ್ರಮವಹಿಸಲಾಗುವುದು ಎಂದರು.

ಆನೆದಾಳಿ ನಿಯಂತ್ರಿಸಲು ಕ್ರಮ: ಜಿಲ್ಲೆಯು ಕಾವೇರಿ ಮತ್ತು ಬನ್ನೇರುಘಟ್ಟ ಅರಣ್ಯ ಪ್ರದೇಶಗಳನ್ನು ಒಳಗೊಂಡಿದ್ದು ಅಂದಾಜು 400 ಆನೆಗಳು ಇರುವುದಾಗಿ ಇವುಗಳಲ್ಲಿ 30ರಿಂದ 40 ಆನೆಗಳು ಹೆಚ್ಚಾಗಿ ಕಾವೇರಿ ಅರಣ್ಯ ಪ್ರದೇಶದಲ್ಲಿ ಓಡಾಟವಿರುತ್ತದೆ. ಈವೆರೆಗೆ 10 ಜನರು ಆನೆದಾಳಿಗೆ ಒಳಪಟ್ಟು ಮೃತಪಟ್ಟಿದ್ದಾರೆ. ಮೃತರಿಗೆ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೆ 33 ಕಿಮೀ ಬ್ಯಾರಿಕೇಡ್ ನಿರ್ಮಿಸಲು ಅನುಮತಿ ದೊರಕಿದ್ದು ಈ ಕಾಮಗಾರಿಯು ಪ್ರಗತಿಯಲಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಹಠದಿಂದ ಜಾತಿ ಜನಗಣತಿ ವರದಿ ಸ್ವೀಕಾರ: ಶಾಸಕ ಆರಗ ಜ್ಞಾನೇಂದ್ರ ಆರೋಪ

ಜಿಲ್ಲೆಯಲ್ಲಿ 1800 ಜನರಿಗೆರ ಇ-ಸ್ವತ್ತು ವಿತರಿಸಲಾಗಿದೆ. ನಮೂನೆ 6-10 ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದ್ದು ಇದನ್ನು ಕೂಡಲೇ ಇತ್ಯರ್ಥ ಪಡಿಸಲಾಗುವುದು. ರುದ್ರಭೂಮಿಗೆ ಜಮೀನನ್ನು ಮೀಸಲಿಡಲು ಸೂಚನೆ ನೀಡಲಾಗಿದೆ. ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಇರುವುದರಿಂದ ಅಗತ್ಯವಿರುವ ಕಡೆ ಜಾಗ ಗುರುತಿಸಿ ಕೂಡಲೇ ಅವುಗಳನ್ನು ನಿರ್ಮಿಸಲು ಕ್ರಮವಹಿಸುವಂತೆ ಸೂಚಿಸಿದರು.

click me!