ಭಾರತವನ್ನು ಇಬ್ಭಾಗ ಮಾಡುವ ಕೆಲಸವಿದು: ಶೋಭಾ ಕರಂದ್ಲಾಜೆ ಗಂಭೀರ ಆರೋಪ

By Suvarna NewsFirst Published Dec 8, 2020, 5:04 PM IST
Highlights

ಭಾರತ್ ಬಂದ್ ಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, ಭಾರತವನ್ನು ಇಬ್ಭಾಗ ಮಾಡುವ ಕೆಲಸವಿದು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚಿಕ್ಕಮಗಳೂರು, (ಡಿ.08): ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು (ಮಂಗಳವಾರ) ಭಾರತ ಬಂದ್‌ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ರೈತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

ಚಿಕ್ಕಮಗಳೂರಿನಲ್ಲಿಯೂ ಪ್ರತಿಭಟನೆ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐಎಂಎಲ್, ಕನ್ನಡಪರ ಸಂಘಟನೆ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ 16 ಸಂಘಟನೆಗಳು ಪ್ರತಿಭಟನೆ ಮಾಡಿದವು.

ಇನ್ನು ಈ ಭಾರತ್ ಬಂದ್‌ಗೆ ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, ದೇಶದ ಹೊರಗೆ ಕುಳಿತ ಉಗ್ರ ಸಂಘಟನೆಗಳು ಭಾರತವನ್ನು ಇಬ್ಭಾಗ ಮಾಡಲು ರೈತರನ್ನು ಎತ್ತಿಗಟ್ಟುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿವೆ. ಖಲಿಸ್ತಾನ್ ಚಳವಳಿ ಈಗಲೂ ನಡೆಯುತ್ತಿದೆ ಎಂದು ರೈತರನ್ನು ಪ್ರೇರೇಪಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕಪ್ಪು ಪಟ್ಟಿ ಹಾಕಿದರೇನು ಬಿಳಿ ಪಟ್ಟಿ ಹಾಕಿ ಪ್ರತಿಭಟಿಸಿದರೇನು? ಬಿಎಸ್‌ವೈ ವ್ಯಂಗ್ಯ

ಇವತ್ತಿನ ಬಂದ್ ಕೇವಲ ರೈತರು ನಡೆಸುತ್ತಿರುವ ಬಂದ್ ಅಲ್ಲ. ರೈತರನ್ನ ದಿಕ್ಕು ತಪ್ಪಿಸುವಂಥ ರಾಜಕೀಯ ಪಕ್ಷಗಳ ಬಂದ್. ಮೋದಿ ಸರ್ಕಾರದ ವಿರೋಧದ ಬಂದ್ ಇದು. ಶಾಂತಿಯುತ ಹೋರಾಟಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡುತ್ತದೆ ಎಂದರು.

"

ಶಾಯಿನ್ ಭಾಗ್ ನಲ್ಲಿ ಭಾಗವಹಿಸಿದ ತುಕುಡೇ ಗ್ಯಾಂಗ್ ಈ ಹೋರಾಟದಲ್ಲಿದ್ದಾರೆ. ಸಿಎಎ, ಖಲಿಸ್ತಾನ್ ಹೋರಾಟದಲ್ಲಿದ್ದವರ ಮಾತು ಕೇಳಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ದೇಶದ ಹೊರಗಿರುವ ಉಗ್ರ ಸಂಘಟನೆಗಳು ಭಾರತದ ಸೈನಿಕರೇ ದೇಶದ ವಿರುದ್ಧ ತಿರುಗಿ‌ ಬೀಳುವಂತೆ ಪ್ರಚೋದಿಸುತ್ತಿವೆ. ಈ ರೀತಿಯ ವಾಯ್ಸ್ ಮೆಸೇಜ್ ಗಳು ಸಂಸತ್ ಸದಸ್ಯರಿಗೆ ತಲುಪುತ್ತಿವೆ ಎಂದು ಹೇಳಿದರು.

click me!