
ದಾವಣಗೆರೆ (ಸೆ.26): ಕುರುಬ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಜೈನ ಕ್ರಿಶ್ಚಿಯನ್ ಸೇರಿದಂತೆ ಅನೇಕ ಜಾತಿಗಳ ಜೊತೆ ಕ್ರಿಶ್ಚಿಯನ್ ಅಂತಾ ಮಾಡಿದ್ದು, ಆ ಹೆಸರನ್ನೆಲ್ಲಾ ಕೇಳಿದರೆ ವಿದೇಶಿಶಕ್ತಿ ಇರುವ ಅನುಮಾನವಿದೆ. ಸೋನಿಯಾ ಗಾಂಧಿಗೆ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರ ಮಾಡುವ ಹಂಬಲ ಹೊಂದಿದ್ದರೆ, ರಾಹುಲ್ ಗಾಂಧಿಗೆ ಮುಸ್ಲಿಂ ರಾಷ್ಟ್ರ ಮಾಡುವ ಹಂಬಲವಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು. ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ-ಮಗನ ಮಧ್ಯೆ ಜಗಳ ನಡೆದಿದೆ. ಅದಕ್ಕಾಗಿಯೇ ಇಬ್ಬರೂ ಕರ್ನಾಟಕವನ್ನು ಪ್ರಯೋಗ ಶಾಲೆ ಮಾಡಿಕೊಂಡಿದ್ದಾರೆ.
ಆದರೆ, ಕಾಂಗ್ರೆಸ್ಸಿನವರ ಪ್ರಯತ್ನ ಯಶಸ್ವಿ ಆಗುವುದಿಲ್ಲ. ಎಲ್ಲರೂ ಹಿಂದೂಗಳೆಂದು ಬರೆಸುತ್ತಿದ್ದಾರೆ ಎಂದರು. ಜಾತಿಗಣತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡುತ್ತದೆ. ಆದರೂ ಉದ್ದೇಶ ಪೂರ್ವಕವಾಗಿ ಚಿತ್ರ-ವಿಚಿತ್ರ ಜಾತಿಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ. ಕೆಲವರು ವೀರಶೈವರು, ಲಿಂಗಾಯತ ಅಂತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮಾಜ ಹಾಳು ಮಾಡಲೆಂದೇ ಇರುವ 2-3 ಸ್ವಾಮೀಜಿಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸ್ವಾಮೀಜಿಗಳು ಹಿಂದೂ ಎಂಬುದಾಗಿ ಬರೆಸಲು ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಜಾತಿಗಣತಿಗೆ ನಮ್ಮ ವಿರೋಧವಿದೆ. ಸರ್ಕಾರ ಇನ್ನಾದರೂ ಜಾತಿಗಣತಿ ಹಿಂಪಡೆಯಲಿ ಎಂದು ಒತ್ತಾಯಿಸಿದರು. ಲಿಂಗಾಯತ ಧರ್ಮ ಎನ್ನುವುದು ಅನುಮೋದನೆಯೇ ಆಗಿಲ್ಲ. ದೇಶದಲ್ಲಿ ಆರು ಧರ್ಮ ಮಾತ್ರ ಇರುವುದು. ಮೀಸಲಾತಿ ಗೊಂದಲ ಆಗಬಾರದು. ಎಲ್ಲರೂ ಹಿಂದೂ ಅಂತಾ ಬರೆಸುತ್ತಿದ್ದಾರೆ. ವೀರಶೈವ ಲಿಂಗಾಯತ ಅಂತೆಲ್ಲಾ ಸಮಾಜವನ್ನು ಒಡೆಯುವ ಕೆಲಸ ಕೆಲವು ಶಕ್ತಿಗಳು ಮಾಡುತ್ತಿವೆ. ಪ್ರತ್ಯೇಕ ಲಿಂಗಾಯತ ಧರ್ಮ ಎಂಬುದು ದೊಡ್ಡ ಸಮಾಜವನ್ನು ಒಡೆಯುವ ಹುನ್ನಾರ ಎಂದು ಯತ್ನಾಳ್ ಕಿಡಿಕಾರಿದರು.
ದೇವರಿಗೆ ಐ ಲವ್ ಅಂತಾ ಹೇಳೋದು ನಮ್ಮ ಧರ್ಮವೇ ಅಲ್ಲ. ಐ ಲವ್ ಅಂತಾ ಪ್ರೇಯಸಿಗೆ ಹೇಳುತ್ತಾರೆ. ಅತ್ಯಂತ ಪ್ರೀತಿಯ ಮಕ್ಕಳಿಗೆ ಹೇಳುತ್ತಾರೆ. ಈಗ ದೇವರಿಗೂ ಅದನ್ನೇ ಉಪಯೋಗಿಸುತ್ತಿದ್ದಾರೆಂದರೆ ಇದು ರಾಜ್ಯದಲ್ಲೂ ಅಶಾಂತಿ ಮೂಡಿಸುವ ಯತ್ನವಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಪ್ರಚೋದನಾಕಾರಿ ಹೇಳಿಕೆಗಳೇ ಇದಕ್ಕೆಲ್ಲಾ ಕಾರಣ. ಮಸೀದಿ ಮುಂದೆ ಯಾಕೆ ಮೆರವಣಿಗೆ, ಫ್ಲೆಕ್ಸ್ ಅಂತಾ ಪ್ರಶ್ನಿಸುತ್ತಾರೆ. ಈ ದೇಶದಲ್ಲಿ ನಾವು ಎಲ್ಲಿ ಬೇಕೋ ಅಲ್ಲಿ ಫ್ಲೆಕ್ಸ್ ಹಾಕಬಹುದು ಎಂದರು.
ಜಿಲ್ಲಾ ಉಸ್ತುವಾರಿ ಮಂತ್ರಿಗೆ ಕೇಳಿ ನಾವು ಫ್ಲೆಕ್ಸ್ ಹಾಕಬೇಕಾ ಅಂತ? ಮಸೀದಿ ಮುಂದೆ ಹೋಗಬೇಡಿ ಅನ್ನೋರು, ಈದ್ ಮೆರವಣಿಗೆ ದೇವಸ್ಥಾನದ ಮುಂದೆ ಹೋಗಬೇಡಿ ಅಂತಾ ಹೇಳಿ ನೋಡೋಣ. ಮಾಧ್ಯಮಗಳಲ್ಲಿ ಬಂದಿರುವುದೆಲ್ಲಾ ಸತ್ಯವಿರುತ್ತದೆ. ಎಲ್ಲೋ ಒಂದೋ, ಎರಡೋ ಸುಳ್ಳು ಹೇಳಬಹುದು. ಆದರೆ, ಎಲ್ಲ ಮಾಧ್ಯಮಗಳಲ್ಲಿ ಬರುತ್ತಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲ್ಲು ತೂರಾಟವಾಗಿಲ್ಲ ಎಂಬ ಹೇಳಿಕೆ ನೀಡುವ ಬದಲು, ಮೊದಲು ಪರಿಶೀಲನೆ ಮಾಡಬೇಕು. ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪೊಲೀಸ್ ಇಲಾಖೆಗೆ ಫ್ರೀ ಹ್ಯಾಂಡ್ ಕೊಟ್ಟಿಲ್ಲ.
ಫ್ರೀ ಹ್ಯಾಂಡ್ ಕೊಟ್ಟರೆ ಯಾರು ಏನು ಅಂತಾ ತೋರಿಸುತ್ತಾರೆ ಎಂದು ಯತ್ನಾಳ್ ತಿಳಿಸಿದರು. ರಾಜ್ಯದಲ್ಲಿ ಕೇವಲ ಮುಸ್ಲಿಂ ಪರವಾದ ಸರ್ಕಾರವಿದೆ. ಸರ್ಕಾರ ನಮ್ಮ ಪರ ಇದೆಯೆಂಬ ಉನ್ಮಾದವು ಅಂತಹವರಲ್ಲಿ ಬಂದಿದೆ. ನಮ್ಮ ಸಿದ್ದರಾಮಯ್ಯ ಇರೋವರೆಗೂ, ಎಸ್.ಎಸ್. ಮಲ್ಲಿಕಾರ್ಜುನ ಇರುವವರೆಗೂ ನಾವು ಏನೇ ಮಾಡಿದರೂ ನಡೆಯುತ್ತದೆಂಬ ದುರಂಹಕಾರವೂ ಅಂತಹವರಲ್ಲಿ ಇದೆ. ಅದೇ ಕಾರಣಕ್ಕೆ ಹಿಂದೂಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.