'ಮೇ 2ರ ನಂತ್ರ ಸಿಎಂ ಬದಲಾವಣೆ, ಉ.ಕರ್ನಾಟಕದ ಹಿಂದೂಪರ ವ್ಯಕ್ತಿ ಮುಂದಿನ ಸಿಎಂ'

By Suvarna NewsFirst Published Mar 21, 2021, 4:52 PM IST
Highlights

ಸಿಎಂ ಬಿ.ಎಸ್​​​ ಯಡಿಯೂರಪ್ಪ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ವಿಜಯಪುರ, (ಮಾ.21): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುತ್ತಲೇ ಮೇ 2ರ ನಂತರ ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ನಾಯಕತ್ವ ಬದಲಾವಣೆ ವಿಷಯವಾಗಿ ಮತ್ತೊಮ್ಮೆ ಗುಡುಗಿದ್ದಾರೆ. 

ಇಂದು (ಭಾನುವಾರ) ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಗೃಹ ಮಂತ್ರಿಗಳು ಹಾಗೂ ಹೈಕಮಾಂಡ್ ಈ ಕುರಿತು ತೀರ್ಮಾನಿಸುವ ನಿಖರ ಮಾಹಿತಿ ನನಗಿದೆ ಎಂದರು.

ಯತ್ನಾಳ್ ತಾಕತ್ತಿಗೆ ಸಿಎಂ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿ ಸವಾಲ್!

ನಾಯಕತ್ವ ಬದಲಾವಣೆ ಬಳಿಕ ಉತ್ತರ ಕರ್ನಾಟಕದ ಪ್ರಾಮಾಣಿಕ ಹಾಗೂ ಹಿಂದೂ ಪರವಾಗಿ ಇರುವವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮುಂದಿನ ಮುಖ್ಯಮಂತ್ರಿ ಅಗಲಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷ ತನಗೆ ಅವಕಾಶ ನೀಡಲಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದವರಿಗೆ ಮುಖ್ಯಮಂತ್ರಿ ಅವಕಾಶ ಇದೆ ಎಂದು‌ ಮಾತ್ರ ಗೊತ್ತಿದೆ. ಆದರೆ ಅದರಲ್ಲಿ ನನ್ನ ಹೆಸರು ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದೂ ಸ್ಪಷ್ಟಪಡಿಸಿದರು.

ರಾಜ್ಯದ ವಿಧಾನಸಭೆ ಮುಂದಿನ ಚುನಾವಣೆ ಬದಲಾವಣೆ ಆಗಲಿರುವ ಮುಖ್ಯಮಂತ್ರಿ ನಾಯಕತ್ವದಲ್ಲಿ ನಡೆಯಲಿದೆ. ಯಡಿಯೂರಪ್ಪ ಅವರಿಗೆ 75 ವರ್ಷ ವಯೋಮಿತಿ ಮೀರಿದ್ದರೂ ವಿಶೇಷ ಸಂದರ್ಭದಲ್ಲಿ ಅವರಿಗೆ ಮುಖ್ಯಮಂತ್ರಿ ಅವಕಾಶ ಸಿಗಲಿದೆ. ಹೀಗಾಗಿ ಯಡಿಯೂರಪ್ಪ ಮಾರ್ಗದರ್ಶಕ ಮಂಡಳಿಯಲ್ಲಿ ಇರುತ್ತಾರೆ. ಹೀಗಾಗಿ 2023 ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವುದಿಲ್ಲ ಎಂದು ಪುನರುಚ್ಚರಿಸಿದರು.

click me!