
ಬಳ್ಳಾರಿ (ಜು.10): ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಒಳಗಡೆ ಮ್ಯಾಚ್ ಫಿಕ್ಸಿಂಗ್ ಆಗಿರುವ ಕಾರಣ ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಎರಡೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಆದರೆ, ಅವರ ಅಗ್ರಿಮೆಂಟ್ ಪ್ರಕಾರ ಮುಖ್ಯಮಂತ್ರಿ ಅಧಿಕಾರ ಎರಡೂವರೆ ವರ್ಷ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಆಗಲು ಡಿ.ಕೆ. ಶಿವಕುಮಾರ ಅವರು ನಾನಾ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಖುರ್ಚಿ ಭದ್ರ ಮಾಡಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಅವರು ಕೈ ಪಕ್ಷದ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ ಅವರು ಈಗಾಗಲೇ ದೆಹಲಿಯಲ್ಲಿ ಕುಳಿತಿದ್ದು, ದೊಡ್ಡ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಎಲ್ಲ ಗೊಂದಲಗಳಿಗೆ ರಾಜ್ಯದ ಜನತೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು. ಸಿಎಂ ಬದಲಾವಣೆ ವಿಚಾರದಿಂದ ಸಿದ್ದರಾಮಯ್ಯ ಅವರನ್ನು ಹೊರತರಲು ರಾಜ್ಯದಿಂದ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಹಿಂದುಳಿದ ಸಮುದಾಯಗಳ ಒಕ್ಕೂಟಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.
ಆದರೆ, ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಪಳಗಿರುವ ವ್ಯಕ್ತಿ, ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ಡಿಕೆಶಿ ಅವರನ್ನು ಸೈಡ್ಲೈನ್ ಮಾಡಲು, ಎಸ್ಸಿ, ಎಸ್ಟಿ ಸಮುದಾಯದವರನ್ನು ಸಿಎಂ ಮಾಡಬೇಕೆಂದು ಎತ್ತಿಕಟ್ಟುತ್ತಿದ್ದಾರೆ. ಇದರ ಹೊರತಾಗಿಯೂ ಕೃಷ್ಣ ಬೈರೇಗೌಡ ಅವರ ಹೆಸರು ಸಹ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಈ ಎಲ್ಲ ಬೆಳವಣಿಗೆ ನಡುವೆ ಡಿಕೆಶಿ ಮಂಕಾಗಿದ್ದಾರೆ. ರಾಜ್ಯದ ಜನತೆ ಈ ಸರ್ಕಾರಕ್ಕೆ ಗುಡ್ಬೈ ಹೇಳುವ ಸಮಯ ಬಂದಿದೆ. ಮಧ್ಯಂತರ ಚುನಾವಣೆ ಬಂದರೂ ಬಿಜೆಪಿ ಎದುರಿಸುವ ಶಕ್ತಿಯಿದೆ ಎಂದು ಹೇಳಿದರು.
ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಇದ್ದಾರೆ. ಮೂರು ವರ್ಷಗಳ ನಂತರ ಬದಲಾವಣೆ ಮಾಡುವ ಅವಶ್ಯಕತೆ ಬಂದರೆ ಮುಂದಿನ ನಿರ್ಧಾರ ಪಕ್ಷದಿಂದ ಕೈಗೊಳ್ಳಲಿದೆ. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್. ಗಣೇಶ್, ಬಿ. ನಾಗೇಂದ್ರ, ಡಾ. ಶ್ರೀನಿವಾಸ್ ಅವರು ವಾಲ್ಮೀಕಿ ನಿಗಮದ ಹಣವನ್ನು ತಂದು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. ಈ ಬಗ್ಗೆ ಡಿಜಿಟಲ್ ಪುರಾವೆಗಳು ಸಹ ಸಿಕ್ಕಿವೆ. ಇಡಿ ತನಿಖೆ ನಡೆಸಿದ ಬಳಿಕ ಈಗ ಸಿಬಿಐ ಪ್ರವೇಶಿಸಿದೆ. ತನಿಖೆ ವೇಳೆ ನಾಗೇಂದ್ರ ಅವರು ಪುನಃ ಜೈಲಿಗೆ ಹೋದರೂ ಆಶ್ಚರ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಶ್ರೀರಾಮುಲು ಹೇಳಿದರು. ಕೂಡ್ಲಿಗಿ ಸ್ಪರ್ಧೆ ಖಚಿತ: ನಾನು ಕೂಡ್ಲಿಗಿಯಲ್ಲಿ ಸ್ಪರ್ಧೆ ಮಾಡುವ ಇಚ್ಛೆಯನ್ನು ಹೊಂದಿರುವುದು ನಿಜ ಎಂದು ಶ್ರೀರಾಮುಲು ಖಚಿತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.