
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮಾ.21): 1953 ರಲ್ಲಿ ಭಾರತ ಮತ್ತು ಇರಾನ್ ನಡುವೆ ಒಪ್ಪಂದವಾಗಿದ್ದು, ಇರಾನ್ ಮತ್ತು ಭಾರತದ್ದು 75 ವರ್ಷಗಳ ಸ್ನೇಹ. ಯುದ್ಧ ಆರಂಭವಾಗಿರುವುದರಿಂದ ಹರ್ಮುಜ್ ಮಾರ್ಗವನ್ನು ಬಂದ್ ಮಾಡಿಬಿಟ್ಟಿದ್ದಾರೆ. ಆದರೆ ನಮ್ ದೇಶದ ಪ್ರಧಾನಿಯವರು ಯಾವ ಉದ್ದೇಶಕ್ಕೆ ಇಸ್ರೇಲ್ ಗೆ ಹೋಗಿದ್ದರು. ಅದನ್ನು ಈಗ ಸಂಸತ್ ಕಲಾಪ ನಡೆಯುತ್ತಿದ್ದು ಅಲ್ಲಿಯೇ ದೇಶದ ಜನರಿಗೆ ಹೇಳಲಿ ಎಂದು ಸಿಎಂ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಆಗ್ರಹಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಸಂದರ್ಭ ರಾಜ್ಯಕ್ಕೆ ಅಗತ್ಯದಷ್ಟು ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಗೆ ಸಿಎಂ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿಯೇ ಸಿಲಿಂಡರ್ ಕೊರತೆ ಇರುವುದು ನಿಜ. ಆದರೆ ಕೊರತೆಗೆ ಕಾರಣ ಏನು ಹುಡುಕಬೇಕಲ್ಲವೆ.? ಇಸ್ರೇಲ್ ಎಷ್ಟೇ ಶಕ್ತಿಶಾಲಿ ರಾಷ್ಟ್ರವಾದರೂ ಅಂತರರಾಷ್ಟ್ರೀಯವಾಗಿ ಭಾರತಕ್ಕಾಗಲಿ ಇತರೆ ರಾಷ್ಟ್ರಕ್ಕಾಗಲಿ ಯಾವುದೇ ಪ್ರಯೋಜನ ಇಲ್ಲ.
ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅವತ್ತಿನ ಸೋವಿಯತ್ ಒಕ್ಕೂಟ ಇಂದಿನ ರಷ್ಯಾ ನಮ್ಮ ಸ್ನೇಹ ರಾಷ್ಟ್ರ. ನೆಹರು ಕಾಲದಿಂದಲೂ ಐತಿಹಾಸಿಕ ಸ್ನೇಹ ರಾಷ್ಟ್ರ. ಆದರೆ ಪ್ರಧಾನಿಯವರು ಇಂದು ಅದನ್ನು ಕೆಡಿಸಿದ್ದಾರೆ ಎಂದು ಕೇಂದ್ರದ ವಿರುದ್ಧ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹರಿಹಾಯ್ದರು. ಕೇಂದ್ರದ ವಿರುದ್ಧ ಕಿಡಿಯಾದ ಅವರು ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗ ನಾವು, ನೀವು ಸ್ನೇಹ ದೇಶ. ಯುದ್ಧಕ್ಕೆ ಅವಕಾಶ ಬೇಡ ನಿಲ್ಸಿ ಎಂದು ಎದ್ದು ನಿಂತು ಹೇಳಬಹುದಿತ್ತು.
ಅವತ್ತು ವಾರ್ ಮಾಡಿ ಅಂತ ರಷ್ಯಾಗೆ ದುಡ್ಡು ಕೊಟ್ಟರು. ಈಗ ರಷ್ಯಾದಿಂದ ಆಯಿಲ್ ತಗೋಬೇಡಿ ಅಂತ ಅಮೆರಿಕ ಹೇಳಿದ್ರೆ ಆಯ್ತು ಅಂತಾರೆ. ಮುವತ್ತು ದಿನ ಮಾತ್ರ ತಗೊಳ್ಳಿ ಅಂದರೆ ಅದಕ್ಕೂ ಆಯ್ತು ಅಂತಾರೆ. ನಮ್ಮ ಸುತ್ತ ಇರುವ ಯಾವುದೇ ದೇಶದೊಂದಿಗೆ ನಾವು ವ್ಯವಹಾರ ಮಾಡಲು ಸಾಧ್ಯವಿಲ್ಲ. ಯಾರು ಇವತ್ತು ನಮ್ಮ ಸ್ನೇಹ ರಾಷ್ಟ್ರವಾಗಿಲ್ಲ, ಇವತ್ತು ಡಾಲರ್ ಎದುರು ರೂಪಾಯಿ ಪರಿಸ್ಥಿತಿ ಏನಾಗಿದೆ. ಅಂದು ಡಾಲರ್ ಬೆಲೆ 60 ರೂಪಾಯಿ ಆದಾಗ ಹೆಂಗಾಯಿತು ಎಂದು ಪ್ರಶ್ನಿಸಿದರು,
ಇಂದು 92 ರೂಪಾಯಿ ಆಗಿ ಹೋಗಿದೆ. ಇವತ್ತು ಬಡ ಮತ್ತು ಮಧ್ಯಮ ವರ್ಗದವರು ಮದುವೆ ಮಾಡಲು ಸಾಧ್ಯವಿಲ್ಲ. ಚಿನ್ನದ ಬೆಲೆ ಅಷ್ಟು ಹೆಚ್ಚಾಗಿ ಹೋಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಗ್ರಾಂಗೆ 500 ರೂಪಾಯಿ ಇತ್ತು. ಇವತ್ತು ಎಷ್ಟು ಆಗಿದೆ ಎಂದು ವಿರಾಜಪೇಟೆ ಶಾಸಕ ಎ. ಎಸ್ ಪೊನ್ನಣ್ಣ ಪ್ರಶ್ನಿಸಿದರು. ಯುದ್ಧಕ್ಕಿಂತ ಮೊದಲು ಗ್ಯಾಸ್ ಬೆಲೆ ಎಷ್ಟಿತ್ತು. ಅಂದು ಗ್ಯಾಸ್ ಸಿಲಿಂಡರ್ 400 ರೂಪಾಯಿ ಆದಾಗ ಸಿಲಿಂಡರ್ ತಲೆಮೇಲೆ ಹೊತ್ತು ಹೋರಾಟ ಮಾಡಿದ್ರು.
ಇವತ್ತು ಸಿಲಿಂಡರ್ ಬೆಲೆಯನ್ನು ಹೊರಲಾರದಷ್ಟು ಅದರ ಬೆಲೆ ಭಾರವಾಗಿದೆ ಎಂದರು. ಪ್ರೀಮಿಯಂ ಪೆಟ್ರೋಲ್ ದರ ಹೆಚ್ಚಳಕ್ಕೂ ಕಿಡಿಯಾದ ಶಾಸಕ ಪೊನ್ನಣ್ಣ, ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್ ದರವನ್ನು ಹೆಚ್ಚಳ ಮಾಡುತ್ತಾರೆ. ಇದರ ಬಗ್ಗೆ ಯಾರಾದರೂ ಚಕಾರ ಎತ್ತುತ್ತಿದ್ದಾರಾ, ನಾವೇನಾದರೂ ಮಾತನಾಡಿದರೆ ಯುದ್ಧದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎನ್ನುತ್ತಾರೆ.
ಇವರು ದೇಶ ವಿರೋಧಿಗಳು ಎನ್ನುತ್ತಾರೆ. ನಾವು ರಾಷ್ಟ್ರವಾದಿಗಳು, ದೇಶಕ್ಕೆ ಸ್ವಾತಂತ್ರ ತಂದವರು ನಾವು. ನಮಗೆ ಇವತ್ತು ದೇಶ ವಿರೋಧಿಗಳು ಎಂಬ ಪಟ್ಟಕಟ್ಟಿ ಕೂರಿಸಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ನಾವು ಸರಂಡರ್ ಆಗುತ್ತೇವೆ ಅಂತ ಪತ್ರ ಬರೆದಿದ್ದರು. ಹಾಗಂತ ಪತ್ರ ಬರೆದವರು ಹೀಗ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ನಾವು ರಷ್ಯಾ, ಇರಾನ್ ಜೊತೆ ರಿಲೇಷನ್ ಶಿಪ್ ಬೆಳೆಸಬೇಕಾಗಿತ್ತು. ಅಮೆರಿಕದ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ಬೇಕಾಗಿತ್ತು, ಇದು ಇಂಡಿಯಾ ಎಂದ ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.