‘ಬ್ರ್ಯಾಂಡ್‌ ಬೆಂಗಳೂರು’ 27ಕ್ಕೆ ಸರ್ವ ಶಾಸಕರ ಸಭೆ: ಡಿ.ಕೆ.ಶಿವಕುಮಾರ್‌ ಭರವಸೆ

Published : Jul 17, 2024, 10:04 AM IST
‘ಬ್ರ್ಯಾಂಡ್‌ ಬೆಂಗಳೂರು’ 27ಕ್ಕೆ ಸರ್ವ ಶಾಸಕರ ಸಭೆ: ಡಿ.ಕೆ.ಶಿವಕುಮಾರ್‌ ಭರವಸೆ

ಸಾರಾಂಶ

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಸರ್ಕಾರ ಮತ್ತು ಬಿಬಿಎಂಪಿಯಿಂದ ಒಟ್ಟು ₹3,400 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸಭೆ (ಜು.17): ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಸರ್ಕಾರ ಮತ್ತು ಬಿಬಿಎಂಪಿಯಿಂದ ಒಟ್ಟು ₹3,400 ಕೋಟಿ ಅನುದಾನ ಒದಗಿಸಲಾಗಿದೆ. ಈ ಯೋಜನೆ ಕುರಿತು ಚರ್ಚಿಸಲು ಅಧಿವೇಶನ ಮುಗಿದ ಮರುದಿನವೇ (ಜು.27) ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ರಸ್ತೆ ಗುಂಡಿ, ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. 

ಇವುಗಳ ಪರಿಹಾರಕ್ಕೆ ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಇನ್ನಷ್ಟು ರಸ್ತೆಗಳಿಗೆ ವೈಟ್‌ಟಾಪಿಂಗ್‌, ಸುರಂಗ ಮಾರ್ಗ ನಿರ್ಮಾಣ, ರಸ್ತೆ ಅಗಲೀಕರಣ, ಇಂಟಿಗ್ರೇಟೆಡ್‌ ಮೆಟ್ರೋ ರೋಡ್‌ ಪ್ಲೈ ಓವರ್‌ ಸೇರಿದಂತೆ ಬಿಬಿಎಂಪಿಯಿಂದ ₹1700 ಕೋಟಿ ಮತ್ತು ಸರ್ಕಾರದಿಂದ ₹1660 ಕೋಟಿ ಮೊತ್ತದ ಹಲವು ಕಾಮಗಾರಿಗಳನ್ನು ರೂಪಿಸಲಾಗಿದೆ. ಸ್ಪೀಕರ್‌ ಅನುಮತಿ ಕೊಟ್ಟರೆ ಇವುಗಳ ಬಗ್ಗೆ ಈ ಸದನದಲ್ಲೇ ಒಂದು ಇಡೀ ದಿನ ಚರ್ಚಿಸೋಣ. 

ತಮಿಳುನಾಡಿಗೆ ನಿತ್ಯ 1.5 ಟಿಎಂಸಿ ಕಾವೇರಿ ನೀರು: ಡಿ.ಕೆ.ಶಿವಕುಮಾರ್‌

ಅಥವಾ ಸದನ ಮುಗಿದ ಬಳಿಕ ಒಂದು ಸಭೆ ಕರೆಯುತ್ತೇನೆ. ಸಮಗ್ರವಾಗಿ ಚರ್ಚಿಸೋಣ. ನಗರದ ಎಲ್ಲ ಶಾಸಕರೂ ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಿ ಎಂದರು. ಇದಕ್ಕೆ ಸ್ಪೀಕರ್‌ ನೀವು ಸದನದ ಹೊರಗೇ ಈ ಬಗ್ಗೆ ಸಭೆ ಕರೆಯುವುದು ಸೂಕ್ತ ಎಂದರು. ಬಿಜೆಪಿ ನಾಯಕರು ಬೆಂಗಳೂರು ಅಭಿವೃದ್ಧಿಗೆ ಇರುವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ಅವರು, ‘ಅಶೋಕ್, ಸುರೇಶ್ ಕುಮಾರ್ ಹಾಗೂ ರಾಮಮೂರ್ತಿ ಅವರ ಮಾತಿಗೆ ನನ್ನ ಸಹಮತವಿದೆ. ಕಳೆದ ಒಂದು ವರ್ಷದಿಂದ ಸಮನ್ವಯತೆ ಸಾಧಿಸಲು ನಾನೇ ಸಾಕಷ್ಟು ಕಸರತ್ತು ನಡೆಸಿದ್ದೇನೆ. 

ಇದರಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಆದರೆ ಒಂದು ಹಂತಕ್ಕೆ ಸಮಸ್ಯೆ ನಿವಾರಣೆ ಮಾಡಿದ್ದೇನೆ. ಆದರೆ ಪ್ರಯತ್ನ ಮುಂದುವರೆಸಿದ್ದೇನೆ. ಪ್ರತಿಪಕ್ಷದವರು ಸಹಕಾರ ನೀಡಿದರೆ ಕಸ ವಿಲೇವಾರಿ, ಕುಡಿಯುವ ನೀರು, ಸಂಚಾರ ದಟ್ಟಣೆ, ಬೀದಿ ದೀಪ, ತೆರಿಗೆ ಸಂಗ್ರಹ, ಹಸಿರೀಕರಣ - ಹೀಗೆ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬಹುದು. ಇದಕ್ಕಾಗಿ ಅಧಿವೇಶನ ಮುಗಿದ ಮರುದಿನ ಜು.27ರಂದು ಸರ್ವ ಪಕ್ಷ ಶಾಸಕರ ಸಭೆ ಕರೆಯುವುದಾಗಿ ತಿಳಿಸಿದರು.

ಯೋಜನೆಗಳಲ್ಲಿ ತಾರತಮ್ಯ: ಸಿ.ಕೆ.ರಾಮಮೂರ್ತಿ: ಇದಕ್ಕೂ ಮುನ್ನ ಮಾತನಾಡಿದ ಕೆ.ಸಿ.ರಾಮಮೂರ್ತಿ, ಸರ್ಕಾರ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಬಗ್ಗೆ ಈ ಸದನಕ್ಕೆ ಸರಿಯಾದ ಮಾಹಿತಿ ನೀಡಬೇಕು. ಬಹಳಷ್ಟು ಸದಸ್ಯರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಲ್ಲಿಯೂ ತಾರತಮ್ಯ ಆಗುತ್ತಿದೆ. ಕೇವಲ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯಿಂದ ಮಾತ್ರ ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣ ಸಾಧ್ಯವಿಲ್ಲ. ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನೂ ಪರಿಹರಿಸಿದಾಗಲೇ ಈ ಯೋಜನೆಗೆ ಅರ್ಥ ಬರುವುದು ಎನ್ನುವುದನ್ನು ಮನಗಂಡು ಕಾಮಗಾರಿಗಳ ಹಂಚಿಕೆ ಮಾಡಬೇಕು ಎಂದರು.

ಜೆಡಿಎಸ್‌ ನಾಯಕರು ಗೋಡಂಬಿ, ದ್ರಾಕ್ಷಿ ತಿನ್ನಲು ಬಂದಿದ್ದರಾ?: ಡಿ.ಕೆ.ಶಿವಕುಮಾರ್‌

ನಮ್ಮ ಕ್ಷೇತ್ರಕ್ಕೂ ಹಣ ಕೊಡಿ: ಆರ್‌.ಅಶೋಕ್‌: ಪ್ರತಿಪಕ್ಷ ನಾಯಕ ಅಶೋಕ್‌ ಮಾತನಾಡಿ, ನಿಮಗೆ ಬೇಕಾದವರಿಗೆ ಅನುದಾನ ಕೊಡುವುದನ್ನು ಬ್ರ್ಯಾಂಡ್‌ ಬೆಂಗಳೂರು ಅನ್ನಲಾಗಲ್ಲ. ಕಳೆದ 15 ವರ್ಷಗಳ ದಾಖಲೆ ತೆಗೆಯಿರಿ ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್‌ ಸದಸ್ಯರಿಗೆ ಎಷ್ಟು ಅನುದಾನ ಕೊಡಲಾಗಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ. ಬೆಂಗಳೂರಿನಲ್ಲಿ 16 ಜನ ಬಿಜೆಪಿ ಶಾಸಕರೂ ಇದ್ದಾರೆ. ನಾವು ನಮ್ಮ ಆಡಳಿತದಲ್ಲಿ ನಿಮ್ಮ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಟ್ಟಿದ್ದರೆ ನಮಗೂ ಕೊಡಿ. ತಾರತಮ್ಯ ಮಾಡಬೇಡಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!