ಲೋಕಸಭೆ ಚುನಾವಣೆ ಫಲಿತಾಂಶ 2024: ಕಾಂಗ್ರೆಸ್‌ ಪುಟಿದೇಳುವಂತೆ ಮಾಡಿದ ಖರ್ಗೆ

Published : Jun 05, 2024, 07:41 AM IST
ಲೋಕಸಭೆ ಚುನಾವಣೆ ಫಲಿತಾಂಶ 2024: ಕಾಂಗ್ರೆಸ್‌ ಪುಟಿದೇಳುವಂತೆ ಮಾಡಿದ ಖರ್ಗೆ

ಸಾರಾಂಶ

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನದಿಂದ ಚೇತರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದು, ಈ ಪೈಕಿ ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿ ಕರ್ನಾಟಕದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಪಟ್ಟ ನೀಡಿದ್ದಾಗಿದೆ. ಇದಾದ ನಂತರ ಪಕ್ಷದಲ್ಲಿನ ಎಲ್ಲರನ್ನೂ ಅನುಸರಿಸಿಕೊಂಡು ಹೋಗುವ ನೀತಿಯನ್ನು ಖರ್ಗೆ ಅವರು ಪಾಲಿಸಿದ್ದೂ ಪಕ್ಷದ ಏಳ್ಗೆಗೆ ಬಹುಮುಖ್ಯ ಕಾರಣವಾಗಿದೆ.

ನವದೆಹಲಿ(ಜೂ.05):  ಲೋಕಸಭೆ ಚುನಾವಣೆ ಫಲಿತಾಂಶ-2024 ಹಲವು ವಿಷಯಗಳಲ್ಲಿ ಐತಿಹಾಸಿಕವಾಗಿದೆ. ಬಿಜೆಪಿ ನಾಯಕತ್ವದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ. ಆದರೆ ಮತ್ತೊಂದೆಡೆ, ಕಾಂಗ್ರೆಸ್ ಕಳೆದ 10 ವರ್ಷಗಳಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದೆ.

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನದಿಂದ ಚೇತರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದು, ಈ ಪೈಕಿ ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿ ಕರ್ನಾಟಕದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಪಟ್ಟ ನೀಡಿದ್ದಾಗಿದೆ. ಇದಾದ ನಂತರ ಪಕ್ಷದಲ್ಲಿನ ಎಲ್ಲರನ್ನೂ ಅನುಸರಿಸಿಕೊಂಡು ಹೋಗುವ ನೀತಿಯನ್ನು ಖರ್ಗೆ ಅವರು ಪಾಲಿಸಿದ್ದೂ ಪಕ್ಷದ ಏಳ್ಗೆಗೆ ಬಹುಮುಖ್ಯ ಕಾರಣವಾಗಿದೆ.

ಪ್ರಬಲ ನಾಯಕನಾಗಿ ಹೊರಹೊಮ್ಮಿದ ರಾಹುಲ್‌ ಗಾಂಧಿ..!

ಖರ್ಗೆ ಅಧ್ಯಕ್ಷರಾದ ನಂತರ ಕಾಂಗ್ರೆಸ್‌ ಪಕ್ಷ ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಜಯಗಳಿಸಿತು. 2024ರ ಲೋಕಸಭೆ ಚುನಾವಣೆಯಲ್ಲಿ ಅವರ ನಿಲುವಿನಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗಿದೆ. ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ರಾಜಿ ಧೋರಣೆ ಅನುಸರಿಸಬೇಕಾಯಿತು. ಈಗ ಅದರ ಸಕಾರಾತ್ಮಕ ಪರಿಣಾಮವೂ ಗೋಚರಿಸುತ್ತಿದೆ.
2014 ಮತ್ತು 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ್ದು, 100 ಸ್ಥಾನಗಳ ಗಡಿ ಸಮೀಪಿಸಿದೆ.

ಗಾಂಧಿ ಕುಟುಂಬದಿಂದ ಖರ್ಗೆ ತೆಕ್ಕೆಗೆ ಪಕ್ಷ:

ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯು ಸಾಮಾನ್ಯವಾಗಿ ಗಾಂಧಿ ಕುಟುಂಬದ ಸದಸ್ಯರಿಗೆ ಇರುತ್ತದೆ. ಸೋನಿಯಾ ಗಾಂಧಿ ಅವರು ಹಲವು ವರ್ಷಗಳ ಕಾಲ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರ ನಂತರ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಯಿತು. ಅಂದರೆ 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಆಗ ಕಾಂಗ್ರೆಸ್‌ ಸೋತ ಕಾರಣ, ನಂತರ ರಾಹುಲ್‌ ಗಾಂಧಿ ಅವರು ಪಟ್ಟ ವಹಿಸಿಕೊಂಡಿದ್ದರು ಹಾಗೂ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಹುಲ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

2014 ಮತ್ತು 2019ರ ಈ ಎರಡೂ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ 50 ಸೀಟಿನ ಆಸುಪಾಸಲ್ಲಿ ಹೊಯ್ದಾಡಿ ಅತಿ ಕಳಪೆ ಪ್ರದರ್ಶನ ತೋರಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದಿದ್ದರೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಅತ್ಯಂತ ಹಳೆಯ ಪಕ್ಷ 52 ಸ್ಥಾನಗಳನ್ನು ಪಡೆದಿತ್ತು. ಪ್ರಮುಖ ಪ್ರತಿಪಕ್ಷ ಪಟ್ಟವನ್ನೂ ಗಳಿಸಲು ವಿಫಲವಾಯಿತು. ಆಗ ಕಾಂಗ್ರೆಸ್‌ ಪಕ್ಷವನ್ನು ಆಡಿಕೊಂಡು ಬಿಜೆಪಿಗರೇ ಕುಹಕವಾಡಿದರು.

ಇಂಥ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು. ಸೋನಿಯಾ ಗಾಂಧಿ ಅವರು ಪಕ್ಷ ಮತ್ತೆ ಮಧ್ಯಂತರ ಅಧ್ಯಕ್ಷೆಯಾಗಿ 3 ವರ್ಷ ಅಧಿಕಾರ ನಡೆಸಿದರು, ಈ ನಡುವೆ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಹೊರತಾದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡುವ ತಂತ್ರವನ್ನು ಕಾಂಗ್ರೆಸ್‌ ಅನುಸರಿಸಿತು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಚುನಾವಣೆ ನಡೆಸಲು ಅವಕಾಶವಿದೆ. ಇದರ ಅಡಿ 2022ರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಂದು ಕಡೆ ಮಲ್ಲಿಕಾರ್ಜುನ ಖರ್ಗೆ, ಇನ್ನೊಂದು ಕಡೆ ಶಶಿ ತರೂರ್ ಕೂಡ ಈ ಹುದ್ದೆಗೆ ಕಣದಲ್ಲಿದ್ದರು. ಆದರೆ, ಗಾಂಧಿ ಕುಟುಂಬದ ಬೆಂಬಲದಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕಿರೀಟ ಒಲಿದಿಯಿತು. ಪ್ರಸ್ತುತ ಖರ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಧಾರವಾಡದಲ್ಲಿ ದಾಖಲೆಯ 5ನೇ ಗೆಲುವು ಸಾಧಿಸಿದ ಜೋಶಿ..!

ಪಕ್ಷದ ಪುನರುತ್ಥಾನಕ್ಕೆ ಖರ್ಗೆ ಕೊಡುಗೆ:

ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಮುಖ ಮಾತ್ರವಲ್ಲದೆ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕರು. ಸಾಮಾನ್ಯವಾಗಿ ಅವರನ್ನು ‘ಸೌಮ್ಯ ನಾಯಕ’ ಹಾಗೂ ಎಲ್ಲರೊಂದಿಗೂ ರಾಜಿ ಮನೋಭಾವದಿಂದ ವರ್ತಿಸುವ ನಾಯಕ ಎಂದು ಗುರುತಿಸಲಾಗುತ್ತದೆ. ಅವರು ಯಾವತ್ತೂ ಒಮ್ಮತವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಅದು ಕಾಂಗ್ರೆಸ್‌ನ ಆಂತರಿಕ ವಿಚಾರವಾಗಿರಲಿ ಅಥವಾ ಮೈತ್ರಿಗೆ ಸಂಬಂಧಿಸಿದ ವಿಚಾರವಾಗಿರಲಿ.

ತ್ಯಾಗಮಯಿ ಖರ್ಗೆ:

ಖರ್ಗೆ ಎಷ್ಟು ತ್ಯಾಗಮಯಿ ಎಂದರೆ, ‘ಪ್ರಧಾನಿ ಅಭ್ಯರ್ಥಿ’ ಆಗಿ ಎಂಬ ಇಂಡಿಯಾ ಕೂಟದ ಮಿತ್ರರ ಕೋರಿಕೆಗೂ ಅವರು ಒಲ್ಲೆ ಎಂದರು. ‘ಮೊದಲು ಇಂಡಿಯಾ ಕೂಟ ಗೆಲ್ಲಲಿ, ಆಮೇಲೆ ನೋಡೋಣ’ ಎಂದು ಒಮ್ಮೆ ಹೇಳಿದರು. ಇನ್ನೊಮ್ಮೆ ‘ನನಗೆ ವಯಸ್ಸಾಗಿದೆ. ಪ್ರಧಾನಿ ಆಗಲು ರಾಹುಲ್‌ ಗಾಂಧಿ ಸೂಕ್ತ’ ಎಂದೂ 83ರ ಹರೆಯದ ನಾಯಕ ನುಡಿದರು. ಈ ರೀತಿ ಅವರು ಉನ್ನತ ಸ್ಥಾನವು ಅರಸಿ ಬಂದರೂ ಇತರರಿಗೆ ಬಿಟ್ಟುಕೊಡುವ ಮನೋಭಾವ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ