
ನವದೆಹಲಿ(ಡಿ. 07): ಜಯಲಲಿತಾ ಸಾವಿನ ಸುದ್ದಿಯ ಜೊತೆಜೊತೆಗೆ ಹೆಚ್ಚು ಕೇಳಿಬರುತ್ತಿರುವ ಹೆಸರು ಶಶಿಕಲಾ ಅವರದ್ದು. ಜಯಲಲಿತಾ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ, ಶವಪೆಟ್ಟಿಗೆ ಸುತ್ತ ನಿಂತ ಪ್ರಮುಖ ವ್ಯಕ್ತಿಗಳನ್ನು ಗಮನಿಸಿದರೆ, ಅವರೆಲ್ಲರೂ ಶಶಿಕಲಾ ಅಂಡ್ ಗ್ಯಾಂಗ್'ನವರು. ಜಯಲಲಿತಾ ಅವರ ಅಧಿಕಾರದ ಪ್ರಮುಖ ಫಲಾನುಭವಿಗಳು. ಇವರೇ ಮನ್ನಾರ್'ಗುಡಿ ಗ್ಯಾಂಗ್'ನವರು. ಶಶಿಕಲಾ, ನಟರಾಜನ್, ಮಹದೇವನ್, ಡಾ. ವೆಂಕಟೇಶ್ ಮತ್ತು ದಿವಾಕರನ್ - ಈ ಐವರು ಈ ಮನ್ನಾರ್'ಗುಡಿ ಗ್ಯಾಂಗ್'ನ ಕೋರ್ ಸದಸ್ಯರು. ಶಶಿಕಲಾ ಗಂಡ ನಟರಾಜನ್; ಸೋದರ ದಿವಾಗರನ್; ಇನ್ನು, ಡಾ. ವೆಂಕಟೇಶ್ ಮತ್ತು ಮಹದೇವನ್ ಈಕೆಯ ಸಂಬಂಧಿಕರು. ತಮಿಳುನಾಡಿನ ಆಡಳಿತ ವ್ಯವಸ್ಥೆಯ ಎಲ್ಲಾ ಆಯಕಟ್ಟಿನ ಜಾಗದಲ್ಲಿ ಈ ಗ್ಯಾಂಗ್'ನ ಸದಸ್ಯರಿದ್ದಾರೆನ್ನಲಾಗಿದೆ. ಏನೇ ಡೀಲಿಂಗ್ ಆದರೂ ಇವರ ಸುಪರ್ದಿಯಲ್ಲೇ ನಡೆಯುತ್ತದೆ.
ಏನಿದು ಮನ್ನಾರ್'ಗುಡಿ ಗ್ಯಾಂಗ್?
ಕಾವೇರಿ ಕಣಿವೆ ಜಿಲ್ಲೆಯಾದ ತಿರುವರೂರಿನ ಒಂದು ಪುಟ್ಟ ಹಳ್ಳಿ ಮನ್ನಾರ್'ಗುಡಿ. ಶಶಿಕಲಾ ಇದೇ ಊರಿನವರು. ಇವರ ಗ್ಯಾಂಗ್'ನ ಪ್ರಮುಖ ಸದಸ್ಯರೆಲ್ಲರೂ ಇದೇ ಊರಿನವರು. ಹೀಗಾಗಿ ಇವರ ಗುಂಪನ್ನು ಮನ್ನಾರ್'ಗುಡಿ ಗ್ಯಾಂಗ್ ಎಂದೇ ಕರೆಯುತ್ತಾರೆ.
ಶಶಿಕಲಾ ಮತ್ತು ಜಯಲಲಿತಾ ಮೊದಲು ಭೇಟಿಯಾಗಿದ್ದ 80ರ ದಶಕದಲ್ಲಿ. ಆಗ ಜಯಲಲಿತಾ ಎಐಎಡಿಎಂಕೆ ಪಕ್ಷದಲ್ಲಿ ಕಾರ್ಯದರ್ಶಿಯಾಗಿದ್ದರು. ವಿಡಿಯೋ ಕಂಪನಿಯೊಂದರ ಮಾಲಿಕಳಾಗಿದ್ದ ಶಶಿಕಲಾ ಅವರು ಜಯಲಲಿತಾ ಅವರ ಎಲ್ಲಾ ಕಾರ್ಯಕ್ರಮಗಳನ್ನು ಕವರ್ ಮಾಡುವ ಒಪ್ಪಂದದ ಮೂಲಕ ಸ್ನೇಹ ಪರ್ವ ಶುರುವಾಗುತ್ತದೆ. ಇಬ್ಬರ ನಡುವೆ ನಿಕಟ ಸಂಬಂಧ ಬೆಳೆಯುತ್ತದೆ.
1991ರಲ್ಲಿ ಜಯಲಲಿತಾ ಸಿಎಂ ಆದಾಗ ಆಕೆಯ ಅಧಿಕೃತ ನಿವಾಸಕ್ಕೆ ಎಂಟ್ರಿಕೊಡುವಷ್ಟು ನಿಕಟವರ್ತಿಯಾಗಿರುತ್ತಾಳೆ ಶಶಿಕಲಾ. ಅಷ್ಟೇ ಅಲ್ಲ, ಶಶಿಕಲಾ ಅವರ ಅಣ್ಣನ ಮಗ ಸುಧಾಕರನ್'ನನ್ನು ಜಯಲಲಿತಾ ದತ್ತು ಪುತ್ರನಾಗಿ ಸ್ವೀಕರಿಸುತ್ತಾರೆ. 1995ರಲ್ಲಿ ಶಿವಾಜಿ ಗಣೇಶನ್ ಮೊಮ್ಮಗಳ ಜೊತೆ ಸುಧಾಕರನ್ ವಿವಾಹವನ್ನು ಬಹಳ ಅದ್ಧೂರಿಯಾಗಿ ನೆರವೇರಿಸುತ್ತಾರೆ. ಈ ಮದುವೆ ಎಲ್ಲರ ಕಣ್ಣುಕುಕ್ಕುತ್ತದೆ. ಆಪ್ತ ಸ್ನೇಹಿತೆಯರ ನಡುವೆ ಮೊದಲ ಬಿರುಕಿಗೆ ಈ ಮದುವೆ ಕಾರಣವೂ ಆಗುತ್ತದೆ.
ವಿವಾಹದ 1 ವರ್ಷದ ಬಳಿಕ ನಡೆದ ಚುನಾವಣೆಯಲ್ಲಿ ಜಯಲಲಿತಾ ಸೋಲನ್ನಪ್ಪುತ್ತಾರೆ. ಮದುವೆಗೆ ಕೋಟ್ಯಂತರ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗಳು ಕೇಳಿಬರುತ್ತವೆ. ಪ್ರಕರಣಗಳು ದಾಖಲಾಗುತ್ತವೆ. ಸುಧಾಕರನ್ ತನ್ನ ದತ್ತುಪುತ್ರನಲ್ಲ ಎಂದು ಜಯಲಲಿತಾ ಹೇಳುತ್ತಾರೆ. ಜಯಲಿತಾ ಮತ್ತು ಶಶಿಕಲಾ ಮಧ್ಯೆ ತಾತ್ಕಾಲಿಕ ಬಿರುಕು ಮೂಡುತ್ತದೆ. ಅಷ್ಟೇ ಬೇಗ ಇಬ್ಬರೂ ಒಂದಾಗುತ್ತಾರೆ.
ಅಲ್ಲಿಂದೀಚೆ, ಜಯಲಲಿತಾ ಅವರ ಎಲ್ಲಾ ವಿಚಾರದಲ್ಲೂ ಶಶಿಕಲಾ ಅವರದ್ದೇ ಪಾರಮ್ಯವಿರುತ್ತದೆ. ಆದರೆ, 2011ರಲ್ಲಿ ಜಯಲಲಿತಾ ಎಲ್ಲರನ್ನೂ ದಂಗುಬಡಿಸುವ ಕಾರ್ಯಾಚರಣೆ ಮಾಡುತ್ತಾರೆ. ಶಶಿಕಲಾ ಹಾಗೂ ಮನ್ನಾರ್'ಗುಡಿ ಗ್ಯಾಂಗ್'ನ ಸದಸ್ಯರನ್ನು ಜಯಲಲಿತಾ ತನ್ನ ನಿವಾಸದಿಂದ ಹೊರಗೆ ಕಳುಹಿಸುತ್ತಾರೆ. ಐದು ವರ್ಷಗಳ ಕಾಲ ಅವರನ್ನು ರಾಜಕಾರಣದಿಂದ 'ಇಲ್ಲ'ವಾಗಿಸುತ್ತಾರೆ. ಆದರೆ, ಇತ್ತೀಚೆಗಷ್ಟೇ, ವಿಚಿತ್ರ ರೀತಿಯಲ್ಲಿ ಶಶಿಕಲಾ ಮತ್ತೊಮ್ಮೆ ಜಯಲಲಿತಾರ ಸಾಮೀಪ್ಯಕ್ಕೆ ಬಂದಿರುತ್ತಾರೆ. ಅದಾಗಿ, ಕೆಲವೇ ದಿನಗಳಲ್ಲಿ ಜಯಲಲಿತಾ ಅನಾರೋಗ್ಯದ ಸುದ್ದಿ ರಾಚುತ್ತದೆ. ಈಗ ಏನಿದ್ದರೂ ಇತಿಹಾಸ. ಮುಂದೆ, ಮನ್ನಾರ್'ಗುಡಿ ಮಾಫಿಯಾ ತಮಿಳುನಾಡಿನ ಅಧಿಕಾರವನ್ನು ನೇರವಾಗಿ ಅನುಭವಿಸುತ್ತದೆಯೇ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.