
ಬಾಗಲಕೋಟೆ (ಏ.18): ಹಣಕ್ಕಾಗಿ ಪತಿಯ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಳ್ಳದೆ ಪತ್ನಿ ಪರಾರಿಯಾಗಿದ್ದರಿಂದ ಲಕ್ಷಾಧೀಶರನೊಬ್ಬನ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾದ ಪ್ರಸಂಗ ಎದುರಾದ ಘಟನೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದಿದೆ. ಕೊನೆಗೆ ಗ್ರಾಮಸ್ಥರೇ ಚಂದಾ ಎತ್ತಿ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದು ಶಿವಲಿಂಗಪ್ಪ ಬೇವಿನಕಟ್ಟಿ (45) ಎಂಬ ರೈತನ ಕಥೆ. ೧೬ ಎಕರೆ ಜಮೀನು ಹೊಂದಿದ್ದ ಶಿವಲಿಂಗಪ್ಪ ಹುಬ್ಬಳ್ಳಿಯ ರೇಣುಕಾ ಎಂಬಾಕೆಯನ್ನು ೨ ದಶಕಗಳ ಹಿಂದೆ ಮದುವೆಯಾಗಿದ್ದ. ಈ ದಂಪತಿಗೆ ೧೯ ವರ್ಷದ ಒಬ್ಬ ಪುತ್ರ ಇದ್ದಾನೆ. ಮೂರು ವರ್ಷದ ಹಿಂದೆ ಶಿವಲಿಂಗಪ್ಪ ಬೇವಿನಕಟ್ಟಿ ತಮ್ಮ ೧೬ ಎಕರೆ ಜಮೀನು ಮಾರಾಟ ಮಾಡಿದ್ದು, ಇದರಿಂದ ಬಂದ ₹75 ಲಕ್ಷ ಹಣವನ್ನು ತಾಯಿ, ಪತ್ನಿ ಹಾಗೂ ತನ್ನ ಹೆಸರಿನ ಜಂಟಿ ಖಾತೆಯಲ್ಲಿ ಬ್ಯಾಂಕ್ವೊಂದರಲ್ಲಿ ಠೇವಣಿ ಇರಿಸಿದ್ದರು. ಕೆಲ ದಿನ ಸುಮ್ಮನಿದ್ದ ಪತ್ನಿ ರೇಣುಕಾ, ಬೇರೆ ಬ್ಯಾಂಕ್ನಲ್ಲಿ ಇದಕ್ಕಿಂತಲೂ ಹೆಚ್ಚಿನ ಬಡ್ಡಿ ಬರುತ್ತದೆ. ಅಲ್ಲಿ ಠೇವಣಿ ಇಡೋಣ ಎಂದು ಪುಸಲಾಯಿಸಿದ್ದಾಳೆ. ಪತ್ನಿ ಮಾತು ನಂಬಿ ಶಿವಲಿಂಗಪ್ಪ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದ ₹ ೭೫ ಲಕ್ಷವನ್ನೆಲ್ಲ ತೆಗೆದು ಪತ್ನಿ ಕೈಗೆ ಕೊಟ್ಟಿದ್ದಾರೆ. ಹಣ ಕೈಗೆ ಬರುತ್ತಲೇ ಗಂಡ ಹಾಗೂ ಅತ್ತೆ ಜತೆಗೆ ಜಗಳವಾಡಿದ ರೇಣುಕಾ ತನ್ನ ಪುತ್ರನೊಂದಿಗೆ ಹುಬ್ಬಳ್ಳಿಗೆ ಪರಾರಿಯಾಗಿದ್ದಾಳೆ. ಹುಬ್ಬಳ್ಳಿಯಲ್ಲಿ ಮನೆ ಖರೀದಿ ಮಾಡಿಕೊಂಡು ಅಲ್ಲೇ ಮಗನೊಂದಿಗೆ ವಾಸಿಸುತ್ತಿದ್ದಾಳೆ.
ಇದರಿಂದ ಖಿನ್ನತೆಗೊಳಗಾದ ಶಿವಲಿಂಗಪ್ಪ ೬ ತಿಂಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಸೋಮವಾರ ಕೊನೆಯುಸಿರೆಳೆದಿದ್ದಾರೆ. ಸುದ್ದಿ ತಿಳಿದ ಪತ್ನಿ ರೇಣುಕಾ ಮಗನೊಂದಿಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೊನ್ನಾಕಟ್ಟಿಗೆ ಬಂದಿದ್ದು, ಈ ವೇಳೆ ಗ್ರಾಮದ ಹಿರಿಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಅತ್ತೆಗೆ ೧ ಲಕ್ಷ ರೂ. ನೀಡುವಂತೆ ಹೇಳಿದ್ದಾರೆ. ಇದೇ ಕಾರಣಕ್ಕೆ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಳ್ಳದೆ ರೇಣುಕಾ ಮಗನನ್ನು ಕರೆದುಕೊಂಡು ಸ್ಥಳದಿಂದ ತೆರಳಿದ್ದಾಳೆ. ಕೊನೆಗೆ ಶಿವಲಿಂಗಪ್ಪನ ಅಂತ್ಯಸಂಸ್ಕಾರಕ್ಕೂ ಅವರ ಕುಟುಂಬದ ಬಳಿ ಹಣ ಇಲ್ಲದ್ದನ್ನು ನೋಡಿ ಗ್ರಾಮಸ್ಥರೇ ಚಂದಾ ಎತ್ತಿ ಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಇದೇ ವೇಳೆ ಗ್ರಾಮಸ್ಥರ ಸಲಹೆಯಂತೆ ನ್ಯಾಯ ಒದಗಿಸುವಂತೆ ಕೋರಿ ಶಿವಲಿಂಗಪ್ಪನ ತಾಯಿ ಮಂಗಳವಾರ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.