
ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅಕಾಲಿಕ ಮರಣಕ್ಕೆ ತುತ್ತಾಗಿ, ಆಗಲೇ 40 ಗಂಟೆಗಳು ಕಳೆದಿವೆ. ಆದರಿನ್ನೂ ಮೃತದೇಹ ಭಾರತಕ್ಕೆ ತರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ವಿದೇಶದಲ್ಲಿ ಮೃತಪಟ್ಟ ನಟಿಯ ಕಳೆಬರವನ್ನು ಸ್ವದೇಶಕ್ಕೆ ತರಲು ಇಷ್ಟು ತಡವೇಕೆ?
ಮೃತದೇಹ ತರಲು ಈಗಾಗಲೇ ಅನಿಲ್ ಅಂಬಾನಿ ಒಡೆತನದ ವಿಮಾನವೊಂದು ದುಬೈಗೆ ತೆರಳಿದೆ. ಆದರಿನ್ನೂ ಮೃತದೇಹ ಹಸ್ತಾಂತರಿಸಲು ಮುಗಿಸಬೇಕಾದ ಶಿಷ್ಟಾಚಾರಗಳೇ ಮುಗಿದಿಲ್ಲ. ದುಬೈ ನೆಲದಲ್ಲಿ ಮೃತಪಟ್ಟ ವಿದೇಶಿ ಪ್ರಜೆಗೆ ಸಂಬಂಧಿಸಿದಂತೆ ಕೈಗೊಳ್ಳುವ ತನಿಖೆಯ ವರದಿಗಳಿನ್ನೂ ಅಂತಿಮಗೊಂಡಿಲ್ಲ.
ಭಾನುವಾರ ರಾತ್ರಿಯೇ ಖ್ಯಾತ ನಟಿಯ ಮರಣೋತ್ತರ ಪರೀಕ್ಷೆ ಮುಗಿದಿದೆ. ಇದೀಗ ಫೋರೇನ್ಸಿಕ್ ಇಲಾಖೆಯಡಿಯಲ್ಲಿ ಮೃತದೇಹವಿದ್ದು, ಇದನ್ನು ಸಂರಕ್ಷಿಸಲು ಮುಹೈಸ್ನಾಗೆ ತೆಗೆದುಕೊಂಡು ಹೋಗಲಾಗುವುದು. ಇದಕ್ಕೆ ಸುಮಾರು 1.30 ಗಂಟೆ ಕಾಲ ಅಗತ್ಯವಿದೆ, ಎಂದು ಅಲ್ಲಿನ ಪತ್ರಿಕೆ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಆಮೇಲೆ, ಪೊಲೀಸ್ ಇಲಾಖೆ ಮರಣ ಪತ್ರವನ್ನು ನೀಡಲಿದೆ. ಆ ನಂತರ ದುಬೈನ ಭಾರತೀಯ ರಾಯಭಾರಿ ಕಚೇರಿ ಶ್ರೀದೇವಿಯ ಪಾಸ್ಪೋರ್ಟನ್ನು ರದ್ದುಗೊಳಿಸಬೇಕು. ನಂತರವೇ ಮೃತರ ಕುಟುಂಬ ಶವ ಪಡೆಯಲು ಅಗತ್ಯವಿರುವ ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗೆ ಮುಂದಾಗಬೇಕು. ವಲಸೆ ಅಧಿಕಾರಿಗಳು ಶವ ಹಸ್ತಾಂತರಕ್ಕೆ ನಿರಪೇಕ್ಷಣಾ ಪತ್ರ ನೀಡಿದ ನಂತರವೇ, ದುಬೈ ಸರಕಾರಿ ಅಭಿಯೋಜಕರು ಶವ ಹಸ್ತಾಂತರಕ್ಕೆ ಒಪ್ಪಿಗೆ ನೀಡಲಿದ್ದಾರೆ.
ಇಷ್ಟೆಲ್ಲಾ ಶಿಷ್ಟಾಚಾರಗಳು ಮುಗಿದ ನಂತರ ಭಾರತಕ್ಕೆ ಮೃತದೇಹವನ್ನು ತರಲಿದ್ದು, ಬೋನಿ ಕಪೂರ್ ಹಾಗೂ ಖುಷಿ ಜತೆಗಿರಲಿದ್ದಾರೆ. ದುಬೈ ಸಮಯದ ಪ್ರಕಾರ ಮಧ್ಯಾಹ್ನ 2 ಗಂಟೆಯೊಷ್ಟಿತ್ತಿಗೆ ಮೃತ ದೇಹವನ್ನು ಹಸ್ತಾಂತರಿಸುವ ನಿರೀಕ್ಷೆ ಇದೆ.
ಖ್ಯಾತ ನಟಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ ಮೃತದೇಹ ತ್ವರಿತವಾಗಿ ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಆದರೆ, ಸಾಮಾನ್ಯ ಪ್ರಜೆ ಸತ್ತರಂತೂ ಈ ಪ್ರಕ್ರಿಯೆಗಳು ಮುಗಿಯಲು ತಿಂಗಳಾನುಗಟ್ಟಲೆ ತೆಗೆದುಕೊಳ್ಳುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.