
ಬೆಂಗಳೂರು : ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಜಿಕ ಜಾಲತಾಣದ ಭರಾಟೆ ಭರ್ಜರಿಯಾಗಿದ್ದು, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ತಮ್ಮದೇ ಆದ ಸಾಮಾಜಿಕ ಜಾಲತಾಣದ ಖಾತೆ ಹೊಂದಿದ್ದಾರೆ.
ಇತರ ಎಲ್ಲಾ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಸಾಮಾಜಿಕ ಜಾಲತಾಣವಾದ ಟ್ವೀಟರ್, ಫೇಸ್ಬುಕ್ನ ಮಹತ್ವ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಪ್ರತಿಯೊಬ್ಬ ಮುಖಂಡರೂ ಸಾಮಾಜಿಕ ಜಾಲತಾಣದ ಖಾತೆ ಹೊಂದಿರಬೇಕು ಎಂಬ ಅಲಿಖಿತ ಫರ್ಮಾನು ಅಮಿತ್ ಶಾ ಅವರಿಂದ ಹೊರಬಿದ್ದ ಬೆನ್ನಲ್ಲೇ ಪಕ್ಷದ ಬಹುತೇಕ ಹಿರಿಯ ಹಾಗೂ ಕಿರಿಯ ಮುಖಂಡರು ಸಕ್ರಿಯರಾಗಿದ್ದಾರೆ.
ಪಕ್ಷದ ಹಿರಿಯ ಮುಖಂಡರ ಪೈಕಿ ಬಹುತೇಕ ಎಲ್ಲರೂ ಈ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುವ ಜವಾಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿದ್ದಾರೆ. ಆದರೆ, ಪಕ್ಷದ ರಾಜ್ಯ ವಕ್ತಾರ ಎಸ್.ಸುರೇಶ್ಕುಮಾರ್ ಮತ್ತು ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಬ್ಬರು ಮಾತ್ರ ಈಗಲೂ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ತಾವೇ ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೇರೊಬ್ಬರಿಗೆ ಹೊಣೆ: ಹಾಗೆ ನೋಡಿದರೆ ಇತರ ಕೆಲವು ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲವಾಗಿರುವುದು ಕಂಡು ಬರುತ್ತದೆ. ಆದರೆ, ಅಸಲಿಗೆ ಜಾಲತಾಣದಲ್ಲಿ ಪ್ರತಿಕ್ರಿಯಿಸುವುದು ಅಥವಾ ಮಾಹಿತಿ ಅಪ್ಲೋಡ್ ಮಾಡುವುದು ಅವರಲ್ಲ. ಅವರ ಆಪ್ತರು, ಪರಿಚಿತರು ಅಥವಾ ಖಾಸಗಿ ಏಜೆನ್ಸಿಗಳು. ಒಂದು ಘಟನೆ ಅಥವಾ ಬೆಳವಣಿಗೆ ನಡೆದಾಗ ಆಯಾ ಮುಖಂಡರನ್ನು ಸಂಪರ್ಕಿಸಿ ಅವರ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಯನ್ನು ಅಪ್ಲೋಡ್ ಮಾಡಲಾಗುತ್ತದೆ.
ಹಿರಿಯ ಮುಖಂಡರಿಗೆ ಸಮಯದ ಅಭಾವ ಇರುವುದರಿಂದ ಬೇರೊಬ್ಬರಿಗೆ ಜವಾಬ್ದಾರಿ ವಹಿಸಿರುತ್ತಾರೆ. ಹಾಗಂತ ಸುರೇಶ್ಕುಮಾರ್ ಮತ್ತು ಪ್ರತಾಪ್ ಸಿಂಹ ಅವರಿಗೆ ಹೆಚ್ಚಿನ ಸಮಯವಿದೆ ಎಂದರ್ಥವಲ್ಲ. ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿದಾಗ ಅದರಲ್ಲಿ ಪ್ರಕಟಗೊಳ್ಳುವ ಸಂದೇಶಗಳಲ್ಲಿ ಅವರ ಭಾವನೆ ಇರುತ್ತದೆಯೇ ಹೊರತು ಪದಗಳಲ್ಲ.
ಸಾಮಾಜಿಕ ಜಾಲತಾಣವನ್ನು ಸತತವಾಗಿ ಹಿಂಬಾಲಿಸುತ್ತಿರುವವರಿಗೆ ಈ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸುರೇಶ್ಕುಮಾರ್, ಪ್ರತಾಪ್ ಸಿಂಹ ಅವರ ಖಾತೆಗಳಲ್ಲಿನ ಸಂದೇಶಗಳನ್ನು ಗಮನಿಸಿದಾಗ ಇತರರ ಖಾತೆಗಳಲ್ಲಿನ ಸಂದೇಶಗಳ ವ್ಯತ್ಯಾಸ ಅರಿವಿಗೆ ಬರುತ್ತದೆ. ಬರಹವನ್ನು ಆಸ್ವಾದಿಸುವ ಸುರೇಶ್ಕುಮಾರ್ ಮತ್ತು ಪ್ರತಾಪ್ ಸಿಂಹ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಇದಕ್ಕಾಗಿಯೇ ಸಮಯವನ್ನು ನಿಗದಿಪಡಿಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಸ್ಪಂದಿಸುತ್ತಾರೆ. ಮಾಹಿತಿ, ಪ್ರತಿಕ್ರಿಯೆಗಳನ್ನು ಅಪ್ಲೋಡ್ ಮಾಡುತ್ತಾರೆ. ಅಲ್ಲಿ ಮತ್ತೊಬ್ಬರ ಮಧ್ಯೆ ಪ್ರವೇಶ ಇರುವುದೇ ಇಲ್ಲ. ಉಭಯ ಮುಖಂಡರು ಈ ಸಾಮಾಜಿಕ ಜಾಲತಾಣದ ಮೂಲಕ ಜನರೊಂದಿಗೆ ನೇರ ಸಂಪರ್ಕ, ಸಂವಾದ ಹೊಂದುವ ಪ್ರಯತ್ನ ಮಾಡುತ್ತಿರುತ್ತಾರೆ ಎನ್ನುವುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.