ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾರ್ಯ ನಡೆಯುತ್ತಿದ್ದು ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಟ್ರಾಫಿಕ್ ಜಾಂ ಜಾಂ ಕಿರಿ ಕಿರಿ ಎದುರಾಗುತ್ತಿದೆ.
ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆ ವೇಳೆ ಅರ್ಧ ಕಾಮಗಾರಿ ಮುಗಿಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಮೈಸೂರು ರಸ್ತೆಯ ವೈಟ್ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ಮತ್ತೆ ಕೈಗೆತ್ತಿಕೊಂಡಿದ್ದರೂ, ನಿಧಾನಗತಿಯ ಕಾಮಗಾರಿಯಿಂದಾಗಿ ವಾಹನ ಸವಾರರು ಸಂಚಾರ ದಟ್ಟಣೆ ಕಿರಿಕಿರಿ ಎದುರಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೀಪಾಂಜಲಿನಗರದಿಂದ ಕೆ.ಆರ್.ಮಾರುಕಟ್ಟೆಕಡೆಗೆ ಸಂಚರಿಸುವ ರಸ್ತೆಯ ಒಂದು ಭಾಗದ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಈಗ ಲೋಕಸಭಾ ಚುನಾವಣೆ ಎದುರಾದಾಗ ರಸ್ತೆಯ ಮತ್ತೊಂದು ಭಾಗ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಆರಂಭವಾಗಿ ವಾರ ಕಳೆಯುತ್ತಿದ್ದರೂ ಕೆಲ ದಿನಗಳಿಂದ ಕಾಮಗಾರಿಗೆ ಬಳಸುತ್ತಿರುವ ಬೃಹತ್ ಯಂತ್ರಗಳು ಸ್ಯಾಟ್ಲೈಟ್ ಬಸ್ ನಿಲ್ದಾಣದ ಬಳಿ ನಿಂತಲ್ಲೇ ನಿಂತಿದೆ. ಜೊತೆಗೆ ಇಲ್ಲಿಯೇ ಖಾಸಗಿ ಬಸ್ಗಳೂ ಕೂಡ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಂದು ನಿಲ್ಲುವುದರಿಂದ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ಸ್ಯಾಟ್ಲೈಟ್ ಬಸ್ನಿಲ್ದಾಣದ ಮುಂಭಾಗದಿಂದ ಹಿಡಿದು ಹಳೇಗುಡ್ಡದಹಳ್ಳಿಯಿಂದಾಚೆವರೆಗೆ ದಟ್ಟಣ ಅವಧಿಯಲ್ಲಿ ಗೋಪಾಲನ್ ಮಾಲ್ವರೆಗೂ ಸಂಚಾರ ದಟ್ಟಣೆಯಿಂದ ನಿತ್ಯ ವಾಹನ ಸವಾರರು, ಪ್ರಯಾಣಿಕರು ತೀವ್ರ ಪರದಾಡಬೇಕಾಗಿದೆ.
ಯಾವಾಗ ಮೇಲ್ಸೆತುವೆ ಕಾಮಗಾರಿ?
ತಿಂಗಳ ಹಿಂದೆ ಕೆ.ಆರ್.ಮಾರುಕಟ್ಟೆಫ್ಲೈ ಓವರ್ ದುರಸ್ತಿ ಕಾರ್ಯ ಆರಂಭಿಸಿದ ಪಾಲಿಕೆ, ಕಾರ್ಪೋರೇಷನ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ಮೇಲ್ಸೇತುವೆಯ ಒಂದು ಮಾರ್ಗವನ್ನು ದುರಸ್ತಿಗೊಳಿಸಿ ಹೊಸದಾಗಿ ಟಾರ್ಶೀಟ್ ಹಾಕಿ ಡಾಂಬರೀಕರಣ ಮಾಡಿ ಕೈಬಿಟ್ಟಿದೆ. ಮತ್ತೊಂದು ಬದಿಯ ಕಾಮಗಾರಿ ಯಾವಾಗ ಆರಂಭಿಸುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಒಂದು ಕಾಮಗಾರಿಯನ್ನೂ ಪೂರ್ಣಗೊಳಿಸದೇ ಅರ್ಧ ಭಾಗವನ್ನು ಮಾತ್ರ ಪೂರ್ಣಗೊಳಿಸುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.