
ಬೆಂಗಳೂರು : ಬರುವ ಮೇ ತಿಂಗಳಲ್ಲಿ ನಡೆಯಬೇಕಾದ ವಿಧಾನಸಭಾ ಚುನಾವಣೆ ಆರು ತಿಂಗಳ ಕಾಲ ಮುಂದೂಡಲ್ಪಡುವುದೇ ಎಂಬ ಅನುಮಾನ ಮತ್ತು ವದಂತಿ ರಾಜ್ಯ ರಾಜಕಾರಣದಿಂದ ಹೊರಬಿದ್ದಿದೆ. ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವಂತಾಗ ಬೇಕು ಎಂಬ ದಿಕ್ಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನ ಆರಂಭಿಸಿರುವುದ ರಿಂದ ಈ ವದಂತಿ ಹೊರಬಿದ್ದಿದೆ.
ಈ ವರ್ಷದ ಅಂತ್ಯದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆ ವೇಳೆಯಲ್ಲಿಯೇ ಲೋಕಸಭೆಗೂ ಅವಧಿ ಪೂರ್ವ ಚುನಾವಣೆ ನಡೆಸುವ ಬಗ್ಗೆ ಮೋದಿ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಅದರ ಸಾಧಕ ಬಾಧಕಗಳ ಲೆಕ್ಕಾಚಾರ ಹಾಕತೊಡಗಿ ದ್ದಾರೆ.
ಅದರ ಬೆನ್ನಲ್ಲೇ ಇಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುವ ಬಗ್ಗೆ ವರಿಷ್ಠರಿಗೂ ಅನುಮಾನವಿದೆ. ಹೀಗಾಗಿ ಕಾನೂನಿನ ನೆರವು ಪಡೆದುಕೊಂಡು ಆರು ತಿಂಗಳ ಕಾಲ ಮುಂದೂಡುವ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂಬ ವದಂತಿ ಕೇಳಿಬರತೊಡಗಿದೆ.
ಆದರೆ, ಈ ವದಂತಿಯನ್ನು ರಾಜ್ಯ ಬಿಜೆಪಿ ನಾಯಕರು ನಿರಾಕರಿಸುತ್ತಿದ್ದಾರೆ. ಆ ರೀತಿಯ ಯಾವುದೇ ಚಿಂತನೆ ಅಥವಾ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತಲೆಯಲ್ಲಿ ಏನು ಓಡುತ್ತಿದೆಯೋ ಎಂಬುದು ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕರಿಗೂ ಮಾಹಿತಿ ಇಲ್ಲ ಎನ್ನುವುದು ಮಾತ್ರ ಸತ್ಯ.
ಇತ್ತೀಚೆಗಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಅಭಿವೃದ್ಧಿ ಉದ್ದೇಶದಿಂದ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವಂತಾಗಬೇಕು. ದೆಹಲಿಯಲ್ಲಿ ನಡೆಯುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರತಿಪಾದನೆ ಮಾಡುವುದಾಗಿಯೂ ತಿಳಿಸಿದ್ದರು. ಹೀಗಿರುವಾಗ ಕರ್ನಾಟಕ ವಿಧಾನಸಭೆಯ ಚುನಾವಣೆಯನ್ನೂ ಮುಂದೂಡಿ ಏಕಕಾಲದಲ್ಲಿ ನಡೆಯುವಂತೆ ಮಾಡಲಾಗುತ್ತದೆಯೇ ಎಂಬ ಅನುಮಾನ ಟಿಸಿಲೊಡೆದಿದೆ. ಹಾಗಾದಲ್ಲಿ ಅಲ್ಲಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶ ಕಲ್ಪಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.