
ಬೆಂಗಳೂರು (ಅ. 26): ನಿಮಗೆ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದೆಯೇ? ಅದಕ್ಕಾಗಿ ದುಬಾರಿ ಔಷಧಗಳ ಮೊರೆ ಹೋಗಿದ್ದೀರಾ? ಹಾಗಿದ್ದರೆ, ಈ ಬಾಬಾನ ಬಳಿ ಬನ್ನಿ, ಕೇವಲ ಕೈ ಬೆರಳಿನಲ್ಲಿಯೇ ನಿಮ್ಮ ಮೂತ್ರ ಪಿಂಡದ ಕಲ್ಲನ್ನು ಹೊರತೆಗೆಯುತ್ತಾನೆ.
ಅಂಥದ್ದೊಂದು ಶಕ್ತಿ ಈತನ ಕೈಗಳಿಗೆ ಇದೆ. ಇಂಥದ್ದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದೆ. ಗುಜರಾತಿನ ವಡೋದರಾದ ಮೌಲಾನಾ ಸಿರಾಜ್ ಎಂಬಾತನೇ ಈ ಬಾಬಾ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತೋರಿಸುವಂತೆ ಬಾಬಾನ ಮುಂದೆ ಕುಳಿತ ವ್ಯಕ್ತಿ ತನ್ನ ಶರ್ಟ್ ಮೇಲಕ್ಕೆ ಎತ್ತುತ್ತಾನೆ. ಬಳಿಕ ಬಾಬಾ ಹೊಟ್ಟೆಯನ್ನು ಬಗೆದಂತೆ ಮಾಡಿ, ಕೆಲವೇ ನಿಮಿಷದಲ್ಲಿ ಸಣ್ಣ ಕಲ್ಲನ್ನು ಬಟ್ಟಲ ಮೇಲೆ ಹಾಕುತ್ತಾನೆ.
ಹೊಟ್ಟೆಯ ಆ ಜಾಗಕ್ಕೆ ಮುಲಾಮು ಹಚ್ಚಿ ಕಳುಹಿಸುತ್ತಾನೆ. ಹೀಗಾಗಿ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಈತನ ಮನೆಯಮುಂದೆ ಜಮಾಯಿಸುತ್ತಾರೆ. ಆತ ಕೇಳಿದಷ್ಟು ದುಟ್ಟುಕೊಟ್ಟು ಮೂತ್ರಪಿಂಡದಲ್ಲಿ ಬೆಳೆದಿರುವ ಕಲ್ಲಿನಿಂದ ಉಪಶಮನ ಪಡೆಯುತ್ತಿದ್ದಾರೆ. ಬಾಬಾನ ಚಮತ್ಕಾರದ ಬಗ್ಗೆ ಅಲ್ಲಿಗೆ ಬಂದ ಜನರನ್ನು ಮಾತನಾಡಿಸಿದಾಗಲೂ ಅವರೆಲ್ಲಾ ತಮಗೆ ಕಿಡ್ನಿ ಸ್ಟೋನ್ ನಿವಾರಣೆ ಆಗಿದೆ ಎಂದು ಹೇಳಿದ್ದಾರೆ.
ಹಾಗಿದ್ದರೆ, ಈ ವಿಡಿಯೋ ನಿಜವೇ? ಆತ ನಿಜವಾಗಿಯೂ ಕೈಬೆರಳಿನಿಂದ ಮೂತ್ರ ಪಿಂಡದ ಕಲ್ಲನ್ನು ತೆಗೆಯಲು ಸಾಧ್ಯವೇ ಎಂದು ವೈದ್ಯರನ್ನು ಕೇಳಿದಾಗ ಅದೊಂದು ಕೇವಲ ಕಣ್ಣುಕಟ್ಟು ವಿದ್ಯೆ ಎಂದು ಹೇಳಿದ್ದಾರೆ. ಮೂತ್ರಪಿಂಡದ ಕಲ್ಲು ಅತ್ಯಂತ ಸಣ್ಣದಾಗಿದ್ದು, ಅದನ್ನು ಕೈಯಿಂದ ತೆಗೆಯಲು ಸಾಧ್ಯವಿಲ್ಲ ಎಂಬುದು ಅವರ ಸ್ಪಷ್ಟ ನುಡಿ. ಹೀಗಾಗಿ ಈ ಸುದ್ದಿ ಸುಳ್ಳು ಎಂಬುದೂ ಸ್ಪಷ್ಟ.
-ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.