
ಮುಂಬೈ: ಪ್ರತಿಷ್ಠಿತ ರೇಮಂಡ್ ಕಂಪನಿಯ ವಿಶ್ರಾಂತ ಅಧ್ಯಕ್ಷ ವಿಜಯಪಥ್ ಸಿಂಘಾನಿಯಾ ಹಾಗೂ ಅವರ ಪುತ್ರ ಗೌತಮ್ ಸಿಂಘಾನಿಯಾ ನಡುವೆ ನಡೆಯುತ್ತಿರುವ ತಿಕ್ಕಾಟ ಮತ್ತೊಂದು ಮಜಲು ತಲುಪಿದೆ. ರೇಮಂಡ್ ಅನ್ನು ದೇಶದ ಪ್ರತಿಷ್ಠಿತ ಬ್ರ್ಯಾಂಡ್ ಆಗಿಸುವಲ್ಲಿ ಬಹುವಾಗಿ ಶ್ರಮಿಸಿದ 80 ವರ್ಷದ ವಿಜಯಪಥ್ ಅವರನ್ನು ಕಂಪನಿಯ ವಿಶ್ರಾಂತ ಅಧ್ಯಕ್ಷ ಸ್ಥಾನದಿಂದ ಹಾಲಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ನೇತೃತ್ವದ ನಿರ್ದೇಶಕ ಮಂಡಳಿ ಪದಚ್ಯುತಗೊಳಿಸಿದೆ.
ವಿಜಯಪಥ್ ಸಿಂಘಾನಿಯಾ ಅವರಿಗೆ ನೀಡಲಾಗಿರುವ ವಿಶ್ರಾಂತ ಅಧ್ಯಕ್ಷ ಪಟ್ಟವನ್ನು ಹಿಂಪಡೆಯುವ ಕಂಪನಿಯ ನಿರ್ಧಾರವನ್ನು ರೇಮಂಡ್ನ ಕಂಪನಿ ಸೆಕ್ರೆಟರಿ ಥಾಮಸ್ ಫರ್ನಾಂಡಿಸ್ ಅವರು ಸೆ.7ರಂದೇ ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ರೇಮಂಡ್ ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ವಿಜಯಪಥ್ ಅವರು, ಆಗಸದಲ್ಲಿ ಹಾರಾಡುವುದರ ಬಗ್ಗೆಯೂ ಅತೀವ ಆಸಕ್ತಿ ಹೊಂದಿರುವಂಥವರು. 1988ರಲ್ಲಿ ಕಿರು ವಿಮಾನದಲ್ಲಿ ಅವರು ಭಾರತದಿಂದ ಬ್ರಿಟನ್ವರೆಗೆ 24 ದಿನಗಳಲ್ಲಿ 34 ಸಾವಿರ ಕಿ.ಮೀ. ದೂರವನ್ನು ಕ್ರಮಿಸಿದ್ದರು. ಅಂತಾರಾಷ್ಟ್ರೀಯ ವಿಮಾನ ರೇಸ್ನಲ್ಲಿ 1998ರಲ್ಲಿ ಅವರಿಗೆ ಚಿನ್ನದ ಪದಕ ಲಭಿಸಿತ್ತು. ಭಾರತೀಯ ವಾಯುಪಡೆ ಗೌರವಾನ್ವಿತ ಏರ್ ಕಮೋಡರ್ ಹುದ್ದೆ ಕೊಟ್ಟಿತ್ತು. 2001ರಲ್ಲಿ ತಮ್ಮ 67ನೇ ವಯಸ್ಸಿನಲ್ಲಿ ಬಿಸಿ ಗಾಳಿ ಬಲೂನ್ನಲ್ಲಿ ಅತಿ ಹೆಚ್ಚು ಎತ್ತರಕ್ಕೆ ತಲುಪುವ ಮೂಲಕ ಹೊಸ ದಾಖಲೆ ಬರೆದಿದ್ದರು. ಅವರಿಗೆ ಪದ್ಮಭೂಷಣ ಕೂಡ ಲಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.