
ಲಕ್ಷ್ಮೇಶ್ವರ : ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಕಂಡುಬಂದಿದ್ದು, ಅನ್ನಭಾಗ್ಯದ ಅಕ್ಕಿಯಿಂದ ತಯಾರಿಸಿದ ಅನ್ನ ಊಟ ಮಾಡಿದ 15ಕ್ಕೂ ಅಧಿಕ ಮಕ್ಕಳು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಕರಳು ಹಿಂಡಿದಂತಾಗಿ ಭೇದಿಯಾಗುತ್ತಿರುವ ಘಟನೆ ಬುಧವಾರ ನಡೆದಿದೆ.
ಕಳೆದ ಎರಡು ದಿನಗಳಿಂದ ಅನ್ನ ಭಾಗ್ಯದ ಅಕ್ಕಿ ಊಟ ಮಾಡುತ್ತಿರುವ ಮಕ್ಕಳು ತೀವ್ರ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ದಿನಕ್ಕೆ ಮೂರ್ನಾಲ್ಕು ಬಾರಿ ಮಲ ವಿಸರ್ಜನೆ ಆಗುತ್ತಿತ್ತು. ಮಲ ವಿಸರ್ಜನೆ ಸಂದರ್ಭದಲ್ಲಿ ತೀವ್ರ ಹೊಟ್ಟೆನೋವು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರಲ್ಲಿ ಚಿಕಿತ್ಸೆ ಸಹ ಪಡೆಯಲಾಯಿತು. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ತಾಂಡಾದ ಜನ ಆರೋಪಿಸುತ್ತಿದ್ದಾರೆ.
ತಾಂಡಾದ ಬಹುತೇಕ ಮನೆಗಳಲ್ಲಿ ಇದೇ ಸಮಸ್ಯೆ ಕಾಣಿಸಿಕೊಂಡಿದ್ದಿರಿಂದ ಅಕ್ಕಿಯ ಪರೀಕ್ಷೆ ಮಾಡಿದಾಗ ಅದರಲ್ಲೂ ಯೂರಿಯಾ ಗೊಬ್ಬರದ ಕಣಗಳಿರುವುದು ಕಂಡು ಬಂದಿದೆ.
ಯೂರಿಯಾ ಕಣಗಳನ್ನು ನೀರಿನಲ್ಲಿ ಹಾಕಿ ಪರೀಕ್ಷೆ ಮಾಡಿದಾಗ ಆ ಕಣಗಳು ನೀರಿನಲ್ಲಿ ಕರಗಿ ಹೋಗಿವೆ. ಅಲ್ಲದೆ ಆ ಕಣಗಳನ್ನು ಬಾಯಲ್ಲಿ ಹಾಕಿಕೊಂಡಾಗ ಉಪ್ಪಿನಂಶ ಗೋಚರಿಸುತ್ತಿದೆ. ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಯಾವುದು, ಅಕ್ಕಿ ಯಾವುದು ಎಂದು ಪತ್ತೆ ಮಾಡುವುದು ಕಷ್ಟಕರ. ಇದರಿಂದ ತಕ್ಷಣವೆ ಅನ್ನಭಾಗ್ಯ ಅಕ್ಕಿಯ ಊಟ ನಿಲ್ಲಿಸಿದ್ದೇವೆ ಎಂದು ತಾಂಡಾದ ನಿವಾಸಿಗಳು ಹೇಳಿದ್ದಾರೆ.
ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಮಿಶ್ರಣ ಮಾಡಲಾಗಿದ್ದು, ಬಡವರು ಇಂತಹ ಅಕ್ಕಿಯ ಅನ್ನ ತಿಂದು ಆಸ್ಪತ್ರೆಯ ಹಾದಿ ಹಿಡಿಯುತ್ತಿದ್ದಾರೆ. ಸರ್ಕಾರ ನೀಡುವ ಪುಕ್ಕಟೆ ಅಕ್ಕಿಯಲ್ಲಿ ಯೂರಿಯಾ ಸೇರಿದ್ದು ಹೇಗೆ ಎಂಬುದು ಪತ್ತೆಯಾಗಬೇಕು. ಇಂತಹ ಅನ್ಯಾಯ ಮಾಡುತ್ತಿರುವವರನ್ನು ಜಿಲ್ಲಾಧಿಕಾರಿಗಳು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು.- ಜಗದೀಶ ದೊಡ್ಡಮನಿ, ಲಕ್ಷ್ಮೇಶ್ವರ
ಪಡಿತರ ಇಲಾಖೆ ವಿತರಿಸಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಅಂಶ ಇದೆಯೋ ಹೇಗೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಆಹಾರ ನಿರೀಕ್ಷಕರನ್ನು ಅಲ್ಲಿಗೆ ಕಳಿಸಿದ್ದೇನೆ. ಅಕ್ಕಿಯಲ್ಲಿ ಅಂತಹ ಅಂಶ ಕಂಡುಬಂದರೆ ಆ ಅಕ್ಕಿಯನ್ನು ವಿತರಣೆ ಮಾಡದಂತೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಅಕ್ಕಿಗುಂದ ತಾಂಡಾಕ್ಕೆ ವೈದ್ಯಾಧಿಕಾರಿಗಳನ್ನು ಕಳುಹಿಸಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು.- ಡಾ. ವೆಂಕಟೇಶ ನಾಯ್ಕ, ತಹಸೀಲ್ದಾರ್ ಲಕ್ಷೆ ್ಮೕಶ್ವರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.