
ಉಡುಪಿ(ಜೂ.02): ಒಂದಾನೊಂದು ಕಾಲದಲ್ಲಿ ಉಡುಪಿಯ ಪ್ರತಿಷ್ಠೆಯ ಸಂಕೇತವಾಗಿದ್ದ ಮೈನ್ ಶಾಲೆ ಈಗ ಪ್ರತಿಷ್ಠಿತರಿಗೆ ಮಾರಾಟವಾಗುತ್ತಿದೆ. ಈಗಾಗಲೇ ಜಿಲ್ಲಾ ಹೆರಿಗೆ ಆಸ್ಪತ್ರೆಯನ್ನು ಆಪೋಷನ ತೆಗೆದುಕೊಂಡ ದುಬೈನ ಉದ್ಯಮಿಯೊಬ್ಬರಿಗೆ, ಸರ್ಕಾರಿ ಶಾಲೆಯನ್ನೂ ಸೇರಿಸಿ ಕೃಷ್ಣಾರ್ಪಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇದು ಇಬ್ಬರು ಉದ್ಯಮಿಗಳ ಕಥೆ. ಒಬ್ಬರು ಹಾಜಿ ಅಬ್ದುಲ್ಲಾ ಸಾಹೇಬರು. ಕಾರ್ಫೋರೇಷನ್ ಬ್ಯಾಂಕ್ ಸ್ಥಾಪಿಸಿದ ಮಹಾದಾನಿ. ನೂರು ವರ್ಷಗಳ ಹಿಂದೆ ಜಿಲ್ಲಾ ಕೇಂದ್ರಕ್ಕೊಂದು ಹೆರಿಗೆ ಆಸ್ಪತ್ರೆ ದಾನ ಮಾಡಿದರು. ಈಗ ರಾಜ್ಯ ಸರ್ಕಾರ ಅದೇ ಶಾಲೆಯನ್ನು ದುಬೈನ ಉದ್ಯಮಿ ಉಡುಪಿ ಮೂಲದ ಬಿ.ಆರ್. ಶೆಟ್ಟಿಗೆ ದಾನ ಮಾಡಿ ಕೈತೊಳೆದುಕೊಂಡಿದೆ. ಉಡುಪಿ ನಗರದ ಹೃದಯಭಾಗದಲ್ಲಿ ಒಂದು ಉಚಿತ ಆಸ್ಪತ್ರೆ ಮತ್ತೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬಿ.ಆರ್. ವೆಂಚರ್ಸ್ ಮುಂದಾಗಿದ್ದು, ಈ ಕಾರಣಕ್ಕಾಗಿ ಶಾಲೆಯ ಭೂಮಿಯನ್ನು ಕೂಡಾ ಬಿ.ಆರ್. ಶೆಟ್ಟರಿಗೆ ನೀಡಲಾಗುತ್ತಿದೆ.
ಪೇಜಾವರ ಶ್ರೀ'ಗಳು ಓದಿದ ಶಾಲೆ:
ನಾಡಿನ ಹಿರಿಯ ಯತಿ ಪೇಜಾವರ ಸ್ವಾಮೀಜಿ ಕೂಡಾ ಇದೇ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಈ ಕಟ್ಟಡ ಸದ್ಯ ಶಿಥಿಲವಾಗಿದೆ. ಖಾಸಗಿ ಆಸ್ಪತ್ರೆಯ ಕೆಲಸ ಆರಂಭವಾದ ಮೇಲಂತೂ ಮಕ್ಕಳ ಪಾಠ ಪ್ರವಚನಕ್ಕೆ ಅಡ್ಡಿಯಾಗಿದೆ. ಶಾಲೆಯ ಕಟ್ಟಡದಲ್ಲೂ ಬಿರುಕು ಕಾಣಿಸಿಕೊಂಡಿದೆ. ಕೇವಲ ವಲಸೆ ಕಾರ್ಮಿಕರ ಮಕ್ಕಳು ಮಾತ್ರ ಈ ಕನ್ನಡ ಶಾಲೆಗೆ ಕಲಿಯಲು ಬರ್ತಾರೆ. ಇದನ್ನೇ ನೆಪ ಮಾಡಿ ಇಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳನ್ನು ನಾರ್ತ್ ಶಾಲೆಗೆ ಸ್ಥಳಾಂತರಿಸಿ ಶೀಘ್ರವೇ ಕಟ್ಟಡ ತೆರವು ಮಾಡುವ ಸಾಧ್ಯತೆಯಿದೆ. ಶಾಲೆಯನ್ನೇ ದುರಸ್ತಿ ಮಾಡಿ ಉಳಿಸಿಕೊಳ್ಳಬಹುದು. ಆದರೆ ಖಾಸಗಿ ಉದ್ಯಮಿಗೆ ಸ್ಥಳ ನೀಡುವ ಏಕೈಕ ಉದ್ದೇಶ ಈ ನಿರ್ಧಾರದಲ್ಲಿ ನಿಚ್ಛಳವಾಗಿ ಕಂಡುಬರುತ್ತಿದೆ. ಮಕ್ಕಳಿಗಂತೂ ಈ ಶಾಲೆ ಬಿಡೋಕೆ ಇಷ್ಟವಿಲ್ಲ.
ಆಸ್ಪತ್ರೆಯನ್ನು ಬಿ.ಆರ್.ಶೆಟ್ರಿಗೆ ನೀಡ್ತಿರುವುದು ದಾನಿಗಳ ಆಶಯಕ್ಕೆ ವಿರುದ್ಧವಾಗಿದೆ. ಇನ್ನು ಈ ಶಾಲೆಯ ಭೂಮಿ ಕೊಡುವುದು ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ಮಾಡಿದ ಅವಮಾನ ಅನ್ನೋದು ಪ್ರಜ್ಞಾವಂತರ ಅಭಿಪ್ರಾಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.