ಹಾಸನ ಮೊರಾರ್ಜಿ ದೇಸಾಯಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ | ಶಿಕ್ಷಕರಿಂದ ಕಿರುಕುಳ ಆರೋಪ
ಹಾಸನ (ಡಿ. 06): ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಿಂದ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಹಾಸನ ಸಮೀಪದ ಹಾಲುವಾಗಿಲುವಿನಲ್ಲಿ ನಡೆದಿದೆ.
ಎಂಟನೇ ತರಗತಿ ವಿದ್ಯಾರ್ಥಿಗಳಾದ ಚೇತನ್, ಸಯ್ಯದ್ ಮಜೀದ್ ಕಾಣೆಯಾಗಿರುವ ವಿದ್ಯಾರ್ಥಿಗಳು. ವಸತಿ ಶಾಲೆಯಲ್ಲಿ ಅವ್ಯವಸ್ಥೆ ಹಾಗೂ ಶಿಕ್ಷಕರ ಚಿತ್ರಹಿಂಸೆಗೆ ಬೇಸತ್ತು ವಿದ್ಯಾರ್ಥಿಗಳು ಓಡಿ ಹೋಗಿರುವ ಆರೋಪವಿದೆ.
ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಮುಂದೆ ಅಲ್ಲಿನ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಮಕ್ಕಳನ್ನ ಸಿನಿಮಾಕ್ಕೆ ಕರೆದೊಯ್ಯುವುದು, ವಿನಾಕಾರಣ ಹಲ್ಲೆ ಸೇರಿದಂತೆ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಖ್ಯೋಪಾಧ್ಯಾಯಿನಿ ಭಾರತಿ ವಿರುದ್ದ ದೂರು ದಾಖಲಾಗಿದೆ. ದೈಹಿಕ ಶಿಕ್ಷಕ ಹಾಗೂ ವಾರ್ಡನ್ ನಾಗೇಂದ್ರ ಹೆಣ್ಣು ಮಕ್ಕಳ ಜೊತೆ ಅನುಚಿತ ವರ್ತನೆ ನಡೆಸುತ್ತಾರೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ.