
ಕಲಬುರಗಿಯಲ್ಲಿ ಇವತ್ತು ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಸಮಾರಂಭ ನಡೆಯಲಿದೆ. ಆದ್ರೆ ಇವತ್ತಿನ ಸಭೆಗೆ ಕೆ.ಎಸ್ ಈಶ್ವರಪ್ಪ ಹೋಗ್ತಾರಾ ಅನ್ನೋದೇ ಡೌಟು.. ಯಾಕಂದ್ರೆ ಕಾರ್ಯಕಾರಿಣಿಗೆ ಪರ್ಯಾಯವಾಗಿ ಇವತ್ತು ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಯಲಿದೆ. ಹೀಗಾಗಿ ಈಶ್ವರಪ್ಪ ನಡೆ ಭಾರೀ ಕುತೂಹರ ಕೆರಳಿಸಿದೆ.
ಬಿಜೆಪಿಯ ಪ್ರಮುಖ ನಾಯಕರಾದ ಕೆ.ಎಸ್. ಈಶ್ವರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ನಡುವಿನ ಮುನಿಸು ಕಿಂಚಿತ್ತು ಶಮನವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರಪ್ಪ ಹಾಗೂ ಬಿ. ಎಸ್. ಯಡಿಯೂರಪ್ಪ ಒಂದೇ ವೇದಿಕೆಯಲ್ಲಿ ಕುಳಿತಿದ್ದರೂ ಪರಸ್ಪರ ಮುಖ ನೋಡಲಿಲ್ಲ. ಹಸ್ತಲಾಘವ ಮಾಡಲಿಲ್ಲ, ನಾನೊಂದು ತೀರ.. ನೀನೊಂದು ತೀರ ಎಂಬಂತೆ ಕುಳಿತಿದ್ದರು.
ನಂತರ ಆರಂಭವಾದ ಕಾರ್ಯಕಾರಿಣಿ ಸಭೆ ಅಕ್ಷರಶಃ ಗೊಂದಲ, ಗದ್ದಲದಲ್ಲಿ ಮುಳುಗಿ ಹೋಯಿತು. ಕಾರ್ಯಕರ್ತರ ಆಕ್ರೋಶ ಶಮನ ಮಾಡಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರರಾವ್ ಎಲ್ಲ ಮುಖಂಡರೊಂದಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಈಶ್ವರಪ್ಪ ಜೊತೆಯೂ ಕೂಡ ರಹಸ್ಯ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ ಮುರುಳಿಧರ್ ರಾವ್, ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮುಂದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನೂ ನಿನ್ನೆ ಸಂಜೆ ಹೊತ್ತಿಗೆ ಬರ ನಿಭಾಯಿಸುವಲ್ಲಿನ ರಾಜ್ಯ ಸರಕಾರದ ವೈಫಲ್ಯ ವಿಷಯ ಚರ್ಚೆಗೆ ಈಶ್ವರಪ್ಪ ಅವರಿಗೆ ವಹಿಸಲಾಯಿತು. ಈಶ್ವರಪ್ಪ ವಿಷಯ ಮಂಡನೆಗೆ ಮುಂದಾಗುತ್ತಿದ್ದಂತೆಯೇ ಕಾರ್ಯಕರ್ತರು ಅಡ್ಡಿಪಡಿಸಿದರು. ಮತ್ತೆ ಮಧ್ಯಪ್ರವೇಶಿಸಿದ ಮುರುಳಿಧರರಾವ್ ಕಾರ್ಯಕರ್ತರನ್ನು ಸಮಾಧಾನ ಮಾಡಿದರು. ಆದರೆ ಎಲ್ಲಾ ಭಿನ್ನಮತ ಸದ್ಯದಲ್ಲಿಯೇ ಬಗೆಹರಿಯಲಿದೆ ಎಂದು ಹೇಳುತ್ತಿದ್ದಾರೆ ಮಾಜಿ ಡಿಸಿಎಂ ಆರ್. ಅಶೋಕ್.
ಈ ಎಲ್ಲಾ ಬೆಳವಣಿಗೆಗಳ ನಡುವೆ ನಾಳೆ ಅಫಜಲಪೂರದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಯಲಿದೆ. ಹೀಗಾಗಿ ಈಶ್ವರಪ್ಪ ಬಿಜೆಪಿ ಕಾರ್ಯಕಾರಿಣಿ ಸಭೆಯಿದ ದೂರ ಉಳಿಯುತ್ತಾರಾ? ಇಲ್ಲವೇ ತಮ್ಮ ಭಿನ್ನ ರಾಗ ಮುಂದುವರೆಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಈ ದಿಕ್ಕಿನಲ್ಲಿ ಇವತ್ತಿನ ಕಾರ್ಯಕಾರಿಣಿ ಸಮಾರೋಪ ಸಮಾರಂಭ ಮತ್ತು ಅಫಜಲಪೂರ ಬ್ರಿಗೇಡ್ ಸಮಾವೇಶದ ಬಗ್ಗೆ ಕಾರ್ಯಕರ್ತರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.