ಮಡಿಕೇರಿ(ಸೆ.01): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಮುಗಿಸಿ ಮಡಿಕೇರಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಗಣಪತಿ ಪತ್ನಿ ಪಾವನಾ ಬಿ.ರಿಪೋರ್ಟ್ ಒಪ್ಪಿಕೊಂಡಿದ್ದರೆ, ಗಣಪತಿ ತಂದೆ ಮತ್ತು ಸಹೋದರ ಒಪ್ಪಿಕೊಳ್ಳದೇ ತಕರಾರು ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಗಣಪತಿ ಕುಟುಂಬದಲ್ಲಿಯೇ ಇಂತಹ ಗೊಂದಲಕ್ಕೆ ಕಾರಣವಾಗಿರಲು ಏನ್ ಕಾರಣ ಗೊತ್ತಾ..? ಸಿಐಡಿ ಸಲ್ಲಿಸಿರುವ ಬಿ ರಿಪೋರ್ಟ್ ನಲ್ಲಿ ಆ ಚಿದಂಬರ ರಹಸ್ಯ ಬಯಲಾಗಿದೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಿ ರಿಪೋರ್ಟ್ ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಕೋರ್ಟ್ ಕೂಡ ಸಿಐಡಿ ವರದೀನ ಅಂಗೀಕರಿಸಿದೆ. ಪತ್ನಿ ಪಾವನಾ ಮತ್ತು ಪುತ್ರ ನೇಹಾಲ್ ಬಿ ರಿಪೋರ್ಟ್ ಅಂಗೀಕರಿಸಿದರೆ, ಗಣಪತಿ ಸಹೋದರ ಮಾಚಯ್ಯ ಮತ್ತು ತಂದೆ ಕುಶಾಲಪ್ಪ ಬಿ ರಿಪೋರ್ಟ್ ವಿರೋಧಿಸಿ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಗಣಪತಿ ಕುಟುಂಬದಲ್ಲೇ ಒಡಕು ಸೃಷ್ಟಿ!
ನೇಹಾಲ್ ಮತ್ತು ಮಾಚಯ್ಯ ಕಾನೂನು ಹೋರಾಟ ಗಣಪತಿ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ಅಸಲಿಗೆ ಇದಕ್ಕೆ ಸಿಐಡಿ ತನಿಖೆ ವೇಳೆ ಉತ್ತರವೂ ಸಿಕ್ಕಿದೆ.!
ಕಾಫಿ ಎಸ್ಟೇಟ್'ಗಾಗಿ ನಡೆಯುತಿತ್ತು ಕದನ
ಗಣಪತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಪತಿ ಮತ್ತು ಪತ್ನಿ ನಡುವಿನ ವಿರಸವೇ ಆತ್ಮಹತ್ಯೆಗೆ ಕಾರಣ ಅಂತ ಬಿಂಬಿಸುವ ಪ್ರಯತ್ನವೂ ಗಣಪತಿ ಮೃತಪಟ್ಟಾಗ ನಡೆದಿತ್ತು. ತನಿಖೆ ವೇಳೆ ಗಣಪತಿ ಸಹೋದರ ತಮ್ಮಯ್ಯ ನೀಡಿದ ಹೇಳಿಕೆ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಇಡೀ ಕುಟುಂಬ ಗಣಪತಿ ಪತ್ನಿ ಪಾವನಾ ವಿರುದ್ದ ಆರೋಪ ಮಾಡುತ್ತಿರುವುದೇಕೆ ಎನ್ನುವುದನ್ನು ಕಂಡುಹಿಡಿದ್ದಾರೆ. ಗಣಪತಿ ಮತ್ತು ಪಾವನಾ ನಡುವೆ ಸಣ್ಣ ಮಟ್ಟಿನ ವೈಮನಸ್ಸು ಇತ್ತದರೂ ಅತಿರೇಕದ ಹಂತದಲ್ಲಿರಲಿಲ್ಲ. ಆದರೆ, ಪತ್ನಿ ಪಾವನಾ ವಿರುದ್ದ ಇಡೀ ಕುಟುಂಬವೇ ತಿರುಗಿಬಿದ್ದಿದೆ. ಈ ವೈಮನಸ್ಸಿಗೆ ಕಾರಣವಾಗಿರುವುದು ಕೊಡಗಿನ ಶೆಟ್ಟಿಹಳ್ಳಿ ಬಳಿಯಿರುವ ಒಂದು ಕಾಫಿ ಎಸ್ಟೇಟ್.
ಪಾವನಾ ತಂದೆ ಸುಮಾರು ಹತ್ತು ವರ್ಷಗಳ ಹಿಂದೆ ಕೊಡಗಿನ ಶೆಟ್ಟಿಹಳ್ಳಿ ಬಳಿ ಕಾಫಿ ಎಸ್ಟೇಟ್ ಒಂದನ್ನು ಖರೀದಿಸಿ ಮಗಳ ಹೆಸರಿಗೆ ನೋಂದಣಿ ಮಾಡಿಸಿರುತ್ತಾರೆ. ಇದಕ್ಕೆ ಗಣಪತಿ ಕೂಡಾ ಹಣ ಹಾಕಿರುತ್ತಾರೆ. ಬೆಂಗಳೂರಿನ ನ್ಯೂ ಬಿಇಎಲ್ ಲೇಔಟ್ ನಲ್ಲಿ ತನ್ನ ಹೆಸರಿಗಿದ್ದ ಒಂದು ಸೈಟನ್ನ ಕೂಡ ಮಾರಿ 4 ಲಕ್ಷ ಹಣವನ್ನ ಹೂಡಿಕೆ ಮಾಡಿರುತ್ತಾರೆ. ಪಾವನಾ ಹೆಸರಲ್ಲಿನ ಪ್ರಾಪರ್ಟಿ ಮತ್ತು ಗಣಪತಿ ತಂದೆ ಕುಶಾಲಪ್ಪ ಹೆಸರಿನಲ್ಲಿ ರಂಗಸಮುದ್ರದಲ್ಲಿದ್ದ ಆಸ್ತಿಯ ವಿಚಾರದಲ್ಲೂ ಹಲವು ಬಾರಿ ಮನೆಯಲ್ಲಿ ಗಲಾಟೆಗಳು ನಡೆದಿದ್ದವು. ಗಣಪತಿ ಮೃತಪಟ್ಟ ಬಳಿಕ ಪತ್ನಿ ಪಾವನಾ ಹೆಸರಿನಲ್ಲಿರುವ ಕಾಫಿ ಎಸ್ಟೇಟ್ ವಿಚಾರವಾಗಿಯೇ ಒಂದೇ ಕುಟುಂಬದಲ್ಲಿ ಇಂಥಾ ವೈರುಧ್ಯಗಳು ಎದುರಾಗಿವೆ. ಹೀಗಾಗಿಯೇ ಸಿಐಡಿ ಸಲ್ಲಿಸಿರುವ ಬಿ ರಿಪೋರ್ಟ್ ಅಂಗೀಕಾರದ ವಿಚಾರದಲ್ಲಿ ಎರಡೆರಡು ಧೋರಣೆಗಳು ಈ ಕುಟುಂಬದಲ್ಲಿ ವ್ಯಕ್ತವಾಗಿವೆ..