ಪಾಕ್‌ ಪತ್ರಕರ್ತೆ ಜತೆ 3 ರಾತ್ರಿ ತಂಗಿದ್ದ ತರೂರ್‌!

Published : Sep 01, 2019, 07:41 AM IST
ಪಾಕ್‌ ಪತ್ರಕರ್ತೆ ಜತೆ 3 ರಾತ್ರಿ ತಂಗಿದ್ದ ತರೂರ್‌!

ಸಾರಾಂಶ

ಸುನಂದಾ ಪುಷ್ಕರ್‌ ನಿಗೂಢ ಸಾವಿನ ಸಂಬಂಧ ಅವರ ಪತಿಯೂ ಆಗಿರುವ ಹಾಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಥವಾ ಕೊಲೆ ಆರೋಪದಡಿ ವಿಚಾರಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಲಾಗಿದೆ. 

ನವದೆಹಲಿ[ಆ.1]: ಉದ್ಯಮಿ ಸುನಂದಾ ಪುಷ್ಕರ್‌ ನಿಗೂಢ ಸಾವಿನ ಸಂಬಂಧ ಅವರ ಪತಿಯೂ ಆಗಿರುವ ಹಾಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಥವಾ ಕೊಲೆ ಆರೋಪದಡಿ ವಿಚಾರಣೆ ನಡೆಸುವಂತೆ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪ್ರಕರಣದಲ್ಲಿ ತರೂರ್‌ ಮೇಲೆ ದೋಷಾರೋಪ ಹೊರಿಸುವ ಸಂಬಂಧ ಶನಿವಾರ ನಡೆದ ವಿಚಾರಣೆ ವೇಳೆ ಪತ್ರಕರ್ತೆ ನಳಿನಿ ಸಿಂಗ್‌ ನೀಡಿರುವ ಕೆಲ ಸ್ಫೋಟಕ ಹೇಳಿಕೆಗಳನ್ನು ಪ್ರಸ್ತಾಪಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅತುಲ್‌ ಶ್ರೀವಾತ್ಸವ, ಸುನಂದಾ ಸಾವಿಗೆ ಶಶಿ ತರೂರ್‌ ಅವರೇ ಕಾರಣರು ಎಂದು ಆರೋಪಿಸಿದರು.

ಪ್ರಕರಣದ ತನಿಖೆ ವೇಳೆ ಸುನಂದಾ ಅವರ ಆಪ್ತೆ ನಳಿನಿ ಸಿಂಗ್‌ ಹೇಳಿಕೆಯೊಂದನ್ನು ನೀಡಿದ್ದು ಅದರಲ್ಲಿ, ‘ನಾನು ಸುನಂದಾ ಪುಷ್ಕರ್‌ ಅವರನ್ನು 3-4 ವರ್ಷಗಳ ಕಾಲ ಬಲ್ಲೆ. ಕೊನೆಯ ವರ್ಷ ಅವರು ತಮ್ಮ ವೈಯಕ್ತಿಕ ಜೀವನದ ಕುರಿತ ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಅದರಲ್ಲಿ ತರೂರ್‌ ಹಾಗೂ ಪಾಕ್‌ ಪತ್ರಕರ್ತೆ ಮೆಹರ್‌ ತರಾರ್‌ ದುಬೈನಲ್ಲಿ ಮೂರು ರಾತ್ರಿ ಕಳೆದಿದ್ದರು ಎಂಬ ಸಂಗತಿಯನ್ನು ಸುನಂದಾ ಬಹಿರಂಗಪಡಿಸಿದ್ದರು. ಸುನಂದಾ ಸಾವನ್ನಪ್ಪುವ ಮುನ್ನಾದಿನ ನನಗೆ ಕರೆ ಮಾಡಿದ್ದರು. ತರೂರ್‌ ಹಾಗೂ ತರಾರ್‌ ಮಧ್ಯೆ ರೊಮ್ಯಾಂಟಿಕ್‌ ಸಂದೇಶಗಳು ವಿನಿಮಯವಾಗಿದ್ದವು. ಅಲ್ಲದೇ ಲೋಕಸಭೆ ಚುನಾವಣೆ ಬಳಿಕ ತರೂರ್‌, ಸುನಂದಾಗೆ ವಿಚ್ಛೇದನ ನೀಡುವ ಸಂಗತಿಯೂ ಸಂದೇಶದಲ್ಲಿ ಇತ್ತು. ತರೂರ್‌ ನಿರ್ಧಾರಕ್ಕೆ ಅವರ ಕುಟುಂಬ ಸದಸ್ಯರಿಂದಲೂ ಬೆಂಬಲವಿತ್ತು ಎಂದು ತಿಳಿಸಿದ್ದರು’ ಎಂಬ ಮಾಹಿತಿ ಇದೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ನ್ಯಾಯಾಲಯದ ಗಮನಕ್ಕೆ ತಂದರು.

ಅಲ್ಲದೆ ತರೂರ್‌ ಹಾಗೂ ಸುನಂದ ಪುಷ್ಕರ್‌ ಅವರು ‘ಕ್ಯಾಟಿ’ ಎಂಬ ಹುಡುಗಿ ಮತ್ತು ಬ್ಲ್ಯಾಕ್‌ಬೆರ್ರಿ ಫೋನ್‌ನಲ್ಲಿನ ಸಂದೇಶಗಳ ಸಂಬಂಧ ಜಗಳವಾಡಿಕೊಂಡಿದ್ದರು. ಐಪಿಎಲ್‌ ವಿಷಯ ಸಂಬಂಧ ಪತ್ರಿಕಾಗೋಷ್ಠಿ ನಡೆಸುವುದಾಗಿ ಮತ್ತು ತರೂರ್‌ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪುಷ್ಕರ್‌ ಹೇಳಿದ್ದರು ಎಂದು ದಂಪತಿಯ ಮನೆ ಕೆಲಸದಾಳು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 498-ಎ(ಪತಿ ಅಥವಾ ಆತನ ಬಂಧುಗಳಿಂದ ಮಹಿಳೆ ಮೇಲೆ ಹಿಂಸೆ), 306 (ಆತ್ಮಹತ್ಯೆಗೆ ಕುಮ್ಮಕ್ಕು) ಅಥವಾ ಐಪಿಸಿ ಸೆಕ್ಷನ್‌ 302 (ಕೊಲೆ) ಅಡಿ ಆರೋಪಗಳನ್ನು ಆರೋಪಿಯ (ತರೂರ್‌) ವಿರುದ್ಧ ಹೊರಿಸುವಂತೆ ಪೊಲೀಸರು ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಅವರಿಗೆ ಮನವಿ ಮಾಡಿದ್ಧಾರೆ.

ಒಂದು ವೇಳೆ ಈ ಕೋರಿಕೆಗೆ ಒಪ್ಪಿ ನ್ಯಾಯಾಲಯ ವಿಚಾರಣೆ ನಡೆಸಿದರೆ, ತರೂರ್‌ ಸಂಕಷ್ಟಎದುರಿಸಲಿದ್ದಾರೆ. ಐಪಿಸಿ 498-ಎ ಹಾಗೂ 306 ಅಡಿ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಐಪಿಸಿ ಸೆಕ್ಷನ್‌ 302ರಡಿ ಆರೋಪ ರುಜುವಾತಾದರೆ ಗರಿಷ್ಠ ಮರಣದಂಡನೆ ವಿಧಿಸಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ