
ಹೆಣ್ಣುಹೆತ್ತವರ ಅಸಹಾಯಕತೆಯನ್ನೇ ಟಾರ್ಗೆಟ್ ಮಾಡಿಕೊಂಡು ಹೆಣ್ಣು ಮಕ್ಕಳನ್ನ ಮಾರಾಟ ಮಾಡೋ ಖತರ್ನಾಕ್ ಗ್ಯಾಂಗೊಂದು ಕರುನಾಡಲ್ಲಿ ಆಕ್ಟೀವ್ ಆಗಿದೆ. ಈ ಗ್ಯಾಂಗ್ ಯಾವ ರೂಪದಲ್ಲಾದ್ರೂ ನಿಮ್ಮ ಬಾಳಿಗೆ ಎಂಟ್ರಿ ಕೊಡಬಹುದು. ಕೊಟ್ಟು ನಿಮ್ಮ ಬದುಕನ್ನೇ ಬರ್ಬಾದ್ ಮಾಡಬಹುದು.
ಖತರ್ನಾಕ್ ಗ್ಯಾಂಗ್ನ ಟಾರ್ಗೆಟ್ಟೇ ಅಸಹಾಯಕ, ಬಡ ಹೆಣ್ಣು ಮಕ್ಕಳು. ಗಲ್ಲಿ ಗಲ್ಲಿಗಳಲ್ಲಿ ಏಜೆಂಟ್ಗಳನ್ನ ಇಟ್ಟು ಕೊಳ್ಳೋ ಈ ಗ್ಯಾಂಗ್, ಮದುವೆ ಹೆಸರಲ್ಲಿ ಹೆತ್ತವರಿಗೆ ಗಾಳ ಹಾಕುತ್ತವೆ. ಈ ಖದೀಮರ ಗ್ಯಾಂಗ್ ಈಗಾಗಲೇ ಕರುನಾಡಿನ, ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದ ಸಾವಿರಾರು ಹೆಣ್ಣು ಮಕ್ಕಳನ್ನು ಹೈಜಾಕ್ ಮಾಡಿದೆ. ಹೈಜಾಕ್ ಮಾಡಿ ಅವರನ್ನ ವಾಪಾಸ್ ಬರಲಾಗದ ಊರಿಗೆ ಕಳುಹಿಸಿ ಕೊಟ್ಟಿದೆ.
ಆ ಗ್ಯಾಂಗ್ನ ಕರಾಳತೆಯಿಂದ ನೊಂದು ಬೆಂದವರು ಬಂದು ಕವರ್ಸ್ಟೋರಿ ತಂಡಕ್ಕೆ ದೂರು ಕೊಟ್ಟರು. ಅವರ ದೂರು ಕೇಳಿ ನಾವು ಬೆಚ್ಚಿ ಬಿದ್ದೆವು. ಯಾಕಂದ್ರೆ ಆ ಗ್ಯಾಂಗ್ ಮಾಫಿಯಾ ರೂಪ ತಾಳಿದೆ. ಅಷ್ಟೇ ಅಲ್ಲ ಅತ್ಯಂತ ಅಪಾಯಕಾರಿಯಾಗಿರೋ ಆ ಗ್ಯಾಂಗ್ ಭಾರೀ ಚಾಣಾಕ್ಷತನದಿಂದ ಕಾರ್ಯನಿರ್ವಹಿಸುತ್ತಿದೆ. ಆ ಕರುನಾಡಿನ ಹೆಣ್ಣು ಮಕ್ಕಳನ್ನ ಹೈಜಾಕ್ ಮಾಡೋ ಖದೀಮರ ಸೀಕ್ರೆಟ್ ಬಯಲು ಮಾಡಲೇ ಬೇಕು. ಆ ಮೂಲಕ ನಮ್ಮ ನಾಡಿನ ಅಪ್ಪಅಮ್ಮಂದಿರನ್ನ ಎಚ್ಚರಿಸಲೇಬೇಕು ಅಂತ ನಿರ್ಧರಿಸಿದ ಕವರ್ಸ್ಟೋರಿ ತಂಡ ಅಸಾಧ್ಯವಾದ ಚಾಲೆಂಜನ್ನ ಕೈಗೆತ್ತಿಕೊಂಡಿತು.
ಕಳ್ಳರ ಜಾಡು ಹಿಡಿದು ಮುಂದಾದ ನಮ್ಮ ತಂಡ
ಕಳ್ಳರ ಜಾಡು ಹಿಡಿದು ಅವರಿಗೆ ಬುದ್ಧಿ ಕಲಿಸಲು ನಮ್ಮ ತಂಡ ಮುಂದಾಯಿತು. ಮೊದಲು ಈ ಗ್ಯಾಂಗ್ನ ಕೆಲ ಸದಸ್ಯರನ್ನ ಗುರುತಿಸಲಾಯಿತು. ಜೊತೆಗೆ ಈ ಗ್ಯಾಂಗ್ ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನ ಅಧ್ಯಯನ ಕೂಡ ಮಾಡಲಾಯಿತು. ಆಗ ಗೊತ್ತಾಗಿದ್ದು ಈ ಗ್ಯಾಂಗ್ ಎರಡು ಬಗೆಯಲ್ಲಿ ಜನರಿಗೆ ಮೋಸ ಮಾಡ್ತಿದೆ ಅನ್ನೋದು.
ಶ್ರೀಮಂತರ ವೇಷದಲ್ಲಿ ಬೇಟೆ
ಈ ಗ್ಯಾಂಗ್ ಗಡಿ ಜಿಲ್ಲೆ ಬೆಳಗಾವಿಯಲ್ಲಿ ತನ್ನ ಕೇಂದ್ರ ಸ್ಥಾನ ಹೊಂದಿರುವುದನ್ನು ನಮ್ಮ ಕವರ್ ಸ್ಟೋರಿ ತಂಡ ಪತ್ತೆ ಹಚ್ಚಿತು. ಅದಕ್ಕಾಗಿ ನಮ್ಮ ತಂಡವು ಸಹ ರಾಜಸ್ಥಾನದ ಶ್ರೀಮಂತ ವ್ಯಾಪಾರಿಗಳ ವೇಷ ಧರಿಸಿ, ಹೆಣ್ಣಿಗೆ ಬೇಡಿಕೆ ಇಟ್ಟು ಬೆಳಗಾವಿ ಕಡೆ ಧಾವಿಸಿತು.
ಅಲ್ಲಿ ಮದುವೆ ಮಾಫಿಯಾದ ಏಜೆಂಟ್ ಕೃಷ್ಣಾನಿಗೆ ಕಷ್ಟಾಪಟ್ಟು ಬಲೆ ಬೀಸಿದಾಗ ಗೊತ್ತಾಗಿದ್ದು, ಬೆಳಗಾವಿಯ ನ್ಯಾಷನಲ್ ಹೊಟೇಲ್ ಮಾಲೀಕ ಕೃಷ್ಣಾ ಎಂಬುವವ ಕರಾಮತ್ತು. ಈ ದುಷ್ಟ ಕಾಸು ಕೊಟ್ರೆ ಸಾಕು ಕಂಡವರ ಮಕ್ಕಳನ್ನ ಎಂಥವರಿಗೆ ಮಾರಲೂ ರೆಡಿಯಾಗಿದ್ದ. ಈತನ ಬಳಿ ನಮಗೆ ಹೆಣ್ಣು ಬೇಕು ಅಂತ ನಮ್ಮ ತಂಡ ಬೇಡಿಕೆ ಇಟ್ಟಿದ್ದೇ ತಡ. ಹೆಣ್ಣು ಮಕ್ಕಳ ಪಟ್ಟಿಯೇ ಕೊಟ್ಟ.
ಬಡವರು, ಅಸಹಾಯಕರು ಈತನ ಟಾರ್ಗೆಟ್
ಈತನ ಗ್ಯಾಂಗ್ ಟಾರ್ಗೆಟ್ ಬಡವರು ಮತ್ತು ಅಸಹಾಯಕರು. ಈ ನೀಚನ ಗ್ಯಾಂಗ್ ಸಹಾಯಕರು ಹಳ್ಳಿ ಹಳ್ಳಿ ಗಲ್ಲಿ ಗಲ್ಲಿಗೆ ಹೋಗಿ ಬಡ, ಅಸಹಾಯಕ ಹೆಣ್ಣು ಮಕ್ಕಳನ್ನ ಪತ್ತೆ ಹಚ್ಚುತ್ತಾರೆ. ಅವರಿಗೆ ಮದುವೆ ಕನಸು, ಕಾಸಿನ ಆಸೆ ತೋರಿಸಿ ಆಮೇಲೆ ಹೈಜಾಕ್ ಮಾಡ್ತಾರಂತೆ.
1 ಲಕ್ಷದಿಂದ ರೇಟ್ ಫಿಕ್ಸ್ ಮಾಡ್ತಾರೆ!
ಏಜೆಂಟ್'ಗಳು ಬಡ, ಅಸಹಾಯಕ ಹೆಣ್ಣು ಮಕ್ಕಳನ್ನ ಪತ್ತೆ ಹಚ್ಚಿ ಅವರಿಗೆ ಮದುವೆ ಕನಸು, ಕಾಸಿನ ಆಸೆ ತೋರಿಸಿ 1 ಲಕ್ಷದಿಂದ ರೇಟ್ ಫಿಕ್ಸ್ ಮಾಡಿ ಹೆಚ್ಚು ಕಡಿಮೆಯೊಂದಿಗೆ ವ್ಯವಹಾರ ಮುಗಿಸಿ ಸುಲಭವಾಗಿ ರಾಜಸ್ಥಾನ್, ಗುಜರಾತ್, ಮುಂಬೈ ಮಧ್ಯಪ್ರದೇಶ ಮುಂತಾದೆಡೆ ರವಾನಿಸುತ್ತಾರೆ.
ಸ್ಟಿಂಗ್ ಮೂಲಕ ಪತ್ತೆ
ನಮ್ಮ ತಂಡ ಹೆಣ್ಣುಮಗಳನ್ನು ಮಾರಾಟ ಮಾಡೋ ರೀತಿ ನಾಟಕ ಆಡಿ ಬೆಳಗಾವಿ ಕಾರ್ಯನಿರ್ವಹಿಸುತ್ತಿರೋ ಈ ದೊಡ್ಡ ಗ್ಯಾಂಗ್ ಸೀಕ್ರೆಟ್ಸ್ ಬಯಲು ಮಾಡಿತು. ಆ ಗ್ಯಾಂಗ್ ಸಾಕಷ್ಟು ಹೆಣ್ಣು ಮಕ್ಕಳನ್ನು ಮುಂಬೈಗೆ ರವಾನೆ ಮಾಡಲು ರೆಡಿಯಾಗಿರೋದನ್ನ ಪತ್ತೆ ಹಚ್ಚಿತು. ಅತ್ಯಂತ ಕರಾಳವಾಗಿ ವ್ಯವಹರಿಸಿ ಹೆಣ್ಣು ಮಕ್ಕಳ ಮಾನ ಪ್ರಾಣದ ಜೊತೆ ಚಲ್ಲಾಟ ಆಡೋ ಈ ಗ್ಯಾಂಗ್ನ ಚೇಸ್ ಮಾಡಿದ ಕವರ್ಸ್ಟೋರಿ ತಂಡ ತನ್ನ ಬೇಟೆಯಲ್ಲಿ ಭರ್ಜರಿ ಯಶಸ್ಸನ್ನೇ ಸಾಧಿಸಿತು.
ಈ ರೀತಿ ಹಣಕ್ಕಾಗಿ ಹೆಣ್ಣುಮಕ್ಕಳ ಮಾನ, ಪ್ರಾಣದ ಜೊತೆ ಚಲ್ಲಾಟ ಆಡೋ ಒಂದು ಖತರ್ನಾಕ್ ತಂಡವನ್ನು ನಮ್ಮ ಕವರ್ ಸ್ಟೋರಿ ತಂಡ ಹೆಡೆಮುರಿ ಕಟ್ಟಿದೆ. ಈ ಗ್ಯಾಂಗ್ ಇನ್ನಷ್ಟು ಸದಸ್ಯರು, ಪ್ರಮುಖ ಕಿಂಗ್ಪಿನ್ಗಳನ್ನ ಸೆರೆಹಿಡಿಯಬೇಕಾಗಿದೆ. ಈ ಕೆಲಸವನ್ನ ರಾಜ್ಯ ಪೊಲೀಸರು ಮಾಡಬೇಕಾಗಿದೆ.
ವರದಿ: ವಿಜಯಲಕ್ಷ್ಮಿ ಶಿಬರೂರು ಹಾಗೂ ರಂಜಿತ್ ಪಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.